Sunday, 11th May 2025

ಡಿಪೋದಲ್ಲಿ ನಿಲ್ಲಿಸಿದ್ದ ಬಸ್ ನ ಡೀಸೆಲ್ ಕಳವು

ಶಿವಮೊಗ್ಗ: ಸಾಗರ ನಗರದ ಕೆಎಸ್‌ಆರ್ ಡಿಸಿ ಡಿಪೋ ಒಳಗೆ ನಿಲ್ಲಿಸಿದ್ದ ಬಸ್ ನ ಡೀಸೆಲ್ ಕಳವು ಮಾಡಲಾಗಿದೆ.

ಈ ಬಗ್ಗೆ ಘಟಕದ ವ್ಯವಸ್ಥಾಪಕ ರಾಜಪ್ಪ ಸಾಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾಗರ-ಶಿವಮೊಗ್ಗ-ರಾಯಚೂರು ಮಾರ್ಗದ ಸಾಗರ ಘಟಕದ ಬಸ್ ಚಾಲಕ ಪ್ರವೀಣ್ ಆರ್‌ ಜೈನ್ ರಾಯಚೂರಿನಿಂದ ಸಾಗರ ಘಟಕಕ್ಕೆ ಬಂದು ವಾಹನಕ್ಕೆ 190 ಲೀಟರ್ ಇಂಧನ ತುಂಬಿಸಿ ಟ್ಯಾಂಕ್ ಭರ್ತಿಯಾದ ನಂತರ ತಾಂತ್ರಿಕ ನಿರ್ವಹಣೆ ಮಾಡಿಸಿ ಭದ್ರತಾ ಶಾಖೆಯ ಎದುರುಗಡೆ ಮೂಲೆಯಲ್ಲಿರುವ ನೀರಿನ ಟ್ಯಾಂಕ್ ಹತ್ತಿರ ನಿಲ್ಲಿಸಿದ್ದರು ಎನ್ನಲಾಗಿದೆ.

ಮರುದಿನ ಬೆಳಿಗ್ಗೆ ಬಂದು ವಾಹನದ ಇಂಧನ ಟ್ಯಾಂಕ್ ಪರಿಶೀಲಿಸಿದಾಗ ಇಂಧನದ ಪ್ರಮಾಣ ಕಡಿಮೆ ಆಗಿರುವುದು ಕಂಡು ಬಂದಿದೆ.

ನಂತರ ಸಂಚಾರ ಮೇಲ್ವಿಚಾರಕ, ಪಾಳಿ ಮುಖ್ಯಸ್ಥರು ಮತ್ತು ಇಂಧನ ಶಾಖೆಯ ಸಿಬ್ಬಂದಿ ಕೂಡ ಪರಿಶೀಲಿಸಿದ್ದು, ಡೀಸೆಲ್ ಕಡಿಮೆ ಇರುವುದು ಕಂಡು ಬಂದಿದೆ. ಪುನಃ ಇಂಧನ ತುಂಬಿಸಿದಾಗ 35 ಲೀಟರ್ ಗೆ ಟ್ಯಾಂಕ್ ಭರ್ತಿಯಾಗಿದೆ.

ಹೀಗಾಗಿ ವಾಹನದಿಂದ 35 ಲೀಟರ್ ಇಂಧನ ಕಳ್ಳತನ ಮಾಡಿ ನಿಗಮಕ್ಕೆ ₹3097 ನಷ್ಟವನ್ನುಂಟು ಮಾಡಿರುವ ಬಗ್ಗೆ ದೂರು ದಾಖಲಿಸಲಾಗಿದೆ.