Monday, 12th May 2025

Bengaluru News: ನವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲೇಬೇಕಾಗಿದೆ; ಉದ್ಯಮಿ ಒಕ್ಕಲಿಗ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ

Bengaluru News

ಬೆಂಗಳೂರು: ಫಸ್ಟ್ ಸರ್ಕಲ್ (ಎಫ್‌ಸಿ)-ಉದ್ಯಮಿ ಒಕ್ಕಲಿಗ ಕಾರ್ಯಕ್ರಮದ ಮೂರನೇ ಆವೃತ್ತಿಯನ್ನು ಶುಕ್ರವಾರ ಬೆಂಗಳೂರು ನಗರದ (Bengaluru News) ಅರಮನೆ ಮೈದಾನದಲ್ಲಿರುವ ಗಾಯಂತ್ರಿ ಗ್ಯಾಂಡ್‌ ಮತ್ತು ಗಾಯತ್ರಿ ವೃಕ್ಷ ವೇದಿಕೆಯಲ್ಲಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ನಮ್ಮ ಸೃಜನಾತ್ಮಕ ಆಲೋಚನೆಗಳು ಇಂದು ಇಡೀ ಜಗತ್ತನ್ನೇ ಆಳುತ್ತಿವೆ, ಆದರೆ ಅಂದುಕೊಂಡದ್ದನ್ನು ಕಾರ್ಯಗತಗೊಳಿಸದಿದ್ದಲ್ಲಿ ಅವುಗಳಿಗೆ ಯಾವುದೇ ಮೌಲ್ಯವಿರುವುದಿಲ್ಲ. ಫಸ್ಟ್‌ ಸರ್ಕಲ್ ಕೇವಲ ಮೂರು ವರ್ಷಗಳಲ್ಲಿ ಗಮನಾರ್ಹವಾಗಿ ಬೆಳೆದ ಒಂದು ಸೃಜನಶೀಲ ಉಪಕ್ರಮವಾಗಿದೆ. ಕೃತಕ ಬುದ್ಧಿಮತ್ತೆ ಬಳಕೆಯ ಈ ಯುಗದಲ್ಲಿ ನಾವು ನವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಅಗತ್ಯತೆ ಹೆಚ್ಚಿದೆ. ಸಾಂಪ್ರದಾಯಿಕವಾಗಿ ಬೇಸಾಯದಲ್ಲಿ ಬೇರೂರಿರುವ ಒಕ್ಕಲಿಗ ಸಮುದಾಯವು ಪ್ರಸ್ತುತವಾಗಿ ಉಳಿಯಲು ಉದ್ಯಮಶೀಲತೆಯನ್ನು ಅಳವಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನಾಯಕರು ಮತ್ತು ಉದ್ಯಮಿಗಳನ್ನು ಬೆಳೆಸುವಲ್ಲಿ ಗಮನಹರಿಸುವುದರೊಂದಿಗೆ ನಮ್ಮ ಸಮುದಾಯ ಮತ್ತು ಸಮಾಜವನ್ನು ದೊಡ್ಡದಾಗಿ ಸಬಲೀಕರಣಗೊಳಿಸುವಲ್ಲಿ ಫಸ್ಟ್‌ ಸರ್ಕಲ್ ಪ್ರಮುಖ ಪಾತ್ರ ವಹಿಸುತ್ತಿದೆ. ಭವಿಷ್ಯದ ಪೀಳಿಗೆಗೆ ವ್ಯಾಪಾರ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಎಫ್‌ಸಿಯ ಪ್ರಯತ್ನಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಲ್ಲೇಶ್ವರಂ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ, ನಾವು ಸಂಪ್ರದಾಯಗಳೊಂದಿಗೆ ನಾವೀನ್ಯತೆಯನ್ನು ಕೂಡ ಸಮತೋಲನದಲ್ಲಿಟ್ಟುಕೊಳ್ಳಬೇಕು. ಡಿಜಿಟಲ್ ವೇದಿಕೆಗಳು ಮತ್ತು ವೈಜ್ಞಾನಿಕ ಪ್ರಗತಿಗಳು ನಮ್ಮ ಬೆಳವಣಿಗೆಗೆ ಅವಶ್ಯಕವಾಗಿದೆ. ಒಕ್ಕಲಿಗ ಸಮುದಾಯವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ವಿಶೇಷವಾಗಿ ಹವಾಮಾನ ಬದಲಾವಣೆಯು ಕೃಷಿ ಕ್ಷೇತ್ರಕ್ಕೆ ಸವಾಲುಗಳನ್ನು ಒಡ್ಡುತ್ತದೆ. ಆದರೆ ಅವೆಲ್ಲವನ್ನೂ ದಾಟಿ ಯಶಸ್ಸನ್ನು ಸಾಧಿಸುವಂತಾಗಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Glopixs: ಡಿಜಿಟಲ್‌ ಮನರಂಜನೆ ಕ್ಷೇತ್ರಕ್ಕೆ ಗ್ಲೋಪಿಕ್ಸ್‌ ಒಟಿಟಿ; ಲೋಗೊ ಅನಾವರಣ

ಐಆರ್‌ಎಸ್ ಅಧಿಕಾರಿ ಮತ್ತು ಫಸ್ಟ್‌ ಸರ್ಕಲ್‌ನ ಮುಖ್ಯ ಮಾರ್ಗದರ್ಶಕ ಜಯರಾಮ್ ರಾಯಪುರ ಮಾತನಾಡಿ, ಸಂಸ್ಥೆಯ ಈವರೆಗಿನ ಸಾಧನೆಗಳು ಮತ್ತು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ವಿವರಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ 2,000ಕ್ಕೂ ಹೆಚ್ಚು ಉದ್ಯಮಿಗಳು ಎಫ್‌ಸಿಗೆ ಸೇರಿಕೊಂಡಿದ್ದಾರೆ, ಪರಸ್ಪರ ಬೆಳೆಯಲು ಸಹಾಯ ಮಾಡಿದ್ದಾರೆ. ಒಕ್ಕಲಿಗ ಜನಸಂಖ್ಯೆಯು ಒಂದು ಕೋಟಿಗಿಂತ ಹೆಚ್ಚಾಗಿದ್ದು, ಇಂದು ನಾವು ಅಪಾರ ಗ್ರಾಹಕರನ್ನು ಹೊಂದಿದ್ದೇವೆ. ಈ ರೀತಿ ಹೊಸ ಉದ್ಯಮಿಗಳನ್ನು ಒಗ್ಗೂಡಿಸಿ ಮತ್ತು ಬೆಂಬಲಿಸುವ ಮೂಲಕ ನಾವು ಸಮುದಾಯವಾಗಿ ಸ್ವಾವಲಂಬನೆಯನ್ನು ಸಾಧಿಸಬಹುದು. ಮುಂಬರುವ ದಿನಗಳಲ್ಲಿ ಎಫ್‌ಸಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಅದರಲ್ಲಿ ಎಫ್‌ಸಿ ನೆಕ್ಸ್ಟ್‌ ಆಪ್‌ ಕೂಡ, ಇದು 10 ಲಕ್ಷ ಉದ್ಯಮದಾರರನ್ನು ಸಂಪರ್ಕಿಸುವ ಮತ್ತು ಲಿಂಕ್ಡ್‌ಇನ್‌ಗೆ ಹೋಲುವ ಉದ್ಯಮಿಗಳಿಗೆ ಡಿಜಿಟಲ್ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಆಗಿ ಕಾರ್ಯನಿರ್ವಹಿಸುತ್ತದೆ.

ಫಸ್ಟ್‌ ಸರ್ಕಲ್‌ ಸೋರ್ಸಿಂಗ್ ಸಾಮಗ್ರಿಗಳಿಗಾಗಿ FC ಬಿಲ್ಡ್ ಮಾರ್ಟ್ ಅನ್ನು ಪ್ರಾರಂಭಿಸಿದೆ, ಸಣ್ಣ ತಯಾರಕರನ್ನು ಬೆಂಬಲಿಸಲು FC ಬೈ ಮತ್ತು ವೃತ್ತಿಪರ ಸಲಹೆಗಾಗಿ FC ಸಲಹೆಗಾರರನ್ನು ಸಹ ಪ್ರಾರಂಭಿಸಿದೆ. ಮುಂದಿನ 25 ವರ್ಷಗಳಲ್ಲಿ ನಾವು 100 ಕೋಟಿಗಳ ಸಂಯೋಜಿತ ವಹಿವಾಟು ಹೊಂದುವುದರ ಜತೆಗೆ 10 ಲಕ್ಷ ಒಕ್ಕಲಿಗ ಉದ್ಯಮಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆ. 10 ಸಾವಿರ ಉದ್ಯಮದಾರರು, 10 ಕೋಟಿ ವಹಿವಾಟನ್ನು ಹಾಗೂ 1 ಸಾವಿರ ಉದ್ಯಮದಾರರು 100 ಕೋಟಿ ವಹಿವಾಟಿನ ವಾರ್ಷಿಕ ಬೆಳವಣಿಗೆಯನ್ನು ಉತ್ತೇಜಿಸಲು ನಾವು ಒಕ್ಕಲಿಗ ಉದ್ಯಮಿಗಳ ಹಾಗೂ ಸಮುದಾಯದ ಸಮಗ್ರ ಅಂಕಿಅಂಶವನ್ನು ಸಹ ಸಿದ್ದಪಡಿಸುತ್ತಿದ್ದೇವೆ ಎಂದು ತಿಳಿಸಿದರು.

ಪ್ರಾದೇಶಿಕ ವಿಸ್ತರಣೆಗೆ ವೇದಿಕೆ

ಪ್ರಾದೇಶಿಕ ಮಟ್ಟದಲ್ಲಿ ಫಸ್ಟ್‌ ಸರ್ಕಲ್ ವೇಗವಾಗಿ ಬೆಳೆಯುತ್ತಿದ್ದು, ಈಗಾಗಲೇ ಬೆಂಗಳೂರಿನಲ್ಲಿನ ಐದು ಶಾಖೆಗಳು ಸೇರಿದಂತೆ ಒಟ್ಟು 14 ಶಾಖೆಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ದಕ್ಷಿಣ ಕರ್ನಾಟಕದ ಪ್ರತಿ ಜಿಲ್ಲೆ, ಕರಾವಳಿ ಪ್ರದೇಶಗಳು ಮತ್ತು ತಾಲೂಕು ಮಟ್ಟಗಳಿಗೆ ವಿಸ್ತರಿಸಲು ಯೋಜಿಸಿದ್ದೇವೆ. ನಮ್ಮ ಧ್ಯೇಯವೆಂದರೆ ಇಡೀ ಒಕ್ಕಲಿಗ ಉದ್ಯಮಶೀಲ ಸಮುದಾಯವನ್ನು ಒಂದೇ ಸೂರಿನಡಿ ತರುವುದು, ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮತ್ತು ನಮ್ಮಲ್ಲಿರುವ ಅಪಾರ ಗ್ರಾಹಕರ ನೆಲೆಯನ್ನು ಗಟ್ಟಿಗೊಳಿಸುವುದು. ಫಸ್ಟ್‌ ಸರ್ಕಲ್‌ ಮತ್ತೊಂದು ಮಹತ್ವದ ಉಪಕ್ರಮಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಹೂಡಿಕೆದಾರರ ಸಮಾವೇಶದ ಮೂಲಕ ಕೆಲವು ಉದ್ಯಮಿಗಳಿಗೆ ಹಣಕಾಸಿನ ನೆರವು ಒದಗಿಸಲಾಗಿದ್ದು, ಈ ವರ್ಷದ ಮಧ್ಯಭಾಗದಲ್ಲಿ ಮತ್ತೊಂದು ಸಭೆಯನ್ನು ಆಯೋಜಿಸಲು ಯೋಜಿಸಲಾಗಿದೆ ಎಂದು ಜಯರಾಮ್ ರಾಯಪುರ ತಿಳಿಸಿದರು.

ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಮಾತನಾಡಿ, ನಾವು ರಾಜಕಾರಣಿಗಳು ಸಾಧಿಸಲಾಗದ್ದನ್ನು ಎಫ್‌ಸಿ ಒಕ್ಕಲಿಗರನ್ನು ಒಗ್ಗೂಡಿಸಿ, ಸಾಧಿಸಿದೆ. ಈ ಕಾರ್ಯಕ್ರಮವು ಕಳೆದ ಮೂರು ಆವೃತ್ತಿಗಳಲ್ಲಿ ಅಗಾಧವಾಗಿ ಬೆಳೆದಿದೆ, ಅದರ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಒಟ್ಟಾರೆಯಾಗಿ ಒಕ್ಕಲಿಗ ಉದ್ಯಮಿಗಳು 800 ಕೋಟಿ ಮೌಲ್ಯದ ವ್ಯವಹಾರಗಳನ್ನು ಹೊಂದಿದ್ದಾರೆ ಎಂದರು.

ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ. ಗೋಪಾಲಯ್ಯ ಮಾತನಾಡಿ, ಒಗ್ಗಟ್ಟಾಗಿ ಕೆಲಸ ಮಾಡಿದರೆ ಇನ್ನೈದು ವರ್ಷಗಳಲ್ಲಿ ಒಕ್ಕಲಿಗ ಉದ್ಯಮಶೀಲತೆಯಲ್ಲಿ ಕ್ರಾಂತಿ ಸೃಷ್ಟಿಸಿ ಜಾಗತಿಕ ಮಟ್ಟಕ್ಕೇರಬಹುದು. ಮುಂದಿನ ಪೀಳಿಗೆಗೆ ಹಾಗೂ ಕೃಷಿಗೆ ಎಫ್‌ಸಿ ಸರ್ಕಲ್ ಪ್ರಮುಖ ವೇದಿಕೆಯಾಗಿದೆ ಎಂದು ಅಭಿಪ್ರಾಯಟ್ಟರು.

ಎಫ್‌ಸಿ ರಾಜ್ಯಾಧ್ಯಕ್ಷ ನಂದೀಶ್ ರಾಜೇಗೌಡ ಮಾತನಾಡಿ, 14 ಜಿಲ್ಲೆಗಳ ರೈತರು ಏಕೀಕೃತ ಬ್ರ್ಯಾಂಡ್‌ನಡಿಯಲ್ಲಿ ಮಾರಾಟವನ್ನು ಸುಗಮಗೊಳಿಸಲು ಒಗ್ಗೂಡಬೇಕಾದ ಅಗತ್ಯವಿದೆ. ಪ್ರತಿ ಹಳ್ಳಿಯಲ್ಲೂ ಶ್ರೇಣೀಕೃತ ಪ್ಯಾಕೇಜಿಂಗ್ ಮಾಡಲು ಯೋಜಿಸಿದ್ದೇವೆ, ನಂತರ ಅದನ್ನು ಬೆಂಗಳೂರು ಮತ್ತು ಮೈಸೂರಿನಂತಹ ನಗರಗಳಿಗೆ ಸರಬರಾಜು ಮಾಡಲಾಗುವುದು. ಉದಾಹರಣೆಗೆ ಕೋಲಾರದಲ್ಲಿ ಬೆಳೆಯುವ ಟೊಮೆಟೊಗಳು ಮೊದಲು ಕೋಲಾರದ ಸ್ಥಳೀಯ ಬೇಡಿಕೆಯನ್ನು ಪೂರೈಸುತ್ತವೆ ಮತ್ತು ಹೆಚ್ಚುವರಿ ಉತ್ಪಾದನೆಯನ್ನು ಬೆಂಗಳೂರಿಗೆ ಮಾರಾಟ ಮಾಡಲಾಗುತ್ತದೆ. ಕೃಷಿಯಲ್ಲಿ ಬೆಳೆದ ಉತ್ಪನ್ನವನ್ನು ಸಾಗಣೆ ಮಾಡುವುದು ಮತ್ತು ಬೆಲೆ ನಿರ್ವಹಣೆಯಲ್ಲಿ ಹಲವಾರು ಸವಾಲುಗಳಿವೆ. ಈಗಾಗಲೇ 73 ತಾಲೂಕುಗಳಲ್ಲಿ ಈ ರೀತಿಯ ಸಮಸ್ಯೆಗಳನ್ನು ಗುರುತಿಸಲಾಗಿದ್ದು, ಈ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ನಾವು ಎಫ್‌ಸಿ ಹುಟ್ಟು ಹಾಕಿದ್ದೇವೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಎಫ್‌ಸಿ ಹಾಗೂ ಗಂಗಾ ಶುದ್ಧ ಲೋಗೋ ಅನಾವರಣ ಮಾಡಲಾಯಿತು. ಕಾರ್ಯಕ್ರಮವು ಕೃಷಿ, ಅಗ್ರಿಟೆಕ್, ಮಹಿಳಾ ಉದ್ಯಮಶೀಲತೆ, ಆಹಾರ ಮತ್ತು ಆತಿಥ್ಯ, ರಿಯಲ್ ಎಸ್ಟೇಟ್, ನಿರ್ಮಾಣ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳ ವ್ಯಾಪಾರ ಅವಕಾಶಗಳು ಮತ್ತು ಚರ್ಚೆಗಳನ್ನು ಪ್ರದರ್ಶಿಸುವ ಎಕ್ಸ್‌ಪೋವನ್ನು ಸಹ ಒಳಗೊಂಡಿತ್ತು. ಇಡೀ ಎಕ್ಸ್‌ಪೋ ಗ್ರಾಮೀಣ ಜೀವನ ಜನಜೀವನ ಶೈಲಿಯನ್ನು ಅನಾವರಣಗೊಳಿಸುವಂತಿತ್ತು. ಸಾಕಷ್ಟು ಕಿರು ಮತ್ತು ಮಧ್ಯಮ ಉದ್ಯಮಿಗಳಿಗೆ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಮಳಿಗೆ ವ್ಯವಸ್ಥೆ ರೂಪಿಸಲಾಗಿತ್ತು. ಸಾಂಪ್ರದಾಯಿಕ ಎತ್ತಿನ ಗಾಣ ಇಡೀ ಎಕ್ಸ್‌ಪೋ ದ ಪ್ರಮುಖ ಆಕರ್ಷಣೆಯಾಗಿತ್ತು.

ಈ ಸುದ್ದಿಯನ್ನೂ ಓದಿ | EPF Withdrawal: ಪಿಎಫ್ ಹಣ ಹಿಂಪಡೆಯಲು ಬರಲಿದೆ ATM ಕಾರ್ಡ್‌; ಬ್ಯಾಂಕ್‌ನಂತೆ ಕಾರ್ಯ ನಿರ್ವಹಿಸಲಿದೆ EPFO

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎಲ್. ಶಂಕರ್, ಮಾಜಿ ಎಂಎಲ್‌ಸಿ ರಮೇಶ್ ಗೌಡ, ಮುಖಂಡ ಪ್ರೊ ರಾಜೀವ್ ಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಹಾಗೂ ಪದಾಧಿಕಾರಿಗಳು, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಎಫ್ ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ಸಮುದಾಯದ ಅನೇಕ ಮುಖಂಡರು ಮತ್ತು ಇತರರು ಉಪಸ್ಥಿತರಿದ್ದರು.