Wednesday, 14th May 2025

ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಯುಟ್ಯೂಬರ್‌ ಮನೀಶ್‌ ಬಂಧನ

ಚೆನ್ನೈ: ತಮಿಳುನಾಡಿನಲ್ಲಿ ವಲಸಿಗ ಕಾರ್ಮಿಕರ ಮೇಲಿನ ದಾಳಿ ಕುರಿತು ನಕಲಿ ವೀಡಿಯೋಗಳನ್ನು ಪೋಸ್ಟ್‌ ಮಾಡಿದ ಆರೋಪ ಎದುರಿಸಿ ಬಂಧನ ಕ್ಕೊಳಗಾಗಿರುವ ಬಿಹಾರ ಮೂಲದ ಯುಟ್ಯೂಬರ್‌ ಮನೀಶ್‌ ಕಶ್ಯಪ್‌ನನ್ನು ತಮಿಳುನಾಡಿನಲ್ಲಿ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ವಶಪಡಿಸಿಕೊಳ್ಳಲಾಗಿದೆ.

ಮಧುರೈ ಜಿಲ್ಲಾ ನ್ಯಾಯಾಲಯಕ್ಕೆ ಕಶ್ಯಪ್‌ನನ್ನು ಹಾಜರುಪಡಿಸಲಾಗಿದ್ದು ಆತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆತನನ್ನು ನಂತರ ಮದುರೈ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ. ಆತನ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಎ.19 ರ ತನಕ ವಿಸ್ತರಿಸಿದೆ.

ಮದುರೈ ಕ್ರೈಂ ಬ್ರ್ಯಾಂಚ್‌ ಪೊಲೀಸರ ಕಶ್ಯಪ್‌ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ ಬಿಹಾರದಿಂದ ವಿಶೇಷ ಪೊಲೀಸ್‌ ತಂಡ ಬಂಧಿಸಿತ್ತು,

ಇದಕ್ಕೂ ಮುನ್ನ ಮಾರ್ಚ್‌ 18 ರಂದು ಕಷ್ಯಪ್‌ ಬಿಹಾರದ ಜಗದೀಶಪುರ ಠಾಣೆಗೆ ಶರಣಾದ ನಂತರ ಬಿಹಾರ ಪೊಲೀಸರ ಆರ್ಥಿಕ ಅಪರಾಧಗಳ ಘಟಕ ಆತನನ್ನು ಬಂಧಿಸಿತ್ತು.

ತಮಿಳುನಾಡಿನಲ್ಲಿ ವಲಸಿಗ ಕಾರ್ಮಿಕರ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ಹೇಳಿಕೊಂಡು ಕಳೆದ ತಿಂಗಳು ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ನಂತರ ವಲಸಿಗ ಕಾರ್ಮಿಕರು ಭೀತಿಯಿಂದ ತಮ್ಮೂರುಗಳಿಗೆ ಮರಳಿದ ವಿದ್ಯಮಾನ ನಡೆದಿತ್ತು.