Sunday, 11th May 2025

ಟಿಕೆಟ್‌ ಸಿಗುವುದು ಖಚಿತ: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ವಿಶ್ವಾಸ

ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ತಮಗೆ ಟಿಕೆಟ್‌ ಸಿಗುವುದು ಖಚಿತ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ವಿಶ್ವಾಸ ವ್ಯಕ್ತಪಡಿಸಿದ್ದು, ನಾನು ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲ. ನನ್ನ ಮಗನ ಹೆಸರು ಕೂಡ ಹೇಳಿಲ್ಲ ಎಂದಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಸುದೀರ್ಘ ಸಭೆ ಆಗಿದೆ. ಸಭೆ ಸಕರಾತ್ಮಕವಾಗಿ ಆಗಿದ್ದು, ನನ್ನ ಅಭಿಪ್ರಾಯ ಎಲ್ಲವನ್ನೂ ಮುಕ್ತವಾಗಿ ಹೇಳಿದ್ದೇನೆ. ಎರಡು ದಿನ ಕಾದು ನೋಡಿ ಎಂದು ಮಾಜಿ ಸಿಎಂ ಹೇಳಿದರು.

ದೆಹಲಿಗೆ ತೆರಳಿದ ಬಳಿಕ ಯಡಿಯೂರಪ್ಪ ಅವರಿಗೆ ಭೇಟಿ ಮಾಡಿದ್ದೇನೆ. ಯಡಿಯೂರಪ್ಪ ಕೂಡ ಶೆಟ್ಟರ್‌ಗೆ ಟಿಕೆಟ್ ‌ಕೊಡಬೇಕು ಎಂದಿದ್ದಾರೆ. ಯಡಿಯೂರಪ್ಪ ಅವರು, ಅಮಿತ್ ಶಾ ಹಾಗೂ ಜೆ.ಪಿ ನಡ್ಡಾ ಜೊತೆ ಮಾತಾಡಿದ್ದಾರೆ. ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಸಿಗದೆ ಹೋದರೆ, ಉತ್ತರ ಕರ್ನಾಟಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನುವು ದನ್ನು ಹೈಕಮಾಂಡ್‌ ಗಮನಕ್ಕೆ ತಂದಿದ್ದಾರೆ ಎಂದರು.

ಬುಧವಾರ ಸಂಜೆಯವರೆಗೂ ಸಭೆ ನಡೆದಿದೆ. ಹೀಗಾಗಿ ಎರಡನೇ ಪಟ್ಟಿಯಲ್ಲಿ ಹೆಸರಿಲ್ಲ. ಅದು ಸಹಜ ಅದರಲ್ಲಿ ವಿಶೇಷ ಇಲ್ಲ. ಆದರೆ ನನಗೆ ಟಿಕೆಟ್ ಸಿಗುತ್ತದೆ ನೋಡಿ ನೀವು ಎಂದು ಭರವಸೆ ವ್ಯಕ್ತಪಡಿಸಿದರು.