Monday, 12th May 2025

ಮಮತಾ ಬ್ಯಾನರ್ಜಿ ಆಪ್ತ ಅನುಬ್ರತಾ ಬಂಧನ

ಕೊಲ್ಕತ್ತಾ: ದನಗಳ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಅನುಬ್ರತಾರನ್ನು ಗುರುವಾರ ಬಂಧಿಸಿದೆ.

ಬಿರಭಮ್ ಜಿಲ್ಲೆಯ ಟಿಎಂಸಿ ಅಧ್ಯಕ್ಷರೂ ಆಗಿರುವ ಅನುಬ್ರತಾರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ 10 ಬಾರಿ ಸಮನ್ಸ್ ನೀಡಿತ್ತು.

ಆದರೆ ಅನಾರೋಗ್ಯದ ನೆಪ ಹೇಳಿ ವಿಚಾರಣೆಯಿಂದ ದೂರ ಉಳಿದಿದ್ದರು. ಸಿಬಿಐ ನ್ಯಾಯಾಲಯದ ಮೊರೆ ಹೋಗಿದ್ದು, ಸೂಕ್ತ ಆದೇಶ ಪಡೆದು ಅವರ ಮನೆಯಲ್ಲಿ ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಅನುಬ್ರತಾ ಭಾರೀ ಪ್ರಭಾವಿ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.

ಮಮತಾ ಅವರ ಆಪ್ತ ಬಳಗ ದಲ್ಲಿರುವ ಅವರ ಭದ್ರತೆಗಾಗಿ ಗನ್‍ಮ್ಯಾನ್ ನೀಡಲಾಗಿತ್ತು. ಪಶ್ಚಿಮ ಬಂಗಾಳದಿಂದ ಗಡಿಯ ಮೂಲಕ ಬಾಂಗ್ಲಾದೇಶಕ್ಕೆ ದನಗಳ ಕಳ್ಳ ಸಾಗಾಣಿಕೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಅಸನ್ಸೋಲ್ ನ್ಯಾಯಾಲಯಕ್ಕೆ ಸಲ್ಲಿಸಿರುವ 40 ಪುಟಗಳ ದೋಷಾ ರೋಪಣಾ ಪಟ್ಟಿಯಲ್ಲಿ 11 ಮಂದಿ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.

ಪ್ರಕರಣದಲ್ಲಿ ಅನುಬ್ರತಾರ ಗನ್‍ಮ್ಯಾನ್ ಸೈಗಲ್ ಹುಸೇನ್‍ನನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿತ್ತು, ಆತನನ್ನು ಬಂಧಿಸಲಾಗಿದೆ.

ಕಾಲ್ ರೆಕಾರ್ಡ್ ಪರಿಶೀಲಿಸಿದಾಗ ದನದ ಕಳ್ಳ ಸಾಗಾಣಿಕೆದಾರರು ಮತ್ತು ದನಗಳ ಮಾಲೀ ಕರ ಜೊತೆ ನೇರ ಸಂಪರ್ಕ ಇರುವುದು ಪತ್ತೆಯಾಗಿದೆ. ಆತ ನೀಡಿದ ಮಾಹಿತಿ ಮೇರೆಗೆ ಅನುಬ್ರತಾರನ್ನು ವಿಚಾರಣೆ ನಡೆಸಲು ಸಿಬಿಐ ಮುಂದಾಗಿತ್ತು. ಅವರು ಸ್ಪಂದಿಸದ ಹಿನ್ನೆಲೆ ಯಲ್ಲಿ ಬೆಳಗ್ಗೆ ಬಂಧಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.