Monday, 12th May 2025

Karnataka Rakshana Vedike: ಕರವೇ ತಾಲೂಕು ಗೌರವಾಧ್ಯಕ್ಷರಾಗಿ ವೆಂಕಟೇಶ್ ಆಯ್ಕೆ

ಚಿಕ್ಕಬಳ್ಳಾಪುರ: ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಮಂಗಳವಾರ ಕರವೇ ತಾಲೂಕು ಘಟಕದ ಪದಾಧಿಕಾರಿಗಳ ಸಭೆ ನಡೆಯಿತು.

ಸಭೆಯಲ್ಲಿ ತಾಲೂಕು ಅಧ್ಯಕ್ಷ ಕೆ.ಎನ್. ಹರೀಶ್ ಮಾತನಾಡಿ ತಾಲೂಕು ಗೌರವಾಧ್ಯಕ್ಷರನ್ನಾಗಿ ವೆಂಕಟೇಶ್ ಅವರನ್ನು ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ನೇಮಕ ಮಾಡಿ ಆದೇಶಿಸಿರುವುದು ಮತ್ತಷ್ಟು ಸಂತಸ ತಂದಿದೆ.

ವೆಂಕಟೇಶ್ ಅವರು ಸಂಘಟನೆಗೆ ಬಂದಿದ್ದರಿಂದ ಗಡಿ ಭಾಗದಲ್ಲಿ ಮತ್ತಷ್ಟು ಕನ್ನಡಪರ ಚಟುವಟಿಕೆಗಳನ್ನು ಕೈಗೊಂಡು, ಕನ್ನಡ ಭಾಷೆಯನ್ನು ಬಲಿಷ್ಟಗೊಳಿಸಬಹುದು. ಹಾಗೇಯೇ ಕನ್ನಡಪರ ಹೋರಾಟಗಳನ್ನು ನಡೆಸ ಬಹುದು ಎಂದು ತಿಳಿಸಿದರು. ಇತ್ತೀಚೆಗೆ ಕರವೇ ಸಂಘಟನೆ ತಾಲೂಕಿನಾದ್ಯಂತ ಬಲಗೊಳ್ಳುತ್ತಿದೆ. ಇಂತಹ ಸಂದರ್ಭ ದಲ್ಲಿ ಸಜ್ಜನರು, ಕನ್ನಡ ಮೇಲಿನ ಅಭಿಮಾನವಿರುವಂತಹ ವೆಂಕಟೇಶ್ ರವರನ್ನು ತಾಲೂಕು ಘಟಕದ ಗೌರವಾ ಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಅತ್ಯಂತ ಸಂತೋಷ ತಂದಿದೆ ಎಂದರು.

ಇದೇ ವೇಳೆ ನೂತನ ಕರವೇ ಗೌರವಾಧ್ಯಕ್ಷ ವೆಂಕಟೇಶ್ ಮಾತನಾಡಿ, ಈ ಭಾಗದಲ್ಲಿ ಕರವೇ ಮಾಡುತ್ತಿರುವ ಹಲವಾರು ಕನ್ನಡ ಕೆಲಸಗಳು ಬಹಳ ಹತ್ತಿರದಿಂದ ನೋಡಿದ್ದೇನೆ. ಆದರೆ ಕರೆವೇಯೊಂದಿಗೆ ಸೇರಲು ಕಾಲ ಕೂಡಿ ಬಂದಿರಲಿಲ್ಲ. ಈಗ ಅವಕಾಶ ದೊರೆತಿದ್ದು, ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಟೆಯಿಂದ ನಿಭಾಯಿಸುತ್ತೇನೆ. ಸಂಘಟನೆಯ ಜೊತೆಯಲ್ಲಿ ಕನ್ನಡ ಉಳಿಸಿ, ಬೆಳೆಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಹಾಗೇಯೇ ಈ ಗೌರವಾಧ್ಯಕ್ಷರ ಜವಾಬ್ದಾರಿ ನೀಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರಿಗೆ ಹಾಗೂ ತಾಲೂಕು ಅಧ್ಯಕ್ಷ ಕೆ.ಎನ್ ಹರೀಶ್ ಅವರಿಗೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಮಹಿಳಾಧ್ಯಕ್ಷೆ ಗಂಗರತ್ನಮ್ಮ, ಪ್ರಧಾನ ಕಾರ್ಯದರ್ಶಿ ರಿಯಾಜ್ ಉಲ್ಲಾ, ತಾಲೂಕು ಸಂಚಾಲಕ ಶಿವಕುಮಾರ್, ಪ್ರಧಾನ ಸಂಚಾಲಕ ಅಶೋಕ್, ಖಜಾಂಚಿ ನಾರಾಯಣ ಸ್ವಾಮಿ, ವಕ್ತಾರ ಕೃಷ್ಣ ನಾಯಕ್, ನಗರ ಘಟಕದ ಅಧ್ಯಕ್ಷ ಶ್ರೀನಿವಾಸ್.ಕೆ., ಕಾರ್ಯದರ್ಶಿ ಶಂಕರ್, ಕಾರ್ಮಿಕ ಘಟಕದ ಸಂಚಾಲಕ ಕೃಷ್ಣಪ್ಪ ಮತ್ತಿತರರು ಇದ್ದರು.

ಇದನ್ನೂ ಓದಿ: ಮಗುವಿಗೆ ದೊರೆಯಲಿ ಈ ಅಮೃತ

Leave a Reply

Your email address will not be published. Required fields are marked *