ತುಮಕೂರು: ಕುಣಿಗಲ್ ರಸ್ತೆಯ ಬಿದರಕಟ್ಟೆ ಬಳಿ ಇರುವ ತುಮಕೂರು ವಿವಿ ನೂತನ ಕ್ಯಾಂಪಸ್ ಜ್ಞಾನಸರಿಗೆ ತುಮಕೂರು ನಗರದಿಂದ ವಿದ್ಯಾರ್ಥಿಗಳು ತೆರಳು ಆಗಿರುವ ಸಾರಿಗೆ ಸಮಸ್ಯೆ ಕುರಿತಂತೆ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಹಾಗೂ ವಿವಿಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅವರೊಂದಿಗೆ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಜತೆ ಚರ್ಚೆ ನಡೆಸಿದರು.
ಭೇಟಿಯಾಗಿ ನೂತನ ಕ್ಯಾಂಪಸ್ಗೆ ತೆರಳಲು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಕುರಿತಂತೆ ಚರ್ಚೆ ನಡೆಸಿ, ಪರಿಹರಿಸುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ, ತುಮಕೂರು ವಿಶ್ವ ವಿದ್ಯಾಲಯದ ನೂತನ ಕ್ಯಾಂಪಸ್ನಲ್ಲಿ ಅ.21ರಿಂದ ವಿಜ್ಞಾನಕ್ಕೆ ಸಂಬಂಧಿಸಿದ 12 ವಿಷಯಗಳ ಪಾಠ ಪ್ರವಚನದ ಆರಂಭ ಗೊಂಡಿದೆ.ತುಮಕೂರು ನಗರದಿಂದ ಜ್ಞಾನಸಿರಿ ಕ್ಯಾಂಪಸ್ ಸುಮಾರು 18 ಕಿ.ಮಿ.ದೂರದಲ್ಲಿದ್ದು, ಕುಣಿಗಲ್ ತುಮಕೂರು ರಸ್ತೆಯ ನಾಗವಲ್ಲಿ ಗ್ರಾಮದಿಂದ 2.5.ಕಿ.ಮಿ ಇದೆ. ವಿವಿಗೆ ತನ್ನದೇ ಆದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ ಬಸ್ಸುಗಳನ್ನೇ ಆಶ್ರಯಿಸಬೇಕಾಗಿದೆ.
ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಕ್ಯಾಂಪಸ್ ತಲುಪಲು ಆಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಭೇಟಿಯಾಗಿ ಅವರಿಗೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಮನವರಿಕೆ ಮಾಡಿಕೊಡಲಾಗಿದೆ.ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಒಂದೆರಡು ದಿನದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿ ಬಸ್ ವ್ಯವಸ್ಥೆಯಾಗಲಿದೆ ಎಂಬ ಭರವಸೆ ಇದೆ ಎಂದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ,ತುಮಕೂರು ವಿವಿಯ ನೂತನ ಬಿದರಕಟ್ಟೆ ಕ್ಯಾಂಪಸ್ಗೆ ಕೆಲ ವಿಷಯಗಳ ಸ್ಥಳಾಂತರಗೊಂಡಿವೆ. ಅಲ್ಲಿಗೆ ತರಳಲು ವಿದ್ಯಾರ್ಥಿಗಳಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಅಧಿಕಾರಿ ಗಳಿಗೆ ಮನವಿ ಮಾಡಿದ್ದು, ಅವರು ಸಹ ಸ್ಪಂದಿಸಿದ್ದಾರೆ. ಪ್ರತಿದಿನ 9 ಗಂಟೆಯಿಂದ 11 ಗಂಟೆಯವರೆಗೆ ಐದು ಬಸ್ ಮತ್ತು ಸಂಜೆ 3 ಗಂಟೆಯಿAದ 5 ಗಂಟೆಯವರೆಗೆ ಐದು ಬಸ್ಸುಗಳನ್ನು ಓಡಿಸಲು ಒಪ್ಪಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಓಡಿಸಲು ಸಹ ಒಪ್ಪಿದ್ದಾರೆ ಎಂದರು.
ನಿಯಂತ್ರಾಣಾಧಿಕಾರಿ ಚಂದ್ರಶೇಖರ್ ಮಾತನಾಡಿ,ತುಮಕೂರು ವಿವಿಯ ಕೋರಿಕೆ ಮೇರೆಗೆ ಸೋಮವಾರದಿಂದ ಎರಡು ಕೆ.ಎಸ್.ಆರ್.ಟಿ.ಸಿ. ಬಸ್ಸುಗಳನ್ನು ವಿವಿ ಕ್ಯಾಂಪಸ್ಗೆ ಓಡಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ವಿದ್ಯಾರ್ಥಿ ಗಳ ಸಂಖ್ಯೆ ಹೆಚ್ಚಾದ ಕಾರಣ ಕೆಲ ತೊಂದರೆಯಾಗಿತ್ತು. ಕುಲಪತಿಗಳು ಮತ್ತು ಸಾರ್ವಜನಿಕರು, ವಿದ್ಯಾರ್ಥಿಗಳು ತಮಗಾಗುತ್ತಿರುವ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ.ಹಾಗಾಗಿ ಮಂಗಳವಾರದಿಂದ ಪ್ರತಿ ಅರ್ಧಗಂಟೆಗೆ ಒಂದು ಬಸ್ನಂತೆ ಬೆಳಗ್ಗೆ 9 ರಿಂದ ಮಧ್ಯಾಹ್ನ12ರವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಐದು ಟ್ರಿಫ್ ಕೆ.ಎಸ್.ಅರ್.ಟಿ.ಸಿ ಬಸ್ಗಳು ಜ್ಞಾನಸಿರಿ ಕ್ಯಾಂಪಸ್ಗೆ ಸಂಚರಿಸಲಿವೆ. ಅಲ್ಲದೆ ತುಮಕೂರು ಕುಣಿಗಲ್ ಮಾರ್ಗ ದಲ್ಲಿ ಕ್ಯಾಂಪಸ್ನ ಸಂಪರ್ಕ ರಸ್ತೆ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ಗಳ ನಿಲುಗಡೆಗೆ ಕೋರಿದ್ದಾರೆ. ಅದನ್ನು ಸಹ ಶೀಘ್ರದಲ್ಲಿಯೇ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ತುಮಕೂರು ವಿವಿ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ.ಕರಿಯಣ್ಣ, ಕಾಂಗ್ರೆಸ್ ಮುಖಂಡರಾದ ರೇವಣ್ಣ ಸಿದ್ದಯ್ಯ, ಗೀತಾ ರುದ್ರೇಶ್, ನಟರಾಜ ಶೆಟ್ಟಿ, ಅದಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: Tumkur University: ತುಮಕೂರು ವಿವಿ ವಿಜ್ಞಾನ ವಿಭಾಗ ಬಿದರಕಟ್ಟೆಗೆ ಸ್ಥಳಾಂತರ: ಕುಲಪತಿ ವೆಂಕಟೇಶ್ವರಲು