Saturday, 10th May 2025

ಶ್ರವಣಬೆಳಗೊಳ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

ಹಾಸನ: ಅನಾರೋಗ್ಯದಿಂದ ಬಳಲುತ್ತಿದ್ದ ಶ್ರವಣಬೆಳಗೊಳ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶರಾದರು.

ಮೇ 3, 1949ರಲ್ಲಿ ಜನಿಸಿದ್ದ ಶ್ರೀಗಳು ಏಳು ಮಹಾಮಸ್ತಕಾಭಿಷೇಕವನ್ನು ನೆರವೇರಿಸಿದ್ದರು.

ಬುಧವಾರ ರಾತ್ರಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (74) ಆರೋಗ್ಯದಲ್ಲಿ ಏರುಪೇರು ಉಂಟಾ ಗಿತ್ತು. ವೈದ್ಯರ ತಂಡ ಮಠಕ್ಕೆ ಆಗಮಿಸಿ ಚಿಕಿತ್ಸೆ ನೀಡುತ್ತಿತ್ತು. ಬಳಿಕ ಬೆಳ್ಳೂರು ಕ್ರಾಸ್‌ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ವಾಮೀಜಿಗಳನ್ನು ದಾಖಲು ಮಾಡಲಾಗಿತ್ತು.

ಗುರುವಾರ ಹೃದಯಾಘಾತದಿಂದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ ಹೊಂದಿದರು.

ಕರ್ನಾಟಕದ ಜೈನ ಸಮುದಾಯದ ಹಿರಿಯ ಸ್ವಾಮೀಜಿಗಳಾಗಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 7 ಮಹಾಮಸ್ತಕಾಭಿಷೇಕವನ್ನು ನೆರವೇರಿಸಿದ್ದರು. ಮೇ 3, 1949ರಲ್ಲಿ ಜನಿಸಿದ್ದ ಶ್ರೀಗಳು 1970ರಲ್ಲಿ ಪೀಠಾಧಿಪತಿಯಾಗಿ ನೇಮಕಗೊಂಡಿದ್ದರು.

ಹೊಯ್ಸಳ ದೊರೆಯಾಗಿದ್ದ ಬಲ್ಲಾಳರಾಯ ಶ್ರವಣಬೆಳಗೊಳ ಜೈನ ಮಠದ ಸ್ವಾಮೀಜಿಗಳಿಗೆ 13ನೇ ಶತಮಾನದಲ್ಲಿ ‘ಚಾರುಕೀರ್ತಿ’ ಎಂಬ ಬಿರುದು ನೀಡುತ್ತಾನೆ ಎನ್ನುತ್ತದೆ ಇತಿಹಾಸ. ಅಂದಿನಿಂದಲೂ ಜೈನ ಮಠದ ಪೀಠಾಧಿಪತಿಗಳಿಗೆ ಚಾರುಕೀರ್ತಿ ಎಂದೇ ಕರೆಯಲಾಗುತ್ತದೆ.