Monday, 12th May 2025

ಮನೆಯ ಟೆರೇಸ್ ನಲ್ಲಿ ಸ್ಫೋಟ: ಆರೆಸ್ಸಸ್-ಬಿಜೆಪಿ ಕಾರ್ಯಕರ್ತ ಕೈ ಛಿದ್ರ

ವಡಕ್ಕರ: ಮಣಿಯೂರಿನಲ್ಲಿಯ ಮನೆಯೊಂದರ ಟೆರೇಸ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಯುವಕನೋರ್ವನ ಕೈಗಳು ಚೂರುಚೂರಾಗಿ, ಆತನನ್ನು ಕೊಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೇರಂಡತ್ತೂರ್ನ ಐಎಚ್ಡಿಪಿ ಕಾಲನಿಯ ನಿವಾಸಿ ಗಾಯಾಳು ಮಣಿಕುಟ್ಟನ್ ಅಲಿಯಾಸ್ ಹರಿಪ್ರಸಾದ (28) ಆರೆಸ್ಸಸ್-ಬಿಜೆಪಿ ಕಾರ್ಯಕರ್ತನಾಗಿದ್ದು, ಸ್ಫೋಟ ಸಂಭವಿಸಿದಾಗ ತಾಯಿಯೂ ಮನೆಯಲ್ಲಿದ್ದರು. ಸ್ಫೋಟದಿಂದ ಕಟ್ಟಡಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಪೊಲೀಸರು ಘಟನಾ ಸ್ಥಳ ತಲುಪಿದಾಗ ತಾಳೆ ಎಲೆಗಳು, ಮಾನವ ದೇಹದ ಮಾಂಸದ ಚೂರುಗಳು ಮತ್ತು ರಕ್ತ ಕಂಡುಬಂದಿದ್ದವು. ಬಾಂಬ್ ತಯಾರಿಸುವಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರಾದರೂ ಅದು ಬಾಂಬ್ ಅಥವಾ ಸಿಡಿಮದ್ದು ಎನ್ನುವು ದನ್ನು ದೃಢಪಡಿಸಿಲ್ಲ.

ಪ್ರದೇಶದಲ್ಲಿ ಯಾವುದೇ ರಾಜಕೀಯ ಉದ್ವಿಗ್ನತೆ ವರದಿಯಾಗಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದು, ಪ್ರದೇಶದಲ್ಲಿ ಹೆಚ್ಚಿನ ಪೊಲೀಸ ರನ್ನು ನಿಯೋಜಿಸಲಾಗಿದೆ ಎಂದು ವಡಕ್ಕರ ಡಿಎಸ್ಪಿ ಅಬ್ದುಲ್ ಶರೀಫ್ ತಿಳಿಸಿದರು.

ವಡಕ್ಕರ್ ಆರೆಸ್ಸೆಸ್ ನ ಪದಾಧಿಕಾರಿಯೋರ್ವರು, ಕಳೆದ ನಾಲ್ಕು ವರ್ಷಗಳಿಂದ ಹರಿಪ್ರಸಾದ ಆರೆಎಸ್ಸೆಸ್ ನ ಸಂಪರ್ಕದಲ್ಲಿರಲಿಲ್ಲ ಎಂದಿದ್ದಾರೆ.