Saturday, 10th May 2025

ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದ ಪ್ರಿಯಾಂಕಾ ಗಾಂಧಿ

ಮೈಸೂರು: ಚುನಾವಣೆ ನಿಮಿತ್ತ ಮೈಸೂರಿನಲ್ಲಿ ಪ್ರಚಾರ ಕೈಗೊಂಡಿರುವ ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬುಧವಾರ ಮೈಸೂರಿನ ಅಗ್ರಹಾರ ದಲ್ಲಿರುವ ಮೈಲಾರಿ ಹೋಟೆಲ್‌ನಲ್ಲಿ ದೋಸೆ ತಿಂದರು.

ಮಂಗಳವಾರ ನರಸೀಪುರದ ಹೆಳವರಹುಂಡಿಯಲ್ಲಿ ಪ್ರಚಾರ ಕೈಗೊಂಡಿದ್ದ ಅವರು ಬುಧವಾರ ಮೈಸೂರಿನ ಅಗ್ರಹಾರದಲ್ಲಿರುವ ಖ್ಯಾತ ಮೈಲಾರಿ ಹೋಟೆಲ್‌ಗೆ ತೆರಳಿ ದೋಸೆ ಸವಿದರು.

ಈ ವೇಳೆ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ರಣದೀಪ್‌ ಸರ್ಜೇವಾಲಾ ಹಾಗೂ ಎಸ್‌ಟಿ ಸೋಮಶೇಖರ್‌ ಇತರರು ಇದ್ದರು.

ಮೈಸೂರಿನ ಮೈಲಾರಿ ಹೋಟೆಲ್‌ ಹಲವಾರು ವರ್ಷಗಳಿಂದ ರಾಜ್ಯ ದಾದ್ಯಂತ ಸುದ್ದಿ ಮಾಡಿದೆ. ಈ ಹಿನ್ನೆಲೆ ಯಲ್ಲಿ ಕಾಂಗ್ರೆಸ್‌ ವರಿಷ್ಠೆ ಪ್ರಿಯಾಂಕಾ ಗಾಂಧಿ ಅವರು ಬೆಳಗ್ಗೆಯೇ ಮೈಸೂರಿನ ಮೈಲಾರಿ ಹೋಟೆಲ್‌ಗೆ ತೆರಳಿ ದೋಸೆ ಸವಿದರು, ಮಾತ್ರವಲ್ಲದೆ ಅಡುಗೆ ಕೋಣೆಗೆ ಹೋದ ಅವರು ಅಲ್ಲಿಂದ ಬಾಣಸಿಗರ ಜೊತೆ ದೋಸೆಯನ್ನು ತಯಾರಿಸಿ ದರು.

ಮೈಲಾರಿ ಹೋಟೆಲ್‌ಗೆ ಹೋಗಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಕಂಡ ಸ್ಥಳೀಯರು ಖುಷಿಯಿಂದ ಬಂದು ಪೋಟೋ ತೆಗೆಸಿಕೊಂಡರು, ಈ ವೇಳೆ ಪ್ರಿಯಾಂಕಾ ಗಾಂಧಿ ಅವರು ಸ್ಥಳೀಯರೊಂದಿಗೆ ಮಾತನಾಡಿ ಆತ್ಮೀಯತೆ ಮೆರೆದರು.

ಚುನಾವಣಾ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಏ.26ರಂದು ಅವರು ಶೃಂಗೇರಿಗೆ ಭೇಟಿ ನೀಡಲಿದ್ದಾರೆ. ಬಳಿಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಬಾಳೆಹಿನ್ನೂರಿಗೆ ಭೇಟಿ ನೀಡಿ ಕಲಾರಂಗ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ನಂತರ ಹಿರಿಯೂರಿನ ಹುಳಿಯಾರ್‌ ರಸ್ತೆಯಲ್ಲಿರುವ ಸಾರ್ವಜನಿಕ ಕ್ರೀಡಾಂಗಣದಲ್ಲಿ ಗೊಲ್ಲ ಸಮುದಾಯದ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ.