Sunday, 11th May 2025

Rishab Pant: ಆಕ್ಸಿಡೆಂಟ್‌ನಲ್ಲಿ ತನ್ನ ಜೀವ ಉಳಿಸಿದವರಿಗೆ ರಿಷಬ್ ಪಂತ್ ನೀಡಿದ ಕೊಡುಗೆ ನೋಡಿ!

rishab pant

ಮುಂಬಯಿ: ಭೀಕರ ಅಪಘಾತದಲ್ಲಿ (Road Accident) ತೀವ್ರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ತನ್ನ ಜೀವ ಉಳಿಸಲು ನೆರವಾದ ಇಬ್ಬರು ಯುವಕರನ್ನು ಕ್ರಿಕೆಟರ್‌ (Cricketer) ರಿಷಬ್‌ ಪಂತ್‌ (Rishab Pant) ಮರೆತಿಲ್ಲ. ಅವರನ್ನು ನೆನಪಿಟ್ಟುಕೊಂಡು ಕೃತಜ್ಞತಾಪೂರ್ವಕವಾಗಿ ಸ್ಪಂದಿಸಿದ್ದಾರೆ. ಅವರು ನೀಡಿರುವ ಗಿಫ್ಟ್‌ನ ವಿಡಿಯೊ ಇದೀಗ ವೈರಲ್‌ (Viral video) ಆಗುತ್ತಿದೆ.

ಡಿಸೆಂಬರ್ 30, 2022ರಂದು ದುರ್ಘಟನೆ ನಡೆದಿತ್ತು. ಟೀಂ ಇಂಡಿಯಾದ ವಿಕೆಟ್​ಕೀಪರ್, ಬ್ಯಾಟ್ಸ್‌ಮನ್ ರಿಷಬ್ ಪಂತ್ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು. ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದ ರಿಷಬ್ ಪಂತ್ ಚಲಾಯಿಸುತ್ತಿದ್ದ ಕಾರು, ರಸ್ತೆಯಲ್ಲಿ ಪಲ್ಟಿ ಹೊಡೆದು ಬೆಂಕಿಗೆ ಆಹುತಿಯಾಗುತ್ತಿತ್ತು. ಆದರೆ ಅಂತಹ ಭೀಕರ ಅಪಘಾತದ ನಡುವೆಯೂ ಸಾವನ್ನು ಗೆದ್ದು ಬಂದಿದ್ದ ರಿಷಬ್ ಪಂತ್​ಗೆ ಮರು ಹುಟ್ಟು ಸಿಗಲು ಕಾರಣರಾಗಿದ್ದವರು ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಇಬ್ಬರು ಯುವಕರು.

ಗಂಭೀರ ಗಾಯಗಳಿಂದ ನರಳುತ್ತಿದ್ದ ಪಂತ್ ಅವರನ್ನು ಕಾರಿನಿಂದ ಹೊರತಂದು, ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದ ಆ ಇಬ್ಬರು ಯುವಕರ ಹೆಸರು ರಜತ್ ಮತ್ತು ನಿಶು. ಅಪಘಾತದಿಂದ ಬದುಕುಳಿದು ಚಿಕಿತ್ಸೆ ಪಡೆದು ಮರಳಿ ಕ್ರಿಕೆಟ್‌ ಟೀಮ್‌ಗೆ ಬಂದಿರುವ ದ ರಿಷಬ್ ಪಂತ್, ಆ ಬಳಿಕ ಈ ಇಬ್ಬರಿಗೂ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳು ವಿಶೇಷ ವರದಿ ಮಾಡಿವೆ.

ಕಾರು ಅಪಘಾತದಿಂದ ಸಂಪೂರ್ಣ ಚೇತರಿಸಿಕೊಂಡ ಬಳಿಕ, ತನ್ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದ ರಜತ್ ಮತ್ತು ನಿಶು ಅವರನ್ನು ಭೇಟಿಯಾಗಿದ್ದ ಪಂತ್, ಅವರಿಬ್ಬರಿಗೂ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಪಂತ್ ನೀಡಿದ ಈ ಪ್ರೀತಿಯ ಉಡುಗೊರೆಯನ್ನು ಸ್ಮರಣೀಯಗೊಳಿಸಿರುವ ಈ ಇಬ್ಬರು ತಮ್ಮ ತಮ್ಮ ಸ್ಕೂಟರ್ ಮೇಲೆ ರಿಷಬ್ ಪಂತ್ ಹೆಸರನ್ನು ಬರೆಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪಂತ್ ಅವರ ಜೀವ ಕಾಪಾಡಿದ ರಜತ್ ಮತ್ತು ನೀಶು ಅವರಿಗೆ, ಪಂತ್ ಅವರ ಅಭಿಮಾನಿಗಳು ಸಲ್ಯೂಟ್ ಹೊಡೆದಿದ್ದಾರೆ.