Sunday, 11th May 2025

CBI raid: ಅಫೀಮು ಕೃಷಿ ಪರವಾನಿಗೆ ನೀಡಲು ಲಂಚ ಕೇಳಿದ ಅಧಿಕಾರಿ CBI ಬಲೆಗೆ

CBI raid

ಭೋಪಾಲ್‌: ಮಧ್ಯಪ್ರದೇಶದ ಮಂಡಸೌರ್‌ನಲ್ಲಿ ಅಫೀಮು ಕೃಷಿ ಪರವಾನಿಗೆ ವರ್ಗಾವಣೆಗಾಗಿ (Opium Cultivation) ವ್ಯಕ್ತಿಯೊಬ್ಬರಿಂದ 1.10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್ (CBN) ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಶನಿವಾರ ವರದಿ ಮಾಡಿದೆ (CBI raid).

ಸಿಬಿನ್‌ ಸಬ್‌ ಇನ್‌ಸ್ಪೆಕ್ಟರ್ ಅಭಿಷೇಕ್ ಅಗ್ನಿಹೋತ್ರಿ ಆರೋಪಿ. ಇವರು ಮಂಡಸೌರ್‌ ಗ್ರಾಮದ ನಿವಾಸಿ ಬದ್ರಿಲಾಲ್ ಧಕಡ್ ಅವರಿಗೆ ಅಫೀಮು ಕೃಷಿಗೆ ಪರವಾನಗಿ ನೀಡಲು 1 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪವಿದ್ದು, ಸದ್ಯ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯಲು ಕೆಳ ಅಧಿಕಾರಿಯನ್ನು ಅಗ್ನಿಹೋತ್ರಿ ಕಳುಹಿಸಿದ್ದರು ಎಂದು ತಿಳಿದು ಬಂದಿದೆ. ಕೆಳ ಹಂತದ ಅಧಿಕಾರಿಯನ್ನು ಪ್ರಶ್ನಿಸಿದಾಗ ಆತ ಅಗ್ನಿಹೋತ್ರಿ ಬಗ್ಗೆ ಅವರೇ ಲಂಚ ತೆಗೆದುಕೊಂಡು ಬರಲು ಹೇಳಿದ್ದರು ಎಂಬ ಸತ್ಯವನ್ನು ಹೇಳಿದ್ದಾನೆ. ಎಸ್‌ಐ ಅಭಿಷೇಕ್ ಅಗ್ನಿಹೋತ್ರಿ ಈ ಹಿಂದೆ ಲಂಚದ ಆರೋಪ ಎದುರಿಸಿದ್ದರು ಎಂದು ತಿಳಿದು ಬಂದಿದೆ. ಇದೀಗ ದೂರುದಾರ ನೀಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

ದೂರುದಾರ ರೈತ ಬದ್ರಿಲಾಲ್ ಧಕಡ್ ಅವರ ತಂದೆ ನಿರ್ಭಯರಾಮ್ ಧಕಡ್ ಹೆಸರಿನಲ್ಲಿ ಅಫೀಮು ಗುತ್ತಿಗೆ ಇದೆ. ಅದನ್ನು ತನ್ನ ಹೆಸರಿಗೆ ವರ್ಗಾಯಿಸಲು ಬದ್ರಿಲಾಲ್ ಧಕಡ್ ಬಯಸಿದ್ದರು. ಅದಕ್ಕಾಗಿ ಅವರು ನಾರ್ಕೋಟಿಕ್ಸ್ ಕಚೇರಿಯನ್ನು ತಲುಪಿದಾಗ ಸಬ್ ಇನ್ಸ್‌ಪೆಕ್ಟರ್ ಅಭಿಷೇಕ್ ಅಗ್ನಿಹೋತ್ರಿ ಅವರು ಹಣಕ್ಕಾಗಿ ಒತ್ತಾಯಿಸಿದ್ದಾರೆ. ಮೊದಲು 1 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ ಅವರು ನಂತರ ಹೆಚ್ಚು ಹಣ ನೀಡುವಂತೆ ಪೀಡಿಸುತ್ತಿದ್ದರಂತೆ. ಇದರಿಂದ ಬೇಸತ್ತು ಬದ್ರಿಲಾಲ್ ಧಕಡ್ ಸಿಬಿಐ ಮೊರೆ ಹೋಗಿದ್ದರು.

ಇತ್ತೀಚೆಗೆ ಹಲವು ಕಡೆ ಲಂಚದ ಪ್ರಕರಣ ಕೇಳಿ ಬರುತ್ತಿರುವದರಿಂದ ರೈತರು ಮಂಡಸೌರ್‌ ಸಂಸದ ಸುಧೀರ್ ಗುಪ್ತಾ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು.

ಇದನ್ನೂ ಓದಿ : Alisha Abdullah: ಕಿರುಕುಳ ನೀಡಿದ ವ್ಯಕ್ತಿಯ ಹೆಡೆಮುರಿ ಕಟ್ಟಿ ಪೊಲೀಸ್‌ ಠಾಣೆಗೆ ಎಳೆದೊಯ್ದ ಬಿಜೆಪಿ ನಾಯಕಿ; ವಿಡಿಯೊ ವೈರಲ್‌