ಶರತ್ ಬಚ್ಚೇಗೌಡರ ಪ್ರಯತ್ನಕ್ಕೆ ಪ್ರಶಂಸೆ
ಹೊಸಕೋಟೆ : ಬೆಂಗಳೂರಿನ ಐಟಿಐ ಕಾರ್ಖಾನೆಯಿಂದ ಕೃಷ್ಣರಾಜಪುರ ಮತ್ತು ಹೊಸಕೋಟೆ ವರೆಗಿನ ವಾಹನ ದಟ್ಟಣೆ ಅಧಿಕವಾಗಿರುವುದರಿಂದ ಮೆಟ್ರೊ ಮತ್ತು ಮೇಲ್ಸೇತುವೆ ನಿರ್ಮಿಸಬೇಕು ಎಂದು ಇಲ್ಲಿನ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡರು ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರಕ್ಕೆ ಆಗ್ರಹಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಅವರು ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಗಮನ ಸೆಳೆದರು.
ʻಈ ಕುರಿತು ಶರತ್ ಬಚ್ಚೇಗೌಡರು ಬಹು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆʼ ಎಂದು ಪ್ರಶಂಸೆ ಮಾಡಿದ ಶಿವಕುಮಾರ್ ಅವರು, ʻಕೋಲಾರ ಕಡೆಯಿಂದ ಬರುವ ರೈಲುಗಳಲ್ಲಿ ದಿನವೂ 10,000 ಜನರು ಹೊಸಕೋಟೆ ಕಡೆಯಿಂದ ಬೆಂಗಳೂರಿಗೆ ಕೆಲಸಕ್ಕೆ ಬರುತ್ತಿದ್ದಾರೆ. ಇದು ಆ ರಸ್ತೆಯಲ್ಲಿ ಇರುವ ಜನ ಸಂಚಾರದ ಪ್ರಮಾಣವನ್ನು ತೋರಿಸುತ್ತದೆʼ ಎಂದು ಹೇಳಿದರು.
ʻಇದಕ್ಕೆ ಪೂರಕವಾಗಿ ಐ.ಟಿ. ಕಾರಿಡಾರ್ ಕೂಡ ಹೊಸಕೋಟೆ ಜತೆಗೆ ಸಂಪರ್ಕವಾದಂತೆ ಆಗಿ ಬಿಟ್ಟಿದೆ. ಹೀಗಾಗಿ ಮತ್ತು ಆ ಭಾಗದಲ್ಲಿ ಜನರ ಸಂಚಾರ ಹೆಚ್ಚಿನ ಪ್ರಮಾಣದಲ್ಲಿ ಇದೆʼ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.
ʻಶರತ್ ಬಚ್ಚೇಗೌಡರು ಕೇಳಿದ್ದು ಒಪ್ಪತಕ್ಕಂಥ ವಿಚಾರ. ಈಗಾಗಲೇ ಸರ್ಕಾರ ವಿವರವಾದ ಸಮೀಕ್ಷೆಯನ್ನು ಮಾಡಿ ಯೋಜನೆ ತಯಾರಿಸುವ ದಿಸೆಯಲ್ಲಿ ಕಾರ್ಯ ನಿರತವಾಗಿದೆ. ಈ ಕಡೆ ಹೊಸಕೋಟೆ, ಆ ಕಡೆ ನೆಲಮಂಗಲ ಮತ್ತು ಇನ್ನೊಂದು ಕಡೆ ಬಿಡದಿ ಹೀಗೆ ಮೂರು ಕಡೆಗಳಲ್ಲಿ ಮೆಟ್ರೊ ಸಂಪರ್ಕ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆʼ ಎಂದು ಉಪಮುಖ್ಯಮಂತ್ರಿಗಳು ಸದನಕ್ಕೆ ಭರವಸೆ ನೀಡಿದರು.
ತಾವು ಪ್ರಸ್ತಾಪಿಸಿದ ವಿಚಾರವನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ತಿಳಿಸಿದ ಉಪಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದ ಶರತ್ ಬಚ್ಚೇಗೌಡರು, ʻಕೃಷ್ಣರಾಜಪುರದಿಂದ 15 ಕಿಲೋ ಮೀಟರ್ ದಾಟಲು 40 ನಿಮಿಷ ಬೇಕಾಗುತ್ತದೆ. ಹೈದರಾಬಾದ್, ಮೈಸೂರು ಕಡೆಗಳಿಗೆ ತೆರಳುವ ವಾಹನಗಳಿಗೆ ಮೇಲ್ಸೇತುವೆ ಸಂಪರ್ಕ ಇದ್ದು ಚೆನ್ನೈ ರಸ್ತೆ ಕಡೆಯೂ ಮೇಲ್ಸೇತುವೆ ರಸ್ತೆ ಸಂಪರ್ಕ ಕಲ್ಪಿಸಿದರೆ ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆʼ ಎಂದು ಮನವಿ ಮಾಡಿಕೊಂಡರು.
ಈ ಮೂಲಕ ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡರು ತಮ್ಮ ಮತಕ್ಷೇತ್ರವನ್ನು ಬೆಂಗಳೂರಿನ ಸೆಟಲೈಟ್ ನಗರವಾಗಿ ಅಭಿವೃದ್ಧಿಪಡಿಸುವ ತಮ್ಮ ಕನಸನ್ನು ಸದನದ ಮುಂದೆ ಇಟ್ಟರು. ಹೊಸಕೋಟೆಗೆ ಮೆಟ್ರೊ ಸಂಪರ್ಕ ಬಂದರೆ ಆ ಕ್ಷೇತ್ರದ ಅಭಿವೃದ್ಧಿ ನಕಾಶೆಯೇ ಬದಲಾಗುತ್ತದೆ ಎಂಬುದು ಅವರ ಸದಿಚ್ಛೆಯಾಗಿದೆ.