ಚಿಕ್ಕಬಳ್ಳಾಪುರ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಭಾರತದ ಆರ್ಥಿಕ ಸುಧಾರಣೆಯ ಹರಿಕಾರರಾಗಿ ದ್ದರು. ೧೯೯೧ರಲ್ಲಿಯೇ ಅರ್ಥಮಂತ್ರಿ ಆಗುವ ಮೂಲಕ ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಭಾರತದ ಆರ್ಥಿಕತೆ ಹೊಸ ಮಗ್ಗುಲಿಗೆ ಹೊರಳುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಅಗಲಿಕೆ ದೇಶಕ್ಕೆ ಮಾತ್ರವಲ್ಲ, ಜಗತ್ತಿನ ಆರ್ಥಿಕತೆಗೂ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ವಿಷಾಧಿಸಿದರು.
೧೯೯೧ ರಲ್ಲಿ ಪಿ.ವಿ.ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ಡಾ.ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿ ನೇಮಕಗೊಂಡ ಅವರು ತಮ್ಮ ಚೊಚ್ಚಲ ಬಜೆಟ್ನಲ್ಲಿಯೇ ದೇಶದ ಪ್ರಗತಿಗೆ ಆರ್ಥಿಕ ಮುಲಾಮು ಹಚ್ಚಿದರು. ಬಜೆಟ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಎದುರಿಸಿ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮಾಧಾನ ದಿಂದ ಉತ್ತರಿಸಿದ್ದರು. ದೇಶದ ಆರ್ಥಿಕ ಸುಧಾರಣೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.ಇಂತಹ ಅವರ ಐತಿಹಾಸಿಕ ಸುಧಾರಣೆಗಳು ಭಾರತವನ್ನು ದಿವಾಳಿತನದಿಂದ ರಕ್ಷಿಸಿದವು ಮಾತ್ರವಲ್ಲದೇ , ದೇಶದ ಆರ್ಥಿಕ ಅಭಿವೃದ್ಧಿಯ ಪಥವನ್ನು ಏರುತ್ತಿರುವ ಜಾಗತಿಕ ಶಕ್ತಿಯಾಗಿ ಮರು ವ್ಯಾಖ್ಯಾನಿಸುವಂತೆ ಮಾಡಿದವು.
ಮೇ ೨೨, ೨೦೦೪ ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿಂಗ್, ಮೇ ೨೬, ೨೦೧೪ ರವರೆಗೆ ಸತತ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ಅವಧಿಯ ಭಾರತದ ಪ್ರಧಾನಿ ಎನಿಸಿಕೊಂಡಿದ್ದಾರೆ.ಬಡತನದ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಡಾ.ಮನಮೋಹನ್ ಸಿಂಗ್ ರವರು ಶಿಕ್ಷಣ, ಅರ್ಥಶಾಸ್ತç ಮತ್ತು ರಾಜಕೀಯದಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಿದ್ದಾರೆ. ಬಡತನದ ಹಿನ್ನೆಲೆಯಿಂದ ಬಂದು ದೇಶದ ಅರ್ಥ ವ್ಯವಸ್ಥೆ ಸುಧಾರಣೆಯಲ್ಲಿ ಮಹತ್ವದ ಕೊಡುಗೆ ನೀಡಿ, ೧೦ ವರ್ಷ ಕಾಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ನಾಯಕ ಎಂದರು.
ಮನಮೋಹನ್ ಸಿಂಗ್ ಅವರ ಮನೆಗೆ ವಿದ್ಯುತ್ ಸಂಪರ್ಕ ಸಹ ಇರಲಿಲ್ಲ. ಹೀಗಾಗಿ ಬೀದಿ ದೀಪದ ಕೆಳಗೆ ಕೂತು ಸಿಂಗ್ ಓದುತ್ತಿದ್ದರು.ಬಾಲ್ಯದಲ್ಲೇ ತಾಯಿಯ ಕಳೆದುಕೊಂಡ ಅವರು ಅಜ್ಜಿಯ ಮಡಿಲಲ್ಲೇ ಬಾಲ್ಯ ಕಳೆದರು.ಹೀಗೆ ಕಡು ಕಷ್ಟದಿಂದ ಬೆಳೆದು ಅರ್ಥಶಾಸ್ತçದ ಪ್ರಾಧ್ಯಾಕಪರಾಗಿದ್ದಲ್ಲದೆ,ಆರ್ಬಿಐ ಗವರ್ನರ್, ವಿತ್ತ ಸಚಿವ ಮತ್ತು ಪ್ರಧಾನಿಯಾಗಿ ದೇಶಕ್ಕೆ ಅಸಾಧಾರಣವಾದ ಕೊಡುಗೆ ನೀಡಿದ್ದಾರೆ. ಬಡತನದಿಂದ ಬಂದಿದ್ದ ಮನಮೋಹನ್ ಸಿಂಗ್ ದೇಶದ ಬಡವರ ಬಗ್ಗೆ ಅಪಾರಕಾಳಜಿ ಹೊಂದಿದ್ದರಲ್ಲದೇ,ಯಾವುದೇ ಅಧಿಕಾರಕ್ಕೇರಿದರೂ ಸರಳ ಸಜ್ಜನಿಕೆಯನ್ನು ಬಿಟ್ಟುಕೊಡಲಿಲ್ಲ.ಇವರಿಗಿದ್ದ ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವದಲ್ಲಿ ದೇಶವು ಪ್ರಗತಿಯ ಹಾದಿಯಲ್ಲಿ ಸಾಗಿದೆ.ಇವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ ಎಂದ ಶಾಸಕ ಪ್ರದೀಪ್ ಈಶ್ವರ್ ಅವರ ಪ್ರಗತಿಪರ ದೃಷ್ಠಿಕೋನ ಮತ್ತು ಅವಿಸ್ಮರಣೀಯ ಕೊಡುಗೆಗಳು ದೇಶದ ಮುಂದಿನ ತಲೆಮಾರಿಗೆ ಮತ್ತು ಮೊದಲ ಬಾರಿ ರಾಜಕೀಯ ಪ್ರವೇಶಿಸಿರುವ ನನ್ನಂತಹ ಶಾಸಕರಿಗೆ ಸ್ಫೂರ್ತಿ ಯಾಗಲಿವೆ ಎಂದು ತಿಳಿಸಿದ್ದಾರೆ.