ಗೌರಿಬಿದನೂರು: ನನ್ನ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ನಗರಸಭೆಯ ಐದು ಮಂದಿ ಸದಸ್ಯರು ಮತ್ತು ಅವರ ಅಪಾರ ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ತೊರೆದು ನಮ್ಮ ಜೊತೆ ಗುರುತಿಸಿಕೊಂಡಿದ್ದಾರೆ. ನಮ್ಮ ನಾಯಕತ್ವ ಒಪ್ಪಿ ಬಂದವರಿಗೆ ಯಾವುದೇ ರೀತಿಯ ಆಸೆ ಅಮಿಷಗಳನ್ನು ಒಡ್ಡಿಲ್ಲ ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ಸ್ಪಷ್ಟಪಡಿಸಿದರು.
ತಾಲ್ಲೂಕಿನ ಅಲಕಾಪುರ ಸಮೀಪವಿರುವ ಏಷ್ಯನ್ ಪ್ಯಾಬ್ ಟೆಕ್ ಆವರಣದಲ್ಲಿ,ಕಾಂಗ್ರೆಸ್ ಪಕ್ಷವನ್ನು ತೊರೆದು ತಮ್ಮ ಬಣಕ್ಕೆ ಸೇರ್ಡೆಯಾದ ನಗರಸಭೆ ಸದಸ್ಯರಾದ ಖಲ್ಲೀಂ,ಶ್ರೀಕಾAತ್, ಶ್ರೀರಾಮಪ್ಪ,ಮಂಜುಳಾ,ಗಿರೀಶ್ ಮತ್ತು ಅವರುಗಳ ಅಪಾರ ಬೆಂಬಲಿಗರನ್ನು ಸ್ವಾಗತಿಸಿ ಮಾತನಾಡುತ್ತಿದ್ದರು.
ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ್ದ ಭರವಸೆಯಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ.ಕೇವಲ ಒಂದೂವರೆ ವರ್ಷದಲ್ಲಿಯೇ ತಾಲೂಕಿನಲ್ಲಿ ನೂರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ.ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 25 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಗ್ರಾಮೀಣ ಭಾಗದಲ್ಲಿ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಲು ವಿನಿಯೋಗಿಸಲಾಗಿದೆ. ಸರ್ಕಾರ ಹಾಗೂ ಮಂತ್ರಿಗಳ ಮೇಲೆ ಒತ್ತಡ ಹೇರಿ ತಾಲ್ಲೂಕಿನ ರಸ್ತೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿಸಲಾಗಿದ್ದು,ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದ್ದು,ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದರು.
ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ ಅವರು ಮಾತನಾಡುತ್ತಾ ಇಡೀ ದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಎದುರು ಬದರು ತಮ್ಮದೇ ಆದ ಸಿದ್ದಾಂತದಡಿ ರಾಜಕಾರಣ ಮಾಡುತ್ತಿದ್ದರೆ, ನಮ್ಮ ತಾಲೂಕಿನಲ್ಲಿ ಮಾತ್ರ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಸಂದರ್ಭಕ್ಕೆ ತಕ್ಕಂತೆ ಒಳ ಒಪ್ಪಂದದ ರಾಜಕಾರಣ ಮಾಡುತ್ತಿವೆ. ಇದನ್ನು ನೋಡಿ ಬೇಸತ್ತು, ತಾಲೂಕಿನಲ್ಲಿ ರಾಜಕೀಯ ಬದಲಾವಣೆ ತರಲೇಬೇಕೆಂದು ಪಣತೊಟ್ಟು,ನಾನು ಹಾಗೂ ನನ್ನ ಬೆಂಬಲಿಗರು ಕೆಎಚ್.ಪುಟ್ಟಸ್ವಾಮಿಗೌಡರ ಜೊತೆ ಸೇರಿ ನಮ್ಮ ಗುರಿಯನ್ನು ಸಾಧಿಸಿದೆವು ಎಂದ ಅವರು ನಮ್ಮ ನಿರೀಕ್ಷೆಯಂತೆ ಶಾಸಕರು ತಾಲ್ಲೂಕಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.
ಸೇರ್ಪಡೆ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ್,ಬಲರಾಮ್,ಉಪಾಧ್ಯಕ್ಷ ಫರೀದ್,ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು,ಹಿರಿಯ ಮುಖಂಡರಾದ (ಎಸ್.ಎಲ್).ಲಕ್ಷ್ಮೀನಾರಾಯಣ್, ಎಂ ನರಸಿಂಹಮೂರ್ತಿ, ನಗರಸಭೆ ಸದಸ್ಯರಾದ ರಾಜಕುಮಾರ್,ಸಪ್ತಗಿರಿ,ಮುಖಂಡರಾದ ಅಲ್ಲಂಪಲ್ಲಿ ವೇಣು, ವೆಂಕಟರಾಮರೆಡ್ಡಿ, ಬೊಮ್ಮಣ್ಣ, ಹೊಸೂರು ನಾಗರಾಜ್, ನಾಗಾರ್ಜುನ, ಮೈಲಾರಪ್ಪ, ಚನ್ನಪ್ಪ, ಅಬ್ದುಲ್ಲಾ, ನಾರಾಯಣಸ್ವಾಮಿ, ಖಲೀಲ್, ನಾಗೇಂದ್ರ, ಆರ್ ಆರ್ ರೆಡ್ಡಿ, ತರಿದಾಳು ಚಿಕ್ಕಣ್ಣ, ಲಕ್ಷಣ್ ರಾವ್, ಪವನ್ ರೆಡ್ಡಿ, ಜಮೀರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.