Wednesday, 14th May 2025

ವಂಚನೆ ಪ್ರಕರಣ: ಸಿನಿಮಾ ನಿರ್ದೇಶಕ ಗುರುಪ್ರಸಾದ್ ಬಂಧನ

ಬೆಂಗಳೂರು: ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾಗಳ ನಿರ್ದೇಶಕ ಗುರುಪ್ರಸಾದ್ ಅನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗುರುಪ್ರಸಾದ್ ಅನ್ನು ಗಿರಿ‌ನಗರ ಪೊಲೀಸರು ಬಂಧಿಸಿದ್ದಾರೆ. ಕೆಲ ಸಮಯದ ಹಿಂದೆ ಶ್ರೀನಿವಾಸ್ ಹೆಸರಿನ ವ್ಯಕ್ತಿಯೊಬ್ಬರು ಗುರುಪ್ರಸಾದ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ದ್ದರು.

ಪ್ರಕರಣದ ವಿಚಾರಣೆಗೆ ಗುರುಪ್ರಸಾದ್ ಸತತವಾಗಿ ಗೈರಾಗಿದ್ದರಿಂದ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸ ಲಾಗಿತ್ತು. ಇದೇ ಕಾರಣಕ್ಕೆ ಗಿರಿ ನಗರ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿದ್ದು, ಪ್ರಾಥಮಿಕ ವಿಚಾರಣೆ ಹಾಗೂ ತಪಾಸಣೆ ಬಳಿಕ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲಾಗುತ್ತದೆ.

ಶ್ರೀನಿವಾಸ್ ಅವರಿಗೆ ಗುರುಪ್ರಸಾದ್ 30 ಲಕ್ಷ ಹಣ ನೀಡಬೇಕಿತ್ತು ಎನ್ನಲಾಗಿದೆ. ಹಣ ಪಡೆಯುವಾಗ ಗುರುಪ್ರಸಾದ್ ನೀಡಿದ್ದ ಚೆಕ್ ಬೌನ್ಸ್ ಆಗಿದ್ದು ಪ್ರಕರಣವು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ವಿಚಾರಣೆಗೆ ಪದೇ ಪದೇ ಗುರುಪ್ರಸಾದ್ ಗೈರಾಗಿದ್ದ ಕಾರಣ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.