Saturday, 10th May 2025

ಭೀಕರ ಅಪಘಾತದಲ್ಲಿ ಎಂಟು ಸಾವು

ಧಾರವಾಡ: ತಾಲೂಕಿನಲ್ಲಿ ಶನಿವಾರ ಬಾಡ ಕ್ರಾಸ್ ಬಳಿ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತರ ಸಂಖ್ಯೆ 8ಕ್ಕೇರಿದೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಆವರಿಸಿದ್ದು, ಮೃತರ ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ.

ಧಾರವಾಡ ತಾಲೂಕಿನ ನಿಗದಿ ಗ್ರಾಮದ ಯುವ ಮಂಜುನಾಥ ಮತ್ತು ಸವದತ್ತಿಯ ರೂಪಾ ಅವರ ಮದುವೆ ಶನಿವಾರ ನಿಗದಿಯಾಗಿತ್ತು. ಮಳೆಯಿಂದಾಗಿ ಮದುವೆಯನ್ನ ಮನಸೂರ ಬಳಿಯ ಕಲ್ಯಾಣ ಮಂಟಪದಲ್ಲಿ ನಡೆಸಲು ಕುಟುಂಬಸ್ಥರು ಕೊನೇ ಗಳಿಗೆಯಲ್ಲಿ ನಿರ್ಧರಿಸಿದ್ದರು.

ಶುಕ್ರವಾರ ರಾತ್ರಿ ಮನೆಯಲ್ಲೇ ನಿಶ್ಚಿತಾರ್ಥ ಮುಗಿಸಿದ್ದರು. ಶನಿವಾರ ಎಲ್ಲರೂ ಮದುವೆ ಮಂಟಪಕ್ಕೆ ಹೊರಟಿ ದ್ದರು. ದಿಬ್ಬಣ ಹೊರಟ ಕ್ರೂಸರ್​ ವಾಹನ ಮಾರ್ಗ ಮಧ್ಯೆ ಮರಕ್ಕೆ ಡಿಕ್ಕಿ ಹೊಡೆದು ಪಲ್ಡಿಯಾಗಿದೆ. ಅಪಘಾತದ ಭೀಕರತೆಗೆ ವರನ ಸಂಬಂಧಿಕರಾದ ಮಹೇಶ್ವರಯ್ಯ(11), ಅನನ್ಯ(14), ಹರೀಶ(13), ಶಿಲ್ಪಾ(34), ನೀಲವ್ವ(60), ಮಧುಶ್ರೀ(20), ಶಂಭುಲಿಂಗಯ್ಯ (35) ಅವರು ಸ್ಥಳದಲ್ಲೇ ಮೃತಪಟ್ಟರು.

ಚನ್ನವ್ವ(45) ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 7 ಜನರ ಸ್ಥಿತಿ ಗಂಭೀರವಾಗಿದೆ. ಮೃತರಲ್ಲಿ ವರನ ಅಕ್ಕನ ಮಕ್ಕಳು ಮತ್ತು ಅಣ್ಣನ ಮಕ್ಕಳಿ, ಚಿಕ್ಕಮ್ಮ, ಅತ್ತಿಗೆ ಎಲ್ಲರೂ ಸೇರಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ನಾಲ್ವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಸ್ವಗ್ರಾಮಗಳಿಗೆ ರವಾನಿಸಲಾಗಿದೆ.