Monday, 12th May 2025

ರಣಹದ್ದು ಕಳ್ಳಸಾಗಣೆ: ವ್ಯಕ್ತಿ ಬಂಧನ

ಮಧ್ಯಪ್ರದೇಶದಲ್ಲಿ ರಣಹದ್ದುಗಳ ಕಳ್ಳಸಾಗಣೆ ನಡೆದಿರುವ ಮೊದಲ ಪ್ರಕರಣ

ಭೋಪಾಲ್: ಮಧ್ಯಪ್ರದೇಶದ ಖಾಂಡ್ವಾ ರೈಲು ನಿಲ್ದಾಣದಲ್ಲಿ ರಣಹದ್ದು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ದುರ್ವಾಸನೆ ತಾಳಲಾರದೇ ಟಿಕೆಟ್ ಪರಿ ವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ರೈಲು ಖಾಂಡ್ವಾ ರೈಲು ನಿಲ್ದಾಣಕ್ಕೆ ಬಂದ ತಕ್ಷಣ ಟಿಕೆಟ್ ಪರಿವೀಕ್ಷಕರು ಈ ಬಗ್ಗೆ ಆರ್‌ಪಿಎಫ್‌ಗೆ ಮಾಹಿತಿ ನೀಡಿದರು.

ನಿಲ್ದಾಣದಲ್ಲಿ ಆರ್‌ಪಿಎಫ್ ಮತ್ತು ಅರಣ್ಯ ಇಲಾಖೆ ಜಂಟಿ ಪ್ರಕ್ರಿಯೆಯಲ್ಲಿ ಆರೋಪಿಯನ್ನು ಬಂಧಿಸಿ ದ್ದಾರೆ. ರಣಹದ್ದುಗಳು ಅಪರೂಪದ ಜಾತಿಯ ಈಜಿಪ್ಟ್ ರಣಹದ್ದು ಎಂದು ಕಂಡುಬಂದಿದೆ.

ರೈಲಿನಲ್ಲಿ ವ್ಯಕ್ತಿಯೊಬ್ಬ ಬಿಳಿ ರಣಹದ್ದುಗಳನ್ನು ಸಾಗಿಸುತ್ತಿರುವ ಬಗ್ಗೆ ಆರ್‌ಪಿಎಫ್‌ನಿಂದ ಮಾಹಿತಿ ಸಿಕ್ಕಿತು. ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಅಲ್ಲಿಗೆ ಆಗಮಿಸಿ ಜಂಟಿಯಾಗಿ ರೈಲಿನ ಮೇಲೆ ದಾಳಿ ನಡೆಸಿದರು. ಏಳು ಬಿಳಿ ರಣಹದ್ದುಗಳು ಅಥವಾ ಈಜಿಪ್ಟ್ ರಣಹದ್ದುಗಳನ್ನು ಪತ್ತೆ ಹಚ್ಚಿದ ನಂತರ ಆರೋಪಿ ಫರೀದ್ ಅಹ್ಮದ್‌ ನನ್ನು ಬಂಧಿಸಲಾಗಿದೆ. ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ರಣಹದ್ದುಗಳನ್ನು ಮೂಲಸ್ಥಳಕ್ಕೆ ಬಿಡಲಾಗುವುದು ಎಂದು ಅವರು ಹೇಳಿದರು.

ಯುಪಿಯ ಕಾನ್ಪುರದಿಂದ ಮಹಾರಾಷ್ಟ್ರದ ಮಾಲೆಗಾಂವ್‌ಗೆ ರಣಹದ್ದುಗಳನ್ನು ಕೊಂಡೊಯ್ಯಲಾಗುತ್ತಿತ್ತು. ಮಧ್ಯಪ್ರದೇಶದಲ್ಲಿ ರಣಹದ್ದುಗಳ ಕಳ್ಳಸಾಗಣೆ ನಡೆದಿರುವ ಮೊದಲ ಪ್ರಕರಣ ಇದಾಗಿದೆ.