ಗುವಾಹಟಿ: ಗುವಾಹಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೀಲ್ಚೇರ್ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ಮಹಿಳೆಯನ್ನು ಭದ್ರತಾ ತಪಾಸಣೆಯ ವೇಳೆ ವಿವಸ್ತ್ರಗೊಳಿಸಿ ತಪಾಸಣೆ ನಡೆಸಲಾಗಿದೆ ಎಂಬ ದೂರಿನ ಮೇರೆಗೆ ಮಹಿಳಾ ಪೇದೆಯನ್ನು ಅಮಾನತುಗೊಳಿಸಲಾಗಿದೆ.
ಮಹಿಳಾ ಪೇದೆಯನ್ನು ಅಮಾನತುಗೊಳಿಸಲಾಗಿದ್ದು, ಘಟನೆಯ ಕುರಿತು ವಿಚಾರಣೆ ನಡೆಯುತ್ತಿದೆ.
ಗುವಾಹಟಿ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ತನ್ನ ಅಂಗವಿಕಲ ತಾಯಿಯನ್ನು ವಿವಸ್ತ್ರ ಗೊಳಿಸಲಾಗಿದೆ ಎಂದು ದೆಹಲಿಗೆ ತೆರಳಿದ ವೃದ್ಧೆಯ ಮಗಳು ಡಾಲಿ ಕಿಕಾನ್ ಅವರು ಟ್ವೀಟ್ ಮಾಡಿದ್ದರು.
ನನ್ನ ತಾಯಿಯ ಟೈಟಾನಿಯಂ ಸೊಂಟದ ಶಸ್ತ್ರಚಿಕಿತ್ಸೆಯ ಬಗ್ಗೆ ಭದ್ರತಾ ಸಿಬ್ಬಂದಿಗೆ ‘ಪುರಾವೆ’ ಬೇಕಿತ್ತು. ಅದಕ್ಕಾಗಿ ಆಕೆ ಬಟ್ಟೆ ಕಳಚುವಂತೆ ಬಲವಂತ ಮಾಡಿದ್ದಾರೆ. ನಾವು ಹಿರಿಯರನ್ನು ನಡೆಸಿಕೊಳ್ಳುವ ಬಗೆ” ಎಂದು ಡಾಲಿ ಅವರು ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ, ಗುವಾಹಟಿ ವಿಮಾನ ನಿಲ್ದಾಣ ಮುಂತಾದವುಗಳನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.
ಕಷ್ಟದಲ್ಲಿರುವ ಪ್ರಯಾಣಿಕರ ಭದ್ರತೆ ಮತ್ತು ಘನತೆ ಕಾಪಾಡುವುದು ಎರಡೂ ಜತೆಯಾಗಿ ಸಾಗಬೇಕು. ಗುವಾಹಟಿ ವಿಮಾನ ನಿಲ್ದಾಣದಲ್ಲಿ ನಡೆದ ದುರದೃಷ್ಟಕರ ಘಟನೆಗೆ ಸಂಬಂಧಿಸಿದಂತೆ ಸಿಐಎಸ್ಎಫ್ ವಿಚಾರಣೆ ಆರಂಭಿಸಿದೆ. ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.