Saturday, 10th May 2025

ರಾಷ್ಟ್ರಪತಿ ದ್ರೌಪದಿ ಕರ್ನಾಟಕ ಭೇಟಿ: ನಾಳೆ ಐಐಐಟಿಯ ನೂತನ ಕಟ್ಟಡ ಉದ್ಘಾಟನೆ

ಧಾರವಾಡ: ರಾಷ್ಟ್ರಪತಿ ದ್ರೌಪದಿ ಮುರ್ಮು ಕರ್ನಾಟಕ ಪ್ರವಾಸ ಕೈಗೊಂಡಿದ್ದು ಸೆ.26ರ ಸೋಮವಾರ ಮೈಸೂರು ಮತ್ತು ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಗಳಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅವರು ರಾಜ್ಯಕ್ಕೆ ಭೇಟಿ ನೀಡು ತ್ತಿದ್ದಾರೆ.

ಮೈಸೂರು ದಸರಾ 2022ಕ್ಕೆ ಅವರು ಚಾಲನೆ ನೀಡಲಿದ್ದಾರೆ. ಧಾರವಾಡದಲ್ಲಿ ಐಐಐಟಿ ಯ ನೂತನ ಕಟ್ಟಡದ  ಉದ್ಘಾಟನೆ ಮಾಡಲಿದ್ದಾರೆ.

 

ಶಾಸಕ ಅರವಿಂದ ಬೆಲ್ಲದ ಧಾರವಾಡ ಐಐಐಟಿಗೆ ಭೇಟಿ ನೀಡಿ ಉದ್ಘಾಟನಾ ಕಾರ್ಯ ಕ್ರಮದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮದ ಸಿದ್ಧತೆಯು ಸಮರ್ಪಕವಾಗಿ ನಡೆಯುತ್ತಿದೆ.

ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಧಾರವಾಡದ ಉದ್ಘಾಟನೆ ಮತ್ತು ಲೋಕಾ ರ್ಪಣೆ ಕಾರ್ಯಕ್ರಮ ಸೆ.26ರಂದು ಮಧ್ಯಾಹ್ನ ಸತ್ತೂರು ಬಳಿಯ ಹೊಸ ಕ್ಯಾಂಪಸ್‍ನಲ್ಲಿ ಆಯೋಜಿಸಲಾಗಿದೆ.

ಸೋಮವಾರ ಮಧ್ಯಾಹ್ನ ಐಐಐಟಿ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅತಿಥಿಗಳು ಸೇರಿದಂತೆ ಸುಮಾರು 700 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರಪತಿಗಳಿಗೆ ನಿಗದಿತವಾದ ಊಟದ ಮೆನು ಇರಲಿದ್ದು, ಆ ಪ್ರಕಾರ ಊಟ ಸಿದ್ದಪಡಿಸಲಾಗುತ್ತದೆ. ಅದರೊಂದಿಗೆ ಉತ್ತರ ಕರ್ನಾಟಕ ಶೈಲಿಯ ಊಟವು ಇರಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಐಐಐಟಿ ನಿರ್ಮಾಣಕ್ಕೆ ಜಾಗ ನೀಡಿದ ರೈತರು ಪಾಲ್ಗೊಳ್ಳಲಿದ್ದು, ಅವರಿಗೆ ಸನ್ಮಾನ ಮಾಡಲಾ ಗುತ್ತದೆ.