Tuesday, 13th May 2025

Sumalatha Ambareesh: ಜನವರಿ ನಂತರ ಮತ್ತೆ ಸಕ್ರಿಯ ರಾಜಕೀಯಕ್ಕೆ: ಸುಮಲತಾ ಅಂಬರೀಶ್

SumalathaAmbareesh

ಮಂಡ್ಯ: ಜನವರಿ ನಂತರ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳುವುದಾಗಿ ಮಾಜಿ ಸಂಸದೆ ಸುಮಲತಾ (Sumalatha Ambareesh) ತಿಳಿಸಿದ್ದಾರೆ. ಕಾಲಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದೇನೆ. ಹೀಗಾಗಿ ನನಗೆ ಸ್ವಲ್ಪ ರೆಸ್ಟ್ ಬೇಕಿತ್ತು. ಜನವರಿ ಬಳಿಕ ಮಂಡ್ಯದಲ್ಲಿ (Mandy news) ಪಕ್ಷ ಕಟ್ಟುವ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ.

ಚಾಮಂಡೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಸುದ್ಧಿಗಾರರೊಂದಿಗೆ ಮಾತನಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಬೆಲೆ ಕೊಟ್ಟು ಕ್ಷೇತ್ರ ಬಿಟ್ಟುಕೊಟ್ಟೆ. ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ. ಅವಶ್ಯವಿದ್ದಾಗ ನಾಯಕರು ಪಕ್ಷದ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ನಾನು ಯಾವ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ಬಿಜೆಪಿಯಲ್ಲಿ ನನ್ನ ಸ್ಥಾನಮಾನದ ಬಗ್ಗೆ ಬೆಂಬಲಿಗರು ಆಸೆ ಪಡೋದರಲ್ಲಿ ತಪ್ಪೇನಿಲ್ಲ ಎಂದರು.

ಮಂಡ್ಯದಲ್ಲಿ ಬಿಜೆಪಿ ಬಲಪಡಿಸಬೇಕು. ಮೈತ್ರಿ ಇದ್ದಾಗ ಪಕ್ಷ ಸಂಘಟನೆ ಒಂದು ಚಾಲೆಂಜ್ ಆಗಿದೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಹಿಂದಿದೆ. ನನ್ನ ಮುಂದಿನ ರಾಜಕಾರಣ ಮಂಡ್ಯದಲ್ಲಿ ಇರುತ್ತದೆ. ಈ ಬಗ್ಗೆ ಹೈಕಮಾಂಡ್ ಗೆ ತಿಳಿಸಿದ್ದೇನೆ. ಉಪಚುನಾವಣೆ ನಂತರ ಈ ಕಡೆ ಗಮನಹರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯಕ್ಕೆ ಪ್ರಚಾರಕ್ಕೆ ಬಾರದ ವಿಚಾರವಾಗಿ ಯಾರು ಇಂತಹ ಡೇಟ್ ನಲ್ಲಿ ಪ್ರಚಾರಕ್ಕೆ ಬರಬೇಕು ಅಂತಾ ಹೇಳಲಿಲ್ಲ. ನಾನು ಇದನ್ನು ದೊಡ್ಡ ವಿಷಯ ಅಂದುಕೊಂಡಿಲ್ಲ. ಬೇರೆ ಕಡೆ ಪ್ರಚಾರ ಮಾಡಿದ್ದೇನೆ ಎಂದು ತಿಳಿಸಿದರು. ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದಿದ್ದರೆ ನನ್ನನ್ನ ಕರೆಯುತ್ತಿದ್ದರು. ಆದರೆ, ಮೈತ್ರಿ ಅಭ್ಯರ್ಥಿ ಇಗಿರುವುದರಿಂದ ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶ ನೋಡಿ ಕರೆದಿಲ್ಲ ಎನಿಸುತ್ತದೆ. ನಮ್ಮಲ್ಲಿ ಯಾವುದೇ ದ್ವೇಷವಿಲ್ಲ. ಅದು ಹಳೆಯದಾಗಿದೆ ಎಂದರು.