Monday, 12th May 2025

Couple Sold Child: ಛೇ…ಇವರೆಂಥಾ ಪಾಪಿಗಳು! 40 ಸಾವಿರ ಹಣಕ್ಕಾಗಿ 4 ವರ್ಷದ ಕಂದನನ್ನೇ ಮಾರಿದ ದಂಪತಿ

ಭುವನೇಶ್ವರ : ಬಿಹಾರ (Bihar) ದಂಪತಿ 40 ಸಾವಿರ ಹಣಕ್ಕಾಗಿ ತಮ್ಮ ನಾಲ್ಕು ವರ್ಷದ ಸ್ವಂತ ಮಗಳನ್ನೇ ಮಾರಿರುವ ಪ್ರಕರಣ ವರದಿಯಾಗಿದೆ. ಒಡಿಶಾದ ಪೀಪ್ಲಿ (Odisha’s Pipili ) ಪ್ರದೇಶದಲ್ಲಿರುವ ಮಕ್ಕಳಿಲ್ಲದ ದಂಪತಿಗೆ ಮಾರಿದ್ದಾರೆ ಎಂದು ತಿಳಿದು ಬಂದಿದೆ. (Couple Sold Child). ಪೊಲೀಸರು ಮಗುವನ್ನು ರಕ್ಷಿಸಿದ್ದು, ಆರು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಮಗುವಿನ ತಂದೆ-ತಾಯಿ, ಖರೀದಿಸಿದ ದಂಪತಿ ಹಾಗೂ ಮಧ್ಯವರ್ತಿಗಳು ಸೇರಿದ್ದಾರೆ.

ಭುವನೇಶ್ವರದ ಮನೆ ಮಾಲಿಕ ಸಾರ್ಥಕ್ ಮೊಹಾಂತಿ (Sarthak Mohanty) ಎಂಬುವವರು ತಮ್ಮ ಮನೆಯಲ್ಲಿ ಬಾಡಿಗೆಗೆ ಇರುವ ದಂಪತಿಗೆ ಬಿಹಾರದ ದಂಪತಿ ತಮ್ಮ ಮಗುವನ್ನು ಮಾರಾಟ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮನೆ ಮಾಲೀಕ ನೀಡಿದ ಮಾಹಿತಿಯ ಆಧಾರದ ಮೇಲೆ ಬಡಾಗಾಡಾ ಪೊಲೀಸರು ದಾಳಿ ನಡೆಸಿದ್ದಾರೆ. ಮಗುವನ್ನು ರೂ. 40 ಸಾವಿರಕ್ಕೆ ಮಾರಾಟ ಮಾಡಿರುವುದಾಗಿ ದಂಪತಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯನ್ನು ಮಾರಿದ ದಂಪತಿ ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಾಲಕಿಯು ತನ್ನ ತಂದೆಯ ಮೊದಲ ಪತ್ನಿಯ ಮಗಳು ಎಂದು ಚೈಲ್ಡ್‌ಲೈನ್‌ (Childline) ನಿರ್ದೇಶಕ ಬೇಣುಧರ ಸೇನಾಪತಿ ತಿಳಿಸಿದ್ದಾರೆ.

ನವಜಾತ ಶಿಶುವನ್ನು ಮಾರಿದ್ದ ತಾಯಿ

ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಗಂಡನನ್ನು ಕಳೆದುಕೊಂಡು, ಕಡು ಬಡತನದಲ್ಲಿ ತ್ರಿಪುರಾದ ಧಲೈ ಜಿಲ್ಲೆಯ ಬುಡಕಟ್ಟು ಮಹಿಳೆಯೊಬ್ಬರು ತನ್ನ ನವಜಾತ ಶಿಶುವನ್ನು ₹5,000ಕ್ಕೆ ಮಾರಾಟ ಮಾಡಿದ ಪ್ರಕರಣದ ವರದಿಯಾಗಿತ್ತು. ತ್ರಿಪುರಾ ಜಿಲ್ಲೆಯ ಹೆಜಾಮರದ ದಂಪತಿ, ನಾಲ್ಕು ದಿನದ ಹೆಣ್ಣು ಮಗುವನ್ನು ಖರೀದಿಸಿದ್ದರು. ವಿಷಯ ಗೊತ್ತಾದ ಕೂಡಲೇ ವಿರೋಧ ಪಕ್ಷದ ನಾಯಕ ಜಿತೇಂದ್ರ ಚೌಧರಿ ಅವರ ಮಧ್ಯಸ್ಥಿಕೆಯಲ್ಲಿ ಮಗುವನ್ನು ರಕ್ಷಿಸಿ, ಪುನಃ ತಾಯಿಗೆ ಹಿಂದಿರುಗಿಸಲಾಯಿತು ಎಂದು ಮೂಲಗಳು ತಿಳಿಸಿದ್ದವು.

ಗಂಡಚೆರ್ರಾ ಉಪವಿಭಾಗದ ತರಬನ್‌ ಕಾಲೋನಿಯ ಮೊರ್ಮತಿ ತ್ರಿಪುರ (39) ಅವರು ಮನೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಐದು ತಿಂಗಳ ಹಿಂದೆ ಪತಿ ಸಾವಿಗೀಡಾಗಿದ್ದರಿಂದ ತೀವ್ರವಾದ ಬಡತನ ಕಾಡುತ್ತಿತ್ತು. ಈಗಾಗಲೇ ಇಬ್ಬರು ಪುತ್ರರು ಮತ್ತು ಒಬ್ಬ ಮಗಳನ್ನು ಹೊಂದಿದ್ದ ಅವರಿಗೆ ಮತ್ತೊಂದು ಮಗುವಿನ ಪೋಷಣೆ ಆರ್ಥಿಕವಾಗಿ ಕಷ್ಟಕರವಾಗಿತ್ತು. ಹೀಗಾಗಿ ಅವರು ಹೆಜಾಮರದ ದಂಪತಿಗೆ ಮಗುವನ್ನು ₹5,000ಕ್ಕೆ ಮಾರಿದ್ದರು ಎಂದು ಉಪ ವಿಭಾಗಾಧಿಕಾರಿ ಅರಿಂದಮ್‌ ದಾಸ್‌ ತಿಳಿಸಿದ್ದರು.

ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ತಕ್ಷಣಕ್ಕೆ ಮಗುವನ್ನು ರಕ್ಷಿಸಿ, ಪುನಃ ತಾಯಿಯೊಂದಿಗೆ ಸೇರಿಸಲಾಯಿತು ಎಂದು ಅವರು ಹೇಳಿದ್ದರು. ಕುಟುಂಬಕ್ಕೆ ನಿರಂತರ ನೆರವಿನ ಭರವಸೆಯನ್ನೂ ಅವರು ನೀಡಿದ್ದರು. ಉರುವಲು ಮಾರಿ ಸಂಸಾರ ನಡೆಸುತ್ತಿದ್ದ ಮೋರ್ಮತಿ ಅವರ ಪತಿ ಪೂರ್ಣಾಜೋಯ್‌ ಅವರು ಐದು ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಸೂಕ್ತ ವೈದ್ಯಕೀಯ ನೆರವು ಪಡೆಯಲೂ ಅವರಿಗೆ ಆರ್ಥಿಕ ಸಂಕಷ್ಟ ಇತ್ತು. ಇಷ್ಟು ಬಡತನ ಇದ್ದರೂ ಆ ಕುಟುಂಬದ ಬಳಿ ಬಿಪಿಎಲ್‌ ಪಡಿತರ ಚೀಟಿ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಜಿತೇಂದ್ರ ಚೌಧರಿ ಬೇಸರ ವ್ಯಕ್ತಪಡಿಸಿದ್ದರು. ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಟೀಕಿಸಿದ್ದರು.

ಈ ಸುದ್ದಿಯನ್ನೂ ಓದಿ : Kidnap case: ಮನೆ ಮುಂದೆ ಆಡುತ್ತಿದ್ದ ಮಗು ಕಿಡ್ನಾಪ್‌, ಮರಳಿ ಪೋಷಕರ ಮಡಿಲಿಗೆ