ಬೆಂಗಳೂರು: ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಜನ ಹೆಚ್ಚು ಮೆಚ್ಚಿಕೊಳ್ಳುತ್ತಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಆ ಸಾಲಿಗೆ ʼಅಪಾಯವಿದೆ ಎಚ್ಚರಿಕೆʼ ಚಿತ್ರ ಸಹ ಸೇರುವ ಎಲ್ಲ ಲಕ್ಷಣಗಳಿದೆ. ಮಲೆನಾಡು ಮೂಲದ ಅಭಿಜಿತ್ ತೀರ್ಥಹಳ್ಳಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಅಣ್ಣಯ್ಯʼ ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ (Vikash Uthaiah) ನಾಯಕನಾಗಿ ನಟಿಸಿದ್ದಾರೆ. ವಿ.ಜಿ.ಮಂಜುನಾಥ್ ಹಾಗು ಪೂರ್ಣಿಮಾ ಎಂ. ಗೌಡ ನಿರ್ಮಾಣ ಮಾಡಿದ್ದಾರೆ. ಇತ್ತೀಚಿಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಯಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು (Apaayavide Eccharike Movie).
ʼʼನನಗೂ ಚಿತ್ರರಂಗಕ್ಕೂ ಹತ್ತು ವರ್ಷಗಳ ನಂಟು. ಕೆಲವು ಚಿತ್ರಗಳಿಗೆ ಸಹ ನಿರ್ದೇಶಕನಾಗಿದ್ದ ನಾನು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗುತ್ತಿದ್ದೇನೆ. ಪಂಚಭೂತಗಳ ಆಧಾರದ ಮೇಲೆ ಈ ಚಿತ್ರದ ಕಥೆ ಹೆಣೆಯಲಾಗಿದೆ. ಒಂದು ಪಾತ್ರಗಳು ಒಂದೊಂದು ತತ್ವವನ್ನು ಪ್ರತಿನಿಧಿಸುತ್ತದೆ. ವಿಕಾಶ್ ಉತ್ತಯ್ಯ ಸೂರಿ ಪಾತ್ರದಲ್ಲಿ, ರಾಘವ್ ಕೊಡಚಾದ್ರಿ ಹಾಗೂ ಮಿಥುನ್ ತೀರ್ಥಹಳ್ಳಿ ವಿಕಾಶ್ ಅವರ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ರಾಧಾ ಭಗವತಿ ರಾಧಾ ಎಂಬ ಹೆಸರಿನಲ್ಲೆ ಬ್ರಾಹ್ಮಣ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಸ್ಪೆನ್, ಅಡ್ವೆಂಚರ್, ಹಾರರ್ ಜಾನಾರ್ನ ಈ ಚಿತ್ರಕ್ಕೆ ಸುನಾದ್ ಗೌತಮ್ ಛಾಯಾಗ್ರಹಣದೊಂದಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. 3 ಹಾಡುಗಳಿದ್ದು, ಆನಂದ್ ಆಡಿಯೋ ಆಡಿಯೋ ಹಕ್ಕು ಪಡೆದುಕೊಂಡಿದೆ. ಚಿತ್ರಕ್ಕೆ ಹರ್ಷಿತ್ ಪ್ರಭು ಸಂಕಲನವಿದೆʼʼ ಎಂದು ತಿಳಿಸಿದ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಚಿತ್ರವನ್ನು ಜನವರಿಯಲ್ಲಿ ತೆರೆಗೆ ತರುವುದಾಗಿ ಹೇಳಿದ್ದಾರೆ.
ನಾಯಕ ವಿಕಾಶ್ ಉತ್ತಯ್ಯ ಮಾತನಾಡಿ, ʼʼಸಿನಿಮಾ ಅನ್ನುವುದು ಕೃತಿ, ಹಾಗೆ ಕೃಷಿ. ಅದನ್ನು ರಚಿಸಿ, ರುಚಿಸಿ ನಿರ್ದೇಶಿಸುವುದು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಅವರ ಬಹು ದಿನಗಳ ಕನಸು. ಆ ಕನಸು ಇಂದು ನನಸಾಗಿದೆ. ಅವರು ಈ ಚಿತ್ರಕ್ಕಾಗಿ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ನಮ್ಮನೆಲ್ಲ ಅವರು ಆಡಿಷನ್ ಮಾಡಿದ ರೀತಿಯೇ ವಿಭಿನ್ನ. ಸೂರಿ ನನ್ನ ಪಾತ್ರದ ಹೆಸರುʼʼ ಎಂದು ತಿಳಿಸಿದ್ದಾರೆ.

ʼʼಕದ್ದು ಮುಚ್ಚಿʼ ನಂತರ ನಾನು ನಿರ್ಮಾಣ ಮಾಡಿರುವ ಚಿತ್ರವಿದು. ಸಹೋದರಿ ಪೂರ್ಣಿಮಾ ಕೂಡ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ನಿರ್ದೇಶಕ ಅಭಿಜಿತ್ ಅವರ ಶ್ರಮ ಈ ಚಿತ್ರಕ್ಕೆ ಸಾಕಷ್ಟಿದೆʼʼ ಎಂದು ನಿರ್ಮಾಪಕ ಮಂಜುನಾಥ್ ವಿವರಿಸಿದ್ದಾರೆ.
ನಟರಾದ ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ನಟಿ ರಾಧಾ ಭಗವತಿ, ಸಂಗೀತ ನಿರ್ದೇಶಕ ಹಾಗೂ ಛಾಯಾಗ್ರಾಹಕ ಸುನಾದ್ ಗೌತಮ್ ಹಾಗೂ ಸಂಕಲನಕಾರ ಹರ್ಷಿತ್ ಪ್ರಭು ʼಅಪಾಯವಿದೆ ಎಚ್ಚರಿಕೆʼ ಕುರಿತು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Deepika Padukone: ಬೆಂಗಳೂರಿನ ಟ್ರಾಫಿಕ್ನಲ್ಲಿ ಕಾರು ನಿಲ್ಲಿಸಿ ನಡೆದೇ ಹೋದ ದೀಪಿಕಾ ಪಡುಕೋಣೆ!