Monday, 12th May 2025

ಭಾರತವು ಇನ್ನು ಮುಂದೆ ಕಾಂಗ್ರೆಸ್ ಅಧಿಪತ್ಯವಲ್ಲ: ಕಾನೂನು ಸಚಿವ ಕಿರಣ್ ರಿಜಿಜು

ನವದೆಹಲಿ: ಭಾರತವು ಇನ್ನು ಮುಂದೆ ಅವರ ಅಧಿಪತ್ಯವಲ್ಲ, ಆ ಪಕ್ಷಕ್ಕೆ ಈ ಸತ್ಯವನ್ನು ಅರಗಿಸಿ ಕೊಳ್ಳಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ರಿಟನ್‌ನಲ್ಲಿ ಭಾರತದ ಕುರಿತು ಹೇಳಿಕೆಗಳ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಗುರುವಾರ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ತೊಂದರೆಗೆ ಸಿಲುಕಿದರೆ, ಅದಕ್ಕೂ ನಮಗೂ ಸಂಬಂಧವಿಲ್ಲ. ಆದರೆ, ನಮ್ಮ ದೇಶವನ್ನು ದೂಷಿಸಿ ದರೆ, ಈ ದೇಶದ ಪ್ರಜೆಗಳಾಗಿ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ರಾಹುಲ್ ಅವರು ನ್ಯಾಯಾಂಗವನ್ನು ಅವಮಾನಿಸಿದ್ದಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಯು ದೃಢವಾಗಿದೆ, ರಾಹುಲ್ ದೇಶದ ಕ್ಷಮೆಯಾಚಿಸಬೇಕು ಎಂಬುದು ಒಂದೇ ನಮ್ಮ ಬೇಡಿಕೆಯಾಗಿದೆ. ಕಾಂಗ್ರೆಸ್ ಮತ್ತು ರಾಹುಲ್ ಅವರನ್ನು ಈ ದೇಶದ ಜನರು ತಿರಸ್ಕರಿಸಿದ್ದಾರೆ. ಅವರು ನಮ್ಮ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಇದು ಸ್ವೀಕಾರಾರ್ಹವಲ್ಲ.

ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ರಾಹುಲ್ ಸುಳ್ಳು ಹೇಳಿದ್ದಾರೆಂದು ರಿಜಿಜು ಆರೋಪಿಸಿದರು.

ಸಂಸತ್ತಿನಲ್ಲಿ ಸಂಸದರಾಗಿರುವ ಅವರು ಸಂಸತ್ತಿಗೆ ಅವಮಾನ ಮಾಡಿದ್ದಾರೆ, ಇದು ಅತ್ಯಂತ ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.