Saturday, 10th May 2025

Self Harming: ಪ್ರೇಯಸಿ ಮನೆ ಮುಂದೆಯೇ ಜಿಲೆಟಿನ್‌ ಸ್ಫೋಟಿಸಿ ಬಾಯ್‌ಫ್ರೆಂಡ್‌ ಆತ್ಮಹತ್ಯೆ

self harming

ಮಂಡ್ಯ : ಪ್ರೇಯಸಿ ತನ್ನನ್ನು ಮಾತನಾಡಿಸುತ್ತಿಲ್ಲ, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮನನೊಂದು ರೊಚ್ಚಿಗೆದ್ದ ಪಾಗಲ್ ಪ್ರೇಮಿಯೊಬ್ಬ ಆಕೆಯ ಮನೆಯ ಮುಂದೆಯೇ ಜಿಲೆಟಿನ್‌ನಿಂದ ಸ್ಪೋಟಿಸಿಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಮಂಡ್ಯ (Mandya Crime News) ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಸವೇಶ್ವರನಗರದ ನಿವಾಸಿ ರಾಮಚಂದ್ರ (20) ಮೃತ ಪ್ರೇಮಿ. ಭೋವಿ ಸಮುದಾಯಕ್ಕೆ ಸೇರಿದ ರಾಮಚಂದ್ರ ಹಾಗೂ ಕಾಳೇನಹಳ್ಳಿ ಮತ್ತೊಂದು ಸಮುದಾಯದ ಅಪ್ರಾಪ್ತೆಯೊಬ್ಬಳು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ವಿವಾಹಕ್ಕೆ ವಯಸ್ಸು ಮತ್ತು ಜಾತಿ ಅಡ್ಡಿಯಾಗಬಹುದೆಂಬ ಕಾರಣಕ್ಕೆ ಒಂದೂವರೆ ವರ್ಷದ ಹಿಂದೆ ಇಬ್ಬರೂ ಮನೆ ಬಿಟ್ಟು ಪರಾರಿಯಾಗಿದ್ದರು. ಅಪ್ರಾಪ್ತೆಯ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಇಬ್ಬರನ್ನೂ ಪತ್ತೆ ಹಚ್ಚಿ ಪೋಕ್ಸೋ ಕೇಸ್ ದಾಖಲಿಸಿ ರಾಮಚಂದ್ರನನ್ನು ಜೈಲಿಗೆ ಕಳುಹಿಸಲಾಗಿತ್ತು.

ಬಳಿಕ ರಾಜಿ ಸಂಧಾನದ ಮೂಲಕ ಇಬ್ಬರನ್ನೂ ಬೇರೆ ಮಾಡಲಾಗಿತ್ತು. ಶನಿವಾರ ತಡರಾತ್ರಿ ಕಾಳೇನಹಳ್ಳಿ ಗ್ರಾಮದಲ್ಲಿ ಅಪ್ರಾಪ್ತೆಯ ಮನೆಯ ಮುಂದೆ ಬಂದ ರಾಮಚಂದ್ರ ಜಿಲೆಟಿನ್ ಸ್ಪೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ಸೇನಾ ವಾಹನ ಉರುಳಿ ಬಿದ್ದು ಗಾಯಗೊಂಡಿದ್ದ ಕರ್ನಾಟಕದ ಮತ್ತೊಬ್ಬ ಯೋಧ ಸಾವು

ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನವೊಂದು 160 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದುದರಿಂದ ಐವರು ಯೋಧರು ಮೃತಪಟ್ಟ ಘಟನೆಯಲ್ಲಿ, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕರ್ನಾಟಕದ ಮತ್ತೊಬ್ಬ ಯೋಧ ಹುತಾತ್ಮರಾಗಿದ್ದಾರೆ.

ಉಧಂಪುರ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 28 ವರ್ಷದ ಯೋಧ ದಿವಿನ್ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಹುತಾತ್ಮರಾಗಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಆಲೂರು ನಿವಾಸಿ ದಿವಿನ್ ಮೃತಪಟ್ಟಿದ್ದು, ಈ ಮೂಲಕ ಅಪಘಾತದಲ್ಲಿ ರಾಜ್ಯದ ನಾಲ್ವರು ಯೋಧರು ಹುತಾತ್ಮರಾದಂತಾಗಿದೆ.

ಜಮ್ಮು ಮತ್ತು ಕಾಶ್ಮೀರದ ಮೆಂಧಾರ್ನ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಮಂಗಳವಾರ ಸಂಜೆ ಯೋಧರನ್ನು ಕರೆದೊಯ್ಯುತ್ತಿದ್ದ ಸೇನಾ ವಾಹನವು ಕಮರಿಗೆ ಬಿದ್ದ ಪರಿಣಾಮ ಐವರು ಯೋಧರು ಸಾವನ್ನಪ್ಪಿದ್ದು, ದುರಂತದಲ್ಲಿ ಕರ್ನಾಟಕದ ಮೂವರು ಈಗಾಗಲೇ ಅಸುನೀಗಿದ್ದಾರೆ. ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್‌ ದಯಾನಂದ ತಿರಕಣ್ಣವರ (45), ಕುಂದಾಪುರ ಬಳಿಯ ಕೋಟೇಶ್ವರ ಬಿಜಾಡಿಯ ಅನೂಪ್ (33) ಮಹಾಲಿಂಗಪುರದ 25 ವರ್ಷದ ಮಹೇಶ್ ಮರಿಗೊಂಡ ಹುತಾತ್ಮರಾದವರು.