Sunday, 11th May 2025

ದೇಶವನ್ನು ವಿಶ್ವಗುರುವಾಗಿಸಲು ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು: ಹರ್ಷನಾರಾಯಣ್

ತುಮಕೂರು: ಭಾರತವು ಇಂದು ವಿಶ್ವದ ಗಮನವನ್ನು ಸೆಲೆಯುತ್ತಿದ್ದು, ವಿಶ್ವಗುರುವಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಿಕಟಪೂರ್ವ ರಾಷ್ಟ್ರೀಯ ಕಾರ್ಯದರ್ಶಿ ಹರ್ಷನಾರಾಯಣ್ ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಆಯೋಜಿಸಿದ್ದ   ಎಬಿವಿಪಿ   ಜಿಲ್ಲಾ ಸಮ್ಮೇ ಳನದಲ್ಲಿ ಮಾತನಾಡಿದ ಅವರು,  ಭಾರತವನ್ನು ಎಲ್ಲಾ ದೇಶಗಳು ಗೌರವದಿಂದ ನೋಡುತ್ತಿವೆ. ಇಲ್ಲಿ ಸಾಮಾಜಿಕ ಸಮಾನತೆ, ಆರ್ಥಿಕ ಪ್ರಗತಿ ಮತ್ತು ಶೈಕ್ಷಣಿಕ ಉನ್ನತಿ ಯನ್ನು ಸಾಧಿಸಲು ಈ ದೇಶದ ಯುವ ಸಮುದಾಯವಾದ ವಿದ್ಯಾರ್ಥಿ ಸಮುದಾಯದ ಕೊಡುಗೆ ಅತ್ಯವಶ್ಯಕ ಎಂದರು.
 ಬೆಳ್ಳಾವೆಯ ಶ್ರೀ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಸುಸಂಸ್ಕೃತರಾಗಿ ತಮ್ಮ ತಂದೆ ತಾಯಿಯರನ್ನು ನೋಡಿಕೊಳ್ಳು ವಂತಾಗಬೇಕು. ಮೆಕಾಲೆ ಶಿಕ್ಷಣ ಪದ್ದತಿಯು ಭಾರತೀಯ ಮೌಲ್ಯಗಳನ್ನು ಈಗಾಗಲೇ ನಾಶಮಾಡಿದ್ದು ಸಮಾಜ ಸಂವೇದನೆಯನ್ನು ಕಳೆದುಕೊಂಡಿದೆ ಇದನ್ನು ಮರು ಸ್ಥಾಪಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ ಎಂದರು.
ಜಿಲ್ಲಾ ಸಮ್ಮೇಳನದ ಅಂಗವಾಗಿ ನಗರದ ಟೌನ್‌ಹಾಲ್ ವೃತ್ತದಿಂದ ಎಂಜಿ ರಸ್ತೆ ಮಾರ್ಗ ವಾಗಿ, ಸ್ವತಂತ್ರ ಚೌಕವನ್ನು ಬಳಸಿ ಕೊಂಡು ಅಶೋಕ ರಸ್ತೆಯ ಮೂಲಕ ಗುಬ್ಬಿವೀರಣ್ಣ ರಂಗಮಂದಿರದವರೆಗೂ ನೂರಾರು ವಿದ್ಯಾರ್ಥಿಗಳು ಶೋಭಾಯಾತ್ರೆಯ ಮೂಲಕ ಘೊಷಣೆಗಳನ್ನು ಕೂಗುತ್ತಾ ತೆರಳಿದರು.
ಸಮಾರಂಭದಲ್ಲಿ ವಿದ್ಯಾವಾಹಿನಿ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ  ರವೀಂದ್ರ ,ಪ್ರೊ. ಶ್ರೀನಿವಾಸರಾವ್, ಡಾ.ಪೃಥ್ವೀರಾಜ, ಗಣೇಶ್, ಶ್ರೀನಿವಾಸ, ಅಪ್ಪು ಪಾಟೀಲ್, ಪುನೀತ್, ಮನೋಜ್, ನವ್ಯಶ್ರೀ, ಸ್ಪೂರ್ತಿ, ಗೀತಾ, ಅರ್ಪಿತಾ, ಕಲ್ಯಾಣ್ ಇತರರಿದ್ದರು.