Sunday, 11th May 2025

Tumkur News: ನಮ್ಮ ನೀರು ನಮ್ಮ ಹಕ್ಕು, ರಕ್ತ ಕೊಟ್ಟೆವು ನೀರು ಕೊಡುವುದಿಲ್ಲ

*ಮೊದಲನೇ ದಿನದ ಪಾದಯಾತ್ರೆ ಯಶಸ್ವಿ*

ಗುಬ್ಬಿ: ಜಿಲ್ಲೆಯ ಜೀವನಾಡಿ ಹೇಮಾವತಿ ನೀರು ಬೇರೆಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಅವೈಜ್ಞಾನಿಕವಾಗಿ ಕೊಂಡೊಯ್ಯುವ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಬೃಹತ್ ಪಾದಯಾತ್ರೆ ಶನಿವಾರ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸಾಗರನಹಳ್ಳಿ ಗೇಟ್ ಬಳಿ ಮಠಾಧೀಶರ ನೇತೃತ್ವದಲ್ಲಿ ಆರಂಭಿಸಲಾಗಿದೆ.

ಎನ್ ಡಿಎ ಒಕ್ಕೂಟ ಬಿಜೆಪಿ ಹಾಗೂ ಜೆಡಿಎಸ್ ಕರೆ ನೀಡಿದ್ದ ಬೃಹತ್ ಪಾದಯಾತ್ರೆಗೆ ಎರಡೂ ಪಕ್ಷದ ಕಾರ್ಯ ಕರ್ತರು, ಮುಖಂಡರು ಹಾಗೂ ರೈತ ಬಾಂಧವರು ಒಗ್ಗೂಡಿ ತಂಡೋಪತಂಡವಾಗಿ ಯಾತ್ರೆಗೆ ಸೇರುತ್ತಿದ್ದಾರೆ. ನೂರಾರು ಸಂಖ್ಯೆಯಿಂದ ಆರಂಭವಾಗಿ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ನಿಟ್ಟೂರು ಸರ್ಕಲ್ ಬಳಿಗೆ ಹುರುಪಿನಿಂದ ಸಾಗಿದೆ. ಬಹುತೇಕ ಎಲ್ಲಾ ಮುಖಂಡರು ನಡೆದು ಸಂಜೆ ವೇಳೆಗೆ 22 ಕಿಮೀ ಕ್ರಮಿಸಿದ್ದಾರೆ. ವಯೋಮಾನದ ಲೆಕ್ಕವಿಲ್ಲದೆ ಎಲ್ಲಾ ವಯಸ್ಸಿನ ರೈತರು ಪಾಲ್ಗೊಂಡಿರುವುದು ವಿಶೇಷ ಎನಿಸಿದೆ.

ಪಟ್ಟಣದ ಬಸ್ ಸ್ಟ್ಯಾಂಡ್ ಬಳಿ ಪ್ರತಿಭಟನಾ ಸಭೆ ನಡೆಸಿ ಮಾತನಾಡಿ ಶಾಸಕ ಎಂ.ಟಿ.ಕೃಷ್ಣಪ್ಪ ತಾಕತ್ ಇದ್ದರೆ ನೀರು ತೆಗೆದುಕೊಂಡು ಹೋಗಲಿ. ಅಕ್ರಮ ಮಾಡಿಯೇ ಅಭ್ಯಾಸ ಆಗಿರುವ ಡಿಕೆಶಿ ಅವರಿಗೆ ಈ ಹೇಮಾವತಿ ಲಿಂಕ್ ಕೆನಾಲ್ ಅಕ್ರಮವಾಗಿ ನಡೆಸಿರುವುದು ಸಾಕ್ಷಿಯಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಯೋಜನೆ ಬಗ್ಗೆ ಹೋರಾಟ ಮಾಡುತ್ತೇನೆ. ಜಿಲ್ಲೆಯ ಕೆಲ ಶಾಸಕರು ನನ್ನ ಜೊತೆ ಇದ್ದು ಬಾವಿಗಿಳಿದು ಅಹೋರಾತ್ರಿ ಧರಣಿ ನಡೆಸಿ ಈ ಕಾಮಗಾರಿ ಕೈ ಬಿಡಲು ಆಗ್ರಹಿಸುತ್ತೇವೆ ಎಂದರು.

ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಹೇಮಾವತಿ ನಮ್ಮ ಹಕ್ಕು. ನಮ್ಮ ಪಾಲಿನ ನೀರು ನೀವು ತೆಗೆದುಕೊಳ್ಳುವ ಡಿಕೆಶಿ ಅವರ ಹಠಕ್ಕೆ ಸೆಡ್ಡು ಹೊಡೆಯಲು ಜಿಲ್ಲೆಯ ರೈತರು ಸಿದ್ಧರಿದ್ದಾರೆ. ನಮ್ಮ ಹೆಣಗಳ ಮೇಲೆ ನೀರು ಹರಿಸಿ ಕೊಳ್ಳಿ. ಹೀಗೆ ದೌರ್ಜನ್ಯ ಮಾಡುವ ಕಾಂಗ್ರೆಸ್ ಸರ್ಕಾರ ತುಮಕೂರು ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುತ್ತಿದೆ. ರಾಮನಗರ ಜಿಲ್ಲೆಯ ರೈತರಿಗೂ ನೀರು ಕೊಡಿ. ನೀರಿನ ಹಂಚಿಕೆ ನ್ಯಾಯ ಬದ್ದವಾಗಿರಲಿ. ಹೇಮಾವತಿ ಡ್ಯಾಂ ಮೂಲಕ ನೇರ ಪೈಪ್ ಲೈನ್ ಮಾಡಿಕೊಳ್ಳಲಿ. ಅಥವಾ ಕೆ ಆರ್ ಎಸ್ ಡ್ಯಾಂ ಮೂಲಕ ತೆಗೆದುಕೊಳ್ಳಲಿ. ಅದು ಬಿಟ್ಟು ನಮ್ಮ ರೈತರಿಗೆ ವಿಷ ಕೊಡುವುದು ಅನ್ಯಾಯ ಎಂದು ಗುಡುಗಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಹೇಮಾವತಿ ನೀರಿನ ಹರಿಕಾರ ಎನಿಸಿಕೊಳ್ಳಲು ಗುಬ್ಬಿ ಶಾಸಕರು ಕೂಡಲೇ ರಾಜೀನಾಮೆ ಸಲ್ಲಿಸಿ ರೈತರೊಂದಿಗೆ ಹೋರಾಟಕ್ಕೆ ಬರಲಿ. ಸರ್ಕಾರ ಜೊತೆ ಮಾತನಾಡುತ್ತೇನೆ ಎನ್ನುತ್ತಾರೆ. ಡಿ.ಕೆ.ಶಿವಕುಮಾರ್ ಅವರ ಮುಂದೆ ಮಾತನಾಡುವ ಧೈರ್ಯ ಇಲ್ಲವಾಗಿದೆ. ಈಗಲೂ ಅವರು ಎಲ್ಲಿರು ತ್ತಾರೆ ಎಂಬುದು ತಾಲ್ಲೂಕಿನ ಜನತೆಗೆ ಗೊತ್ತು. ಶಿಷ್ಟಾಂಗ ನಮಸ್ಕಾರ ಮಾಡುತ್ತೇನೆ. ಮೊದಲು ಸುಳ್ಳು ಹೇಳದೇ ರೈತರ ನ್ಯಾಯಕ್ಕೆ ದನಿಯಾಗಿ ನಿಲ್ಲಬೇಕು. ಹಾಗೇ ನಿಂತರೆ ಮುಂದಿನ ಚುನಾವಣೆ ನಿಮ್ಮನ್ನು ಮತ್ತೇ ಗೆಲ್ಲಿಸುತ್ತೇವೆ. ತೋಟದಲ್ಲಿ ಕೂತು ಏನೇನೂ ಮಾಡ್ತೀರಿ ಎಲ್ಲರಿಗೂ ತಿಳಿದಿದೆ ಎಂದು ಛೇಡಿಸಿದರು.

ಜೆಡಿಎಸ್ ಮುಖಂಡ ಬಿ.ಸಿ.ನಾಗರಾಜು ಮಾತನಾಡಿ, ಹೇಮಾವತಿ ನೀರಿಗಾಗಿ ಸಲ್ಲದ ರಾಜಕಾರಣ ಬದಿಗೊತ್ತಿ ಗುಬ್ಬಿ ಶಾಸಕರು ಮುಂದೆ ಬರಬೇಕು. ಕಾವೇರಿ ಹೋರಾಟದಂತೆ ಮುಂದಿನ ದಿನಗಳು ಕಳೆಯಬೇಕಿದೆ. ಚುನಾವಣೆ ಸಮಯ ದಲ್ಲಿ ಕುಕ್ಕರ್ ಹಂಚಿ, ಕುಂಕುಮ ಹಂಚಿ ಆದರೆ ನಿಮ್ಮನ್ನು 25 ವರ್ಷದಿಂದ ಗೆಲ್ಲಿಸಿದ ರೈತರ ಪರ ಈಗ ನಿಲ್ಲದೇ ಸರ್ಕಾರದ ಒಂದು ಭಾಗ ಎನ್ನುತ್ತೀರಿ. ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕದೆ ನೀರುಗಂಟಿ ಎಂಬ ಹೆಸರು ಕೊಟ್ಟಿದ್ದಾರೆ. ಅದಕ್ಕೆ ಬಂದು ಹೋರಾಟಕ್ಕೆ ಬನ್ನಿ ಎಂದು ಕಿಡಿಕಾರಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಹೇಮಾವತಿ ನೀರು  ಅನ್ಯಾಯ ಆದರೆ ಅದು ಗುಬ್ಬಿ ತಾಲ್ಲೂಕಿಗೆ ಅತಿ ಹೆಚ್ಚು ಆಗಲಿದೆ. ಈ ಬಗ್ಗೆ ನಮ್ಮ ರೈತರು ಎಚ್ಚೆತ್ತುಕೊಳ್ಳಬೇಕು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ನಮ್ಮ ದನಿಯೇ ಚರ್ಚೆ ಆಗಬೇಕು. ಈ ಹೋರಾಟಕ್ಕೆ ಬೆಂಬಲ ಸೂಚಿಸುವ ರೈತರು ಮುಂದಿನ ಹೋರಾಟಕ್ಕೆ ಹತ್ತು ಪಟ್ಟು ಸಂಖ್ಯೆ ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ಜಿಲ್ಲೆಯ ಶಾಸಕರು ಬೆಳಗಾವಿಯಲ್ಲಿ ಈ ಬಗ್ಗೆ ಚರ್ಚಿಸಿ ಕಾಮಗಾರಿ ನಿಲ್ಲಿಸಬೇಕು. ಮುಖ್ಯನಾಲೆಯ ಮೂಲಕವೇ ನೀರು ತೆಗೆದುಕೊಂಡು ಹೋಗಲಿ. ಅದಕ್ಕೆ ಯಾರೂ ಅಭ್ಯಂತರ ಮಾಡುತ್ತಿಲ್ಲ. ಹೇಮಾವತಿ ನಮ್ಮ ಹಕ್ಕಿನ ನೀರು ಪಡೆಯಲು ಈಗ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಿದ್ದೇವೆ. ಹೋರಾಟ ತೀವ್ರತೆ ಪಡೆದುಕೊಂಡಲ್ಲಿ ವಿಧಾನಸೌಧ ಮುತ್ತಿಗೆ ಹಾಕಲು ಸಜ್ಜಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಪಾದಯಾತ್ರೆಯಲ್ಲಿ ವಿರಕ್ತ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಬೆಳ್ಳಾವಿ ಮಠದ ಶ್ರೀ ಕಾರದ ಬಸವ ಸ್ವಾಮೀಜಿಗಳು, ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ ನೇತೃತ್ವದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಸುರೇಶ್ ಬಾಬು, ಮುಖಂಡರಾದ ಬೆಟ್ಟಸ್ವಾಮಿ, ಹೊನ್ನ ಗಿರಿಗೌಡ, ಚಂದ್ರಶೇಖರಬಾಬು,  ಎನ್.ಸಿ.ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ಕೆ.ಟಿ.ಶಾಂತಕುಮಾರ್, ಪಂಚಾಕ್ಷರಿ, ಚಿಕ್ಕವೀರಯ್ಯ ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿದ್ದರು.