Sunday, 11th May 2025

Dr M C Sudhakar: ಕಾಂಗ್ರೆಸ್ ಕಾರ್ಯಕ್ರಮದಲ್ಲಿ1 ಸಾವಿರ ಮಂದಿ ತೆರಳುವ ವಿಶ್ವಾಸವಿದೆ: ಡಾ.ಎಂ.ಸಿ. ಸುಧಾಕರ್

ಚಿಕ್ಕಬಳ್ಳಾಪುರ: ಬೆಳಗಾವಿಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಂದ ಕನಿಷ್ಠ 100 ಮಂದಿ ತೆರಳಲು ಸೂಚನೆ ನೀಡಿದ್ದು, ಜಿಲ್ಲೆಯಿಂದ 1 ಸಾವಿರ ಮಂದಿ ತೆರಳುವ ವಿಶ್ವಾಸ ವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ನಗರದ ಹೋಟೆಲ್ ಶ್ರೀಸಿಯೆರಾದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಮುಖಂಡರು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

1924ರ ಡಿ.26ರಂದು ಮಹಾತ್ಮ ಗಾಂಧೀಜಿ ಅವರು ಜವಾಹರ್‌ ಲಾಲ್‌ ಅವರೊಂದಿಗೆ ಬೆಳಗಾವಿಗೆ ಬಂದು ಆಗಿನ ಕಾರ್ಯದರ್ಶಿ ಗಂಗಾಧರ್‌ ದೇಶಪಾಂಡೆಯವರನ್ನು ಭೇಟಿ ಮಾಡಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅದೇ ದಿನ ಕಾರ್ಯಕಾರಿ ಸಮಿತಿ ಸದಸ್ಯರ ಬೃಹತ್ ಸಮಾವೇಶ ನಡೆಸಿದ್ದರು. ಆ ಸಮಾವೇಶ ನಡೆದು ಇಂದಿಗೆ 100 ವರ್ಷಗಳಾದ ನೆನಪಿನಲ್ಲಿ ಬೆಳಗಾವಿಯಲ್ಲಿ ಡಿ.27ರಂದು ಸಮಾವೇಶ ನಡೆಸಲು ಪಕ್ಷದ ಅಧ್ಯಕ್ಷರು ಕರೆ ಕೊಟ್ಟಿದ್ದು ಜಿಲ್ಲೆಯಲ್ಲಿ ಕೂಡ ಈ ಸಂಬಂಧ ಸಭೆ ನಡೆಸುತ್ತಿದ್ದೇವೆ ಎಂದರು.

***

ರಾಜಕೀಯದಲ್ಲಿ ಹಲವು ವರ್ಷಗಳ ಅನುಭವವುಳ್ಳ ಸಿ.ಟಿ.ರವಿಯವರ ತಾಳ್ಮೆ ಕಳೆದುಕೊಂಡು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಮತ್ತು ಇಡೀ ಸ್ತ್ರೀಕುಲಕ್ಕೆ ಅಪಮಾನ ಮಾಡಿದ್ದಾರೆ. ಅನುಭವಿಗಳಾಗಿ ಈ ರೀತಿಯ ವರ್ತನೆ ಅಕ್ಷಮ್ಯ. ಅವರು ದೇಶದ ಮಹಿಳೆಯರನ್ನು ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್‌ ಹೇಳಿದರು. 

ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಗಟ್ಟಿತನದ ಮಹಿಳೆಯಾದ ಕಾರಣ ಅಪಮಾನವನ್ನು ಸಹಿಸಿಕೊಂಡಿದ್ದಾರೆ. ಅವರ ನೋವಿನೊಂದಿಗೆ ನಾವೆಲ್ಲರೂ ಇರುತ್ತೇವೆ. ಬೇರೆಯವರಿಗೆ ಈ ರೀತಿ ಆಗಬಾರದು ಎಂಬ ಕಾರಣಕ್ಕೆ ಅವರು ದೂರು ನೀಡಿದ್ದಾರೆ. ದೇಶ ಮತ್ತು ರಾಜ್ಯವಷ್ಟೇ ಅಲ್ಲದೆ ಒಟ್ಟಾರೆ ಮಹಿಳಾ ಸಮೂಹಕ್ಕೆ ಸಿ.ಟಿ.ರವಿ ಅವಮಾನಿಸಿದ್ದಾರೆ. ಇದನ್ನ ಯಾರೊಬ್ಬರು ಕ್ಷಮಿಸುವುದಿಲ್ಲ. ಇಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. 

ಅಂಬೇಡ್ಕರ್‌ ವಿರುದ್ಧ ಅಮಿತ್‌ ಶಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು ಈ ಮೂಲಕ ಬಿಜೆಪಿಯವರ ಒಳಮನಸ್ಸು ಬಹಿರಂಗವಾಗಿದೆ. 

ಸದಾ ಕಾಲ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಕುರಿತು ಅವರು ದ್ವಂದ್ವ ನಿಲುವುಗಳನ್ನು ತಾಳುತ್ತಾ ಅಸಂಬದ್ಧ ಹೇಳಿಕೆ ಕೊಟ್ಟಿದ್ದಾರೆ. ಅಂಬೇಡ್ಕರ್‌ ಅವರ ಕೊಡುಗೆಯಿಂದ ಇಂದು ಅವರು ದೇಶದ ಗೃಹ ಸಚಿವರಾಗಿದ್ದಾರೆ. ಕಾಂಗ್ರೆಸ್‌ ಪಕ್ಷ ಇದನ್ನು ಕ್ಷಮಿಸುವುದಿಲ್ಲ. ಇದಕ್ಕಾಗಿ ಪಕ್ಷದ ವತಿಯಿಂದ ದೊಡ್ಡ ಹೋರಾಟವನ್ನು ರೂಪಿಸ ಲಾಗುತ್ತಿದೆ ಎಂದು ಹೇಳಿದರು. 

ಜಿಲ್ಲಾ ಕಾಂಗ್ರೆಸ್‌ ಭವನದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್‌ ಭವನಕ್ಕಾಗಿ ಸ್ಥಳ ಗುರುತಿಸಲಾಗಿದೆ. ವರಿಷ್ಠರ ಗಮನಕ್ಕೂ ತರಲಾಗಿದೆ. ಈ ಕುರಿತು ಸರಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ 1-2 ತಿಂಗಳೊಳಗೆ ಭೂಮಿಪೂಜೆ ನೆರವೇರಲಿದ್ದು, 3 ವರ್ಷಗಳೊಳಗಾಗಿ ಕಟ್ಟಡ ಲೋಕಾರ್ಪಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪ ಡಿಸಿದರು.