Thursday, 15th May 2025

ಜನರಲ್ಲಿ ವಿಶ್ವಾಸ ಮೂಡಲು ಪ್ರಧಾನಿ ಮೊದಲು ಲಸಿಕೆ ಪಡೆಯಲಿ: ಅಜಿತ್ ಶರ್ಮಾ

ಪಾಟ್ನಾ: ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರೇ ಪಡೆಯುವ ಮೂಲಕ ಜನರಲ್ಲಿ ಲಸಿಕೆ ಕುರಿತು ವಿಶ್ವಾಸ ಮೂಡಿಸಲಿ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಅಜಿತ್ ಶರ್ಮಾ ಹೇಳಿದರು.

ರಷ್ಯಾ, ಇಸ್ರೇಲ್ ಮತ್ತು ಅಮೆರಿಕ ಪ್ರಧಾನಿಗಳು ತಮ್ಮ ದೇಶದ ಕೋವಿಡ್ ಲಸಿಕೆಗಳನ್ನು ಪಡೆಯುವ ಮೂಲಕ ಲಸಿಕೆಯ ಸುರಕ್ಷತೆ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ. ಆದರೆ ಭಾರತದಲ್ಲಿ ಬಿಜೆಪಿ ನಾಯಕರೇ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಕೋವಿಡ್ ಲಸಿಕೆ ಪಡೆಯಲಿ. ಆ ಮೂಲಕ ಲಸಿಕೆಯ ಕುರಿತು ಜನರಲ್ಲಿ ಮೂಡಿರುವ ಭಯವನ್ನು ಹೋಗಲಾಡಿಸಲಿ ಎಂದು ಹೇಳಿದರು.

ಲಸಿಕೆ ತಯಾರಿಕೆಯ ಫಲ ಬಿಜೆಪಿ ಸರ್ಕಾರದ್ದಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದ ಅಜಿತ್, ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಗಳ ಸ್ಥಾಪನೆಗೆ ಕಾಂಗ್ರೆಸ್ ಪಕ್ಷ ಕಾರಣ. ಹೀಗಾಗಿ ಲಸಿಕೆ ಅಭಿವೃದ್ಧಿಯ ಶ್ರೇಯ ಕಾಂಗ್ರೆಸ್ ಪಕ್ಷಕ್ಕೇ ಸಲ್ಲಬೇಕು ಎಂದರು.

ಅಜಿತ್ ಶರ್ಮಾ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ವೈಜ್ಞಾನಿಕ ಸಾಮರ್ಥ್ಯವನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ದೇಶಕ್ಕೆ ಅಪಮಾನ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ನಾಯಕರಾದ ಡಾ. ಸಂಜಯ್ ಜೈಸ್ವಾಲ್ ಮತ್ತು ನಿಖಿಲ್ ಆನಂದ್ ಅವರು, ಅಜಿತ್ ಶರ್ಮಾ ಹೇಳಿಕೆ ದುರದೃಷ್ಟಕರ. ಪ್ರಧಾನಿ ಮೋದಿ ಅವರನ್ನೇ ಮೊದಲು ಲಸಿಕೆ ಹಾಕಿಸಿಕೊಂಡು ಸುರಕ್ಷತೆ ಬಹಿರಂಗ ಮಾಡಿ ಎನ್ನುವ ಮೂಲಕ ದೇಶದ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದಾರೆ. ಶರ್ಮಾ ಈ ಲಸಿಕೆಗಳನ್ನು ಪಾಕಿಸ್ತಾನ ನಿರ್ಮಿಸಿದ್ದರೆ ಅನುಮಾನ ವ್ಯಕ್ತಪಡಿಸುತ್ತಿರಲಿಲ್ಲ ಎಂದು ಹೇಳಿದರು.

 

Leave a Reply

Your email address will not be published. Required fields are marked *