Monday, 12th May 2025

Ajit Pawar: ಡಿಸೆಂಬರ್ 14ರಂದು ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ; ಅಜಿತ್‌ ಪವಾರ್‌ ಹೇಳಿಕೆ

Ajit Pawar

ಮುಂಬೈ: ಮಹಾರಾಷ್ಟ್ರದ (Maharashtra) ಚುನಾವಣೆ ನಡೆದು ಫಲಿತಾಂಶ ಹೊರಬಿದ್ದು ಇಷ್ಟು ದಿನ ಕಳೆದರೂ ಸಚಿವ ಸಂಪುಟ ಇನ್ನೂ ರಚನೆಯಾಗಿಲ್ಲ. ಇದೀಗ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ (Ajit Pawar) ಅವರು ಡಿ. 14ರಂದು ಸರ್ಕಾರದ ಸಚಿವ ಸಂಪುಟ ರಚನೆಯಾಗಲಿದೆ ಎಂದು ತಿಳಿಸಿದ್ದಾರೆ.

ಎನ್‌ಸಿಪಿ ಎಸ್‌ಪಿ ನಾಯಕ ಶರದ್‌ ಪವಾರ್‌ ಅವರ ಜನ್ಮದಿನಕ್ಕೆ ಶುಭ ಕೋರಲು ಅವರ ನಿವಾಸಕ್ಕೆ ಹೋಗಿದ್ದ ಅಜಿತ್‌ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ವಿಷಯ ತಿಳಿಸಿದರು.

ಮಹಾರಾಷ್ಟ್ರ ಸಂಪುಟ ರಚನೆಯ ಕುರಿತು ಊಹಾಪೋಹಗಳ ನಡುವೆ, ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಸಂಪುಟ ವಿಸ್ತರಣೆಯ ಬಗ್ಗೆ ಈಗಾಗಲೇ ನಿರ್ಧರಿಸಲಾಗಿದೆ ಮತ್ತು ಶೀಘ್ರದಲ್ಲೇ ಜನರಿಗೆ ತಿಳಿಯುತ್ತದೆ ಎಂದು ಹೇಳಿದರು.

ʼʼಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿ ನಾನು ಮತ್ತು ಅಜಿತ್ ಪವಾರ್ ದೆಹಲಿಗೆ ತೆರಳುತ್ತಿರುವ ಬಗ್ಗೆ ನೀವು ಸಾಕಷ್ಟು ಸುದ್ದಿಗಳನ್ನು ಹರಿಬಿಟ್ಟಿದ್ದೀರಿ. ನಾನು ಅದನ್ನು ನೋಡಿದ್ದೇನೆ. ಆದರೆ ನಾನು ಪಕ್ಷಕ್ಕೆ ಸಂಬಂಧಿಸಿದ ಸಭೆಗಾಗಿ ಮತ್ತು ಅಜಿತ್‌ ಪವಾರ್‌ ಅವರ ವೈಯಕ್ತಿಕ ಕೆಲಸಕ್ಕಾಗಿ ಬಂದಿದ್ದಾರೆ. ಸಂಪುಟ ರಚನೆ ಕುರಿತು ಪಕ್ಷದ ಹಿರಿಯರು ತೀರ್ಮಾನ ಕೈಗೊಳ್ಳುತ್ತಾರೆ. ಅಂತೆಯೇ ಎನ್‌ಸಿಪಿ ಮತ್ತು ಶಿವಸೇನೆಯು ತಮ್ಮ ಸಚಿವರ ಹೆಸರನ್ನು ನಿರ್ಧರಿಸುತ್ತದೆʼʼ ಎಂದು ದೇವೇಂದ್ರ ಫಡ್ನವೀಸ್‌ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಮಹಾಯುತಿ ಮೈತ್ರಿಕೂಟವು ಭಾರಿ ಬಹುಮತವನ್ನು ಹೊಂದಿದ್ದರೂ ತನ್ನ ಸಚಿವ ಸಂಪುಟವನ್ನು ಹೆಸರಿಸದ ಕಾರಣ ವಿರೋಧ ಪಕ್ಷದ ಟೀಕೆಗೆ ಗುರಿಯಾಗಿದೆ. ಯುಬಿಟಿ ಶಿವ ಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, “ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ನವೆಂಬರ್ 23ರಂದು ಪ್ರಕಟಿಸಲಾಗಿದೆ . ಸಿಎಂ ಮತ್ತು ಉಪ ಮುಖ್ಯಮಂತ್ರಿಗಳನ್ನು ನಿರ್ಧರಿಸಲು ಅವರಿಗೆ 10-11 ದಿನಗಳು ಬೇಕಾಯಿತು. ರಾಜ್ಯ ಸಂಪುಟದ ಸಚಿವರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪರ್ಭಾನಿ ನಗರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿರುವುದರಿಂದ ರಾಜ್ಯದ ಗೃಹ ಸಚಿವರು ಯಾರು ಎಂಬುದು ನಮಗೆ ತಿಳಿದಿಲ್ಲʼʼ ಎಂದು ವ್ಯಂಗ್ಯವಾಡಿದ್ದಾರೆ

ಈ ಸುದ್ದಿಯನ್ನೂ ಓದಿ: Supreme Court : ಶರದ್‌ಗೆ ಪವಾರ್‌ಗೆ ಸುಪ್ರೀಂನಲ್ಲಿ ಹಿನ್ನಡೆ; ಗಡಿಯಾರ ಚಿಹ್ನೆ ಅಜಿತ್‌ಗೆ ಎಂದ ಕೋರ್ಟ್‌