Monday, 12th May 2025

ಉತ್ತರ ಕನ್ನಡದಲ್ಲಿ 20 ಸೋಂಕಿತರು

ಶಿರಸಿ:

ಇಂದು 20 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 491ಕ್ಕೆ ಏರಿದೆ.

ಇಂದು ಭಟ್ಕಳದಲ್ಲಿ 13 ಪ್ರಕರಣಗಳು ದೃಢವಾಗಿದ್ದು, ಯಲ್ಲಾಪುರದ ೪, ಹಳಿಯಾಳದ ೨ ಹಾಗೂ ಕಾರವಾರದ ಓರ್ವನಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.

ಜಿಲ್ಲಾಸ್ಪತ್ರೆಯಲ್ಲಿ ಆತಂಕ:

ಬೇರೆ ಕಾಯಿಲೆಯಿಂದ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳಿಗೂ ಸೋಂಕು ತಗುಲಿರಬಹುದೇ ಎಂಬ ಆತಂಕ ಮೂಡಿದೆ. ಮಹಿಳೆಯಲ್ಲಿ ಜ್ವರ ಸಂಬಂಧಿ ಲಕ್ಷಣಗಳಿದ್ದರೂ ಸೋಂಕಿತೆಯ ಸಂಬಂಧಿಗಳು ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ತಪಾಸಣೆ ವೇಳೆ ಜ್ವರ ಇದ್ದ ಕಾರಣ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕಿತೆಯ ಸಂಪರ್ಕಕ್ಕೆ ಬಂದಿದ್ದ ವೈದ್ಯರು, ಸಿಬ್ಬಂದಿಗಳಿಗೂ ಕೊರೊನಾ ಸೋಂಕು ದಾಳಿಯಿಟ್ಟಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಭಟ್ಕಳದ ವ್ಯಕ್ತಿ ಸಾವು:
ಭಟ್ಕಳ ತಾಲೂಕಿನ 62 ವರ್ಷದ ಕೊರೊನಾ ಸೋಂಕಿಯ ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು ಎನ್ನಲಾಗಿದೆ. ವ್ಯಕ್ತಿಯ ದೇಹ ಚಿಕಿತ್ಸೆಗೆ ಸ್ಪಂದಿಸದೇ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ತಿಳಿಸಿದೆ.

ಈ ಸಾವಿನೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸತ್ತವರ ಸಂಖ್ಯೆ ಮೂರಕ್ಕೇರಿದ್ದು, ಇಬ್ಬರು ಮಂಗಳೂರಿನಲ್ಲಿ ಮೃತರಾಗಿದ್ದರೆ, ಶಿರಸಿ ಮೂಲದ ಓರ್ವ ಕಾರವಾದಲ್ಲಿ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *