Monday, 12th May 2025

ದೆಹಲಿಯ ನೂತನ ಸಚಿವರನ್ನಾಗಿ ಅತಿಶಿ, ಸೌರಭ್ ಭಾರದ್ವಾಜ್ ನೇಮಕ

ವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಲಹೆಯ ಮೇರೆಗೆ ರಾಷ್ಟ್ರಪತಿ ಅವರು ಆಮ್ ಆದ್ಮಿ ಪಕ್ಷದ ಶಾಸಕರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರನ್ನು ದೆಹಲಿಯ ನೂತನ ಸಚಿವರನ್ನಾಗಿ ನೇಮಕ ಮಾಡಿದ್ದಾರೆ.

ಈ ಇಬ್ಬರು ಶಾಸಕರು ಪ್ರಮಾಣ ವಚನ ಸ್ವೀಕರಿಸಿದ ದಿನಾಂಕದಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಅತಿಶಿ, ಸೌರಭ್ ಭಾರದ್ವಾಜ್ ಅವರನ್ನು ದೆಹಲಿ ಸಂಪುಟಕ್ಕೆ ನೇಮಕ ಮಾಡುವಂತೆ ದೆಹಲಿ ಸಿಎಂ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್‌ಗೆ ಶಿಫಾರಸು ಮಾಡಿದ್ದರು. ಅದನ್ನು ಲೆಫ್ಟಿನೆಂಟ್ ಗವರ್ನರ್‌ ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು.

ಎಎಪಿ ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದು, ನೂತನ ಸಚಿವರನ್ನಾಗಿ ಅತಿಶಿ, ಸೌರಭ್ ಭಾರದ್ವಾಜ್ ಅವರನ್ನು ನೇಮಕ ಮಾಡಿದ್ದಾರೆ.

ದೆಹಲಿಯ ಕಲ್ಕಾಜಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅತಿಶಿ ಅವರು, ಸಿಸೋಡಿಯಾ ಅವರ ಶಿಕ್ಷಣ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.