Saturday, 10th May 2025

Chikkaballapur News: ಸಿಎನ್‌ಜಿ ಗ್ಯಾಸ್ ಸಿಲಿಂಡರ್ ತುಂಬಿದ ಕ್ಯಾಂಟರ್ ಮತ್ತು ಗ್ರಾನೈಟ್ ತುಂಬಿದ್ದ ಲಾರಿ ನಡುವೆ ಭೀಕರ ಅಪಘಾತ

ನಡು ರಸ್ತೆಯಲ್ಲೇ ಹೊತ್ತಿ ಉರಿದ ವಾಹನಗಳು : ಐವರಿಗೆ ಗಾಯ, ಸುಟ್ಟಗಾಯಗಳಿಂದ ಡ್ರೈವರ್ ಸಾವು

ಚಿಕ್ಕಬಳ್ಳಾಪುರ : ನಗರ ಹೊರವಲಯ ಹುನೇಗಲ್ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಶುಕ್ರವಾರ ತಡರಾತ್ರಿ ಸಿಎನ್‌ಜಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಕ್ಯಾಂಟರ್ ಮತ್ತು ಗ್ರಾನೈಟ್ ತುಂಬಿದ್ದ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಗಾಯಗೊಂಡಿದ್ದು ಈ ಪೈಕಿ ತೀವ್ರ ಸುಟ್ಟ ಗಾಯಗಳಿಂದಾಗಿ ಚಾಲಕ ನರಸಿಂಹ ಮೂರ್ತಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ತುಮಕೂರು ಕಡೆಯಿಂದ ಚಿಕ್ಕಬಳ್ಳಾಪುರ ಕಡೆಗೆ ಸಿಎನ್‌ಜಿ ಗ್ಯಾಸ್ ತುಂಬಿಕೊಂಡು ತೆರಳುತ್ತಿದ್ದ ಕ್ಯಾಂಟರ್ ಒಂದಕ್ಕೆ ಹಿಂಬದಿಯಿAದ ಗ್ರಾನೈಟ್ ತುಂಬಿದ್ದ ಲಾರಿ ಡಿಕಿ ಹೊಡೆದ ಪರಿಣಾಮ ಅನಿಲ ಸೋರಿಕೆಯಾಗಿ ಎರಡೂ ವಾಹನ ಗಳು ಬೆಂಕಿಗೆ ಆಹುತಿಯಾಗಿದ್ದು ಈ ಘಟನೆಯಲ್ಲಿ ೫ ಮಂದಿಗೆ ಗಾಯಗಳಾಗಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.

ಹುನೇಗಲ್ ಗ್ರಾಮದ ಮೇಲೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ಘಟನೆ ಸಂಭವಿಸಿದ್ದು ಅತಿ ಯಾದ ವೇಗ ಮತತು ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಡಿಕ್ಕಿಯ ರಭಸಕ್ಕೆ ಎರಡೂ ಲಾರಿಗಗಳೂ ಕೂಡ ಸರಿಪಡಿಸಲಾಗಷ್ಟು ಹಾನಿಗೊಳಗಾಗಿದ್ದು,ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಸುಟ್ಟು ಕರಕಲಾಗಿವೆ. ಈ ಘಟನೆಯಲ್ಲಿ ೫ ಮಂದಿ ಗಾಯಗೊಂಡಿದ್ದು ಪೊಲೀಸರು ಆಗಮಿಸಿದ ಕೂಡಲೇ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.ಈ ಪೈಕಿ ಹೆಚ್ಚಿನ ರೀತಿಯಲ್ಲಿ ಸುಟ್ಟ ಗಾಯಕ್ಕೆ ಒಳಗಾಗಿದ್ದ ಚಾಲಕ ನರಸಿಂಹಮೂರ್ತಿ ಎಂಬುವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಸಿಎನ್‌ನ್‌ಜಿ ಕ್ಯಾಂಟರ್‌ಗೆ ಹಿಂಬದಿಯಿಂದ ಗ್ರಾನೈಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಹುನೇಗಲ್ ಗ್ರಾಮಸ್ಥರಲ್ಲಿ ಭಯವನ್ನು ಹುಟ್ಟಿಸಿದೆ. ಸೂರ್ಯ ಹುಟ್ಟುವ ಮೊದಲೇ ಸಂಘಟಿ ಸಿದ ಈ ಘಟನೆಯಿಂದಾಗಿ ಗ್ರಾಮಸ್ಥರೆಲ್ಲರು ತಮ್ಮ ತಮ್ಮ ಮನೆಯಿಂದ ಬರಲು ಭಯಪಟ್ಟು ಒಳಗೆ ಕುಳಿತ್ತಿದ್ದಾರೆ. ಲಾರಿಗಳಿಗೆ ಬೆಂಕಿ ಹೊತ್ತಿರುವ ಬೆಂಕಿ ಎಲ್ಲಿ ನಮ್ಮ ಮನೆಗಳಿಗೂ ಆವರಿಸುವೋ ಎಂಬ ಅವ್ಯಕ್ತ ಭೀತಿ ಗ್ರಾಮದಲ್ಲಿ ಉಂಟಾಗಿ ಒಂದು ರೀತಿಯ ಸೂತಕದ ವಾತಾವರಣ ನಿರ್ಮಿಸಿತ್ತು.

ಇನ್ನು ಈ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಿಮಿಸಿದ ಗ್ರಾಮಾಂತರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಮುಂದಾದ ಪರಿಣಾಮ ಗ್ರಾಮಸ್ಥರ ಆತಂಕ ದೂರವಾಯಿತು ಎನ್ನಬಹುದು.ನಡು ರಸ್ತೆಯಲ್ಲೇ ಈ ಘಟನೆ ನಡೆದಿದ್ದರಿಂದ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾ ಗಿದ್ದು ಪ್ರಯಾಣಿಕರು, ಚಾಲಕರು ತೊಂದರೆ ಅನುಭವಿಸುವಂತಾಗಿತ್ತು. ಈ ವೇಳೆ ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.