ಬಸವ ಮಂಟಪ
ರವಿ ಹಂಜ್
ಪರೋಕ್ಷವಾಗಿ ‘ಅಸಿಂಧು’ ಎನಿಸುವ ಸಿಂಧೂ ಮೂಲದ ಹಿಂದೂ ಮತಧರ್ಮಗಳನ್ನು ಸಾಂವಿಧಾನಿಕವಾಗಿ ಯಾಗಲಿ, ನ್ಯಾಯಾಂಗವಾಗಿಯಾಗಲಿ ಮಾನ್ಯತೆ ಕೊಡಲು ಒಂದು ವಿಶ್ಲೇಷಣಾಪೂರ್ಣ ಅವಲೋಕನದಿಂದ ಪ್ರಯತ್ನಿಸಿದ್ದರೆ ಹಿಂದೂ ಪ್ರಭೇದದ ಎಲ್ಲಾ ಪಂಥಗಳೂ ಧಾರ್ಮಿಕ ಮಾನ್ಯತೆ ಪಡೆಯುತ್ತಿದ್ದವಷ್ಟೇ. ಆದರೆ ಭಾರತೀಯ ಮತಧರ್ಮಗಳನ್ನು ಮಾನ್ಯ ಮಾಡಲು ಭಾರತೇತರ ಮತಧರ್ಮಗಳಂತೆ ಧರ್ಮವೆಂದರೆ ಒಬ್ಬ ಧರ್ಮಗುರು, ಒಂದು ಧರ್ಮಗ್ರಂಥ ಇರಲೇಬೇಕೆಂಬ ಸೀಮಿತ ಬಾಲಿಶ ಚೌಕಟ್ಟನ್ನು ಹಿಂದೂ ಧರ್ಮದ ಆಧಾರದ
ಮೇಲೆಯೇ ವಿಭಜಿತಗೊಂಡ ಭಾರತವು ತನ್ನ ನೆಲಮೂಲದ ಧಾರ್ಮಿಕ ಪಂಥಗಳ ಹೊರತಾಗಿಯೂ ಗಾಢವಾಗಿ
ಅಪ್ಪಿಕೊಂಡುಬಿಟ್ಟಿದೆ! ಇದು ಸರಿಯೇ?
ವಿಶ್ವದ ಮತಧರ್ಮಗಳಲ್ಲಿ ಎರಡು ವಿಧ. ಒಂದನೇ ವಿಧದ ಮತಧರ್ಮಗಳು ಮಾನವ ವಿಕಾಸದೊಂದಿಗೆ ನೈಸರ್ಗಿಕ ವಾಗಿ ವಿಕಾಸಗೊಳ್ಳುತ್ತ ಜ್ಞಾನಿಗಳಿಂದ ಪರಿಷ್ಕೃತಗೊಳ್ಳುತ್ತ ಸಂಘಟನಾತ್ಮಕವಾಗಿ ಸ್ಥಾಪಿತಗೊಂಡರೆ, ಎರಡನೇ ವಿಧದ ಮತಧರ್ಮಗಳು ಪ್ರವಾದಿಗಳಿಂದ ಸ್ಥಾಪಿತವಾದವು. ಹಿಂದೂ ಸಂಸ್ಕೃತಿಯ ಪ್ರಭೇದದ ಮತಗಳು ಸುವ್ಯವಸ್ಥಿತ ಸಂಘಟನಾತ್ಮಕವಾಗಿ ವಿಕಸಿತಗೊಂಡ ಅನಾದಿ ಸಾಂಸ್ಕೃತಿಕ ಧರ್ಮಗಳು. ಯಹೂದಿ, ಕ್ರಿಶ್ಚಿಯನ್ ಮತ್ತು ಇಸ್ಲಾಂಗಳು ಪ್ರವಾದಿಗಳಿಂದ ಸ್ಥಾಪಿತಗೊಂಡ ಮಧ್ಯಂತರ ಮತಧರ್ಮಗಳು. ಪ್ರವಾದಿಗಳು “ನಮ್ಮ ಧಾರ್ಮಿಕ ತತ್ವಗಳು ಮೊದಲೇ ಇದ್ದವು, ಅವುಗಳನ್ನು ನಾನು ಪರಿಷ್ಕರಿಸಿರುವೆ’ ಎನ್ನದೆ ‘ಇವು ನನ್ನವೇ ತತ್ವಗಳು’ ಎಂದು ಹಕ್ಕೊತ್ತಾಯವನ್ನು ಮಂಡಿಸಿ ತಮ್ಮ ಚಿಂತನೆಯನ್ನು ಬೋಧಿಸಿದ್ದರೆ, ಭಾರತೀಯ ಪ್ರಭೇದದ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶೈವಾದ್ವೈತ, ಶಕ್ತಿವಿಶಿಷ್ಟಾದ್ವೈತದ ರಚನೆಕಾರರು ಇವೆಲ್ಲಕ್ಕೂ ಮೂಲ ವೇದಾಗಮೋಪ ನಿಷತ್ತುಗಳಲ್ಲಿಯೂ, ಬ್ರಹ್ಮಸೂತ್ರ ಭಗವದ್ಗೀತೆಗಳಲ್ಲಿಯೂ ಹೇಳಿರುವುದರ ಅನುಸಾರವಾಗಿ ತಮ್ಮ ಮತವಿದ್ದು ಅದಕ್ಕೆ ಭಾಷ್ಯವನ್ನು ತಾವು ಬರೆದಿರುವುದಾಗಿ ಹೇಳಿಕೊಂಡಿದ್ದಾರೆ.
ಉದಾಹರಣೆಗೆ ಶ್ರೀ ರಾಮಾನುಜಾಚಾರ್ಯರು, “ಶ್ರೀ ಭಗವದ್ ಬೋಧಾಯನ ಕೃತಾಂ ವಿಸ್ತೀರ್ಣಾಂ ಬ್ರಹ್ಮ ಸೂತ್ರವೃತ್ತಿಂ ಪೂರ್ವಾಚಾರ್ಯಾಸ್ಸಂಚಿಕ್ಷಿಪುಃ; ತನ್ಮತಾನುಸಾರೇಣ ಸೂತ್ರಾಕ್ಷರಾಣಿ ವ್ಯಾಖ್ಯಾಸ್ಯಂತೇ…” ಎಂದಿದ್ದಾರೆ. ಅರ್ಥಾತ್ ಭಗವದ್ ಬೋಧಾಯನರು ಬ್ರಹ್ಮಸೂತ್ರಕ್ಕೆ ವಿಸ್ತಾರವಾದ ವೃತ್ತಿಯನ್ನು ಬರೆದರೆಂತಲೂ, (ದ್ರಮಿಡಾಚಾ ರ್ಯರೇ ಮೊದಲಾದ) ಪೂರ್ವದ ಮಹನೀಯರು ಅದನ್ನು ಸಂಕ್ಷೇಪವಾಗಿ ಬರೆದರೆಂತಲೂ, ಅದನ್ನನುಸರಿಸಿ ತಾವು ಭಾಷ್ಯವನ್ನು ಬರೆಯುತ್ತಿರುವುದು ಎಂದು ಶ್ರೀಭಾಷ್ಯದ ಪ್ರಾರಂಭದಲ್ಲಿಯೇ ಶ್ರೀ ರಾಮಾನು ಜಾಚಾರ್ಯರು ಹೇಳಿದ್ದಾರೆ.
ಆದುದರಿಂದ ಶ್ರೀ ರಾಮಾನುಜಾಚಾರ್ಯರೇ ವಿಶಿಷ್ಟಾದ್ವೈತ ಮತಸ್ಥಾಪಕರು ಎನ್ನಲಾಗದು. ಅದೇ ರೀತಿ ಶ್ರೀಪತಿ ಪಂಡಿತಾರಾಧ್ಯ ರಚಿಸಿದ ಶ್ರೀಕರಭಾಷ್ಯದ ಪ್ರಾರಂಭವೂ ಹೀಗಿದೆ: “ಅಗಸ್ತ್ಯ ಮುನಿಚಂದ್ರೇಣ ಕೃತಾಂ ವೈಯಾಸಿಕೀಂ ಶುಭಾಂ | ಸೂತ್ರ ವೃತ್ತಿಂ ಸಮಾಲೋಕ್ಕ ಕೃತಂ ಭಾಷ್ಯಂ ಶಿವಂಕರಂ ||” ಅರ್ಥಾತ್ ಅಗಸ್ತ್ಯವೃತ್ತಿಯ ಆಧಾರದ ಮೇಲೆ ಶ್ರೀಕರಭಾಷ್ಯವು ಬರೆಯಲ್ಪಟ್ಟಿದೆ ಎನ್ನುವುದು, ಸಿದ್ಧಾಂತ ಶಿಖಾಮಣಿಯು ಅಗಸ್ತ್ಯವೃತ್ತಿಯ ಆಧಾರಗ್ರಂಥ ವಾಗಿದೆ ಎನ್ನುವ ಪುರಾಣವು ಸಹ ಇದನ್ನು ಹಿಂದೂ ಸಂಸ್ಕೃತಿಯ ಪ್ರಭೇದಕ್ಕೆ ಗಾಢವಾಗಿ ಜೋಡಿಸುತ್ತದೆ.
ಇದೇ ರೀತಿ ಶಂಕರಾಚಾರ್ಯ, ಮಧ್ವಾಚಾರ್ಯ, ಕಬೀರ್, ಮೀರಾ, ಸಂತ eನೇಶ್ವರ, ಆರ್ಯಸಮಾಜದ ದಯಾ
ನಂದ ಸರಸ್ವತಿಯವರೆಲ್ಲರ ತತ್ವಗಳೂ ಹಿಂದೂ ಸಂಸ್ಕೃತಿಯ ಪ್ರಭೇದಕ್ಕೆ ಗಾಢವಾಗಿ ಜೋಡಣೆಯಾಗಿವೆ. ಇಲ್ಲದಿದ್ದರೆ ಈ ಸುಧಾರಕರೆಲ್ಲ ಪ್ರವಾದಿಗಳಾಗಿ ಅವರು ಬೋಧಿಸಿದ ತತ್ವಗಳೆ ಒಂದೊಂದು ಪ್ರತ್ಯೇಕ ಧರ್ಮಗಳಾಗಿ ಬಿಡುತ್ತಿದ್ದವು.
ಆದರೆ ಹಾಗಾಗಲಿಲ್ಲವೇಕೆಂದರೆ ಅವರು ಹೀಗಿದ್ದದ್ದನ್ನು ಹೀಗೆ ಪರಿಷ್ಕರಿಸಿ, ಸುಧಾರಿಸಿ, ಸರಳಗೊಳಿಸಿದ್ದೇನೆ ಎಂದಿರುವ ಪ್ರಮುಖ ಕಾರಣದಿಂದಷ್ಟೇ. ಮಹಾವೀರ, ಬುದ್ಧ ಸಹ ಹೀಗೆಯೇ ಅಭಿಪ್ರಾಯ ಹೊಂದಿದ್ದರೂ ಅವರ
ಅನುಯಾಯಿಗಳು ಅವುಗಳನ್ನು ಮತಧರ್ಮ ಎಂದು ಆದಿಯಿಂದಲೂ ಕರೆದುಕೊಂಡ ಕಾರಣ ಅವು ಪ್ರತ್ಯೇಕ
ಧರ್ಮಗಳಾಗಿವೆ. ಅದೇ ರೀತಿ ಧರ್ಮ ಕರ್ಮ ಮೋಕ್ಷ ಎಂಬ ಹಿಂದೂ ಸಂಸ್ಕೃತಿಯ ಗಾಢಛಾಯೆಯೇ ಆಗಿರುವ ಸಿಖ್ ಧರ್ಮಕ್ಕೆ ಸಹ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿದೆ.
ಇದಕ್ಕೆ ಪ್ರಮುಖವಾಗಿ ಆಧ್ಯಾತ್ಮಿಕ ತಾತ್ವಿಕತೆಗಿಂತ ಸಿಖ್ಖರ ವೇಷಭೂಷಣದ ಭಿನ್ನತೆ ಕಾರಣವಾಗಿದೆ ಎನಿಸುತ್ತದೆ.
ಇನ್ನು ಧರ್ಮಸ್ಥಾಪಕರೆಂದು ಪರಿಗಣಿಸಿರುವ ಪ್ರವಾದಿಗಳು ಸಹ ಆಗಲೇ ಪ್ರವಾದಿ ಮೋಸಸ್ ಸ್ಥಾಪಿಸಿದ್ದ ಯಹೂದಿ
ಮತವನ್ನೇ ಪರಿಷ್ಕರಿಸಿ ಸುಧಾರಿಸಿದ್ದರೂ ಅವರು ಹಾಗೆ ಹೇಳಿಕೊಳ್ಳದೆ ‘ನಾನು’ ಎಂದ ಕಾರಣ ಅವು ಪ್ರತ್ಯೇಕ ಧರ್ಮ
ಗಳಾದವು. ಅವರು ‘ನಾನು’ ಎಂದದ್ದು ಪ್ರತಿಯೊಬ್ಬನೂ ತನ್ನ ಆತ್ಮವನ್ನು ಕುರಿತಾಗಿ ಎಂದುಕೊಳ್ಳಲಿ ಎಂದೋ
ಏನೋ ಗೊತ್ತಿಲ್ಲ. ಆದರೆ ಯೇಸುವು ಸ್ವ ಅಥವಾ ಆತ್ಮದ ಅರ್ಥದ “ನಾನೇ ಮಾರ್ಗ, ನಾನೇ ದೇವರು” ಎಂದಿzನೆ. ವೀರಶೈವದ ಆತ್ಮಲಿಂಗ ಸಹ ಇದೇ ಅರ್ಥದಲ್ಲಿ ಅನಾದಿಯಿಂದಲೂ ಇದೆ. ಹಾಗಾಗಿಯೇ ಆತ್ಮವಿರುವ ಕಾಯಕ್ಕೆ ಕಾಳಾಮುಖ ರಾದಿಯಿಂದ ಕಾಳಾಮುಖ ಬಸವಣ್ಣನೂ ಸೇರಿ ಕಾಯವೇ ಕೈಲಾಸ ಎಂದಿರುವುದು, ದೇಹವೇ ದೇಗುಲ ಎಂದು ಹಾಡಿರುವುದು.
ಇನ್ನು ಯಹೂದಿ ಧರ್ಮವು ಸಹ ಅಬ್ರಹಾಂ ಎಂಬ ಆದಿ ಪ್ರವಾದಿಯಿಂದ ಸ್ಥಾಪಿತವಾದದ್ದು ಎಂದೇ ಪರಿಗಣಿ
ಸಲ್ಪಟ್ಟಿದೆ. ಅಬ್ರಹಾಂ ಏಕದೇವೋಪಾಸನೆಯನ್ನು ಮಧ್ಯಪ್ರಾಚ್ಯದಲ್ಲಿ ಮೂರೂವರೆ ಸಾವಿರ ವರ್ಷಗಳ ಹಿಂದೆ
ಪ್ರತಿಪಾದಿಸಿದ್ದನು. ಅದಕ್ಕೂ ಮುಂಚೆ ಅಲ್ಲಿ ಬಹುದೇವೋಪಾಸನೆ ಚಾಲ್ತಿಯಿದ್ದಿತು. ಅಬ್ರಹಾಂನ ತಂದೆ
ಈ ದೇವತೆಗಳ ವಿಗ್ರಹಗಳನ್ನು ಮಾಡುವ ಶಿಲ್ಪಿಯಾಗಿದ್ದ ಸಹ. ಏಕದೇವೋಪಾಸನೆಯ ಬದಲಾವಣೆ, ಮತ್ತಿತರೆ ಸಣ್ಣ
ಪುಟ್ಟ ಬದಲಾವಣೆಗಳ ಬಿಟ್ಟರೆ ಎಲ್ಲ ಯಹೂದಿ ಧಾರ್ಮಿಕ ಆಚರಣೆಗಳೂ ಮುಂಚಿನ ರೀತಿಯೇ ಇದ್ದವು. ಆ ಮುಂಚಿನ ರೀತಿಗಳು ಸಹ ಹಿಂದೂ ಪ್ರಭೇದದಂತೆಯೇ ನೈಸರ್ಗಿಕ ಸಂಘಟಿತ ವಿಕಸಿತ ಧರ್ಮದ ರೀತಿಯೇ ಇದ್ದವು. ಆದರೆ ಅಬ್ರಹಾಂ ಇದ್ದ ಮತಧರ್ಮವನ್ನೇ ಏಕದೇವೋಪಾಸನೆಯಾಗಿ ಪರಿಷ್ಕರಿಸಿ ಸುಧಾರಿಸಿದ ಕಾರಣ ಮತ್ತು ಅವನು ಸುಧಾರಿಸಿದೆ ಎನ್ನದೆ ಸ್ಥಾಪಿಸಿದೆ ಎಂದ ಕಾರಣ ಅವನೂ ಪ್ರವಾದಿ ಎನಿಸಿದ್ದನು.
ಅದೇ ರೀತಿಯಾಗಿ ಯಹೂದಿ ಪ್ರಭೇದದ ಕ್ರೈಸ್ತ, ಇಸ್ಲಾಂ ಸಹ. ಈ ಪ್ರವಾದಿತನಕ್ಕೆ ಪ್ರಮುಖವಾಗಿ ಅಲ್ಲಿನ ಪ್ರಾದೇಶಿಕ ಸಾಮಾಜಿಕ ಮಾನವಿಕ ಸನ್ನಿವೇಶಗಳು ಕಾರಣ. ಹೆಚ್ಚಿನ ಜನರಿಗೆ ಧರ್ಮದ ಚಿಂತನೆ ಇದ್ದಿತೋ ಇಲ್ಲವೋ, ಇದ್ದವನೇ ಪ್ರವಾದಿಯಾಗುವಂಥ ಸನ್ನಿವೇಶ ಇದ್ದರೂ ಇದ್ದೀತು. ಮರುಭೂಮಿಯ ಜನರ ಭೌತಿಕ ಹಸಿವಿಗೂ ಫಲವತ್ತಾದ ಭೂಮಿಯ ಸಂತೃಪ್ತ ಜನರ ಲೌಕಿಕ ಹಸಿವಿಗೂ ನಡುವಿನ ವ್ಯತ್ಯಾಸವೇ ಈ ಏಕವ್ಯಕ್ತಿ ಚಿಂತನೆಯ ಪ್ರವಾದಿ ಮತ್ತು ಸಂಘಟಿತ ಸಾಮೂಹಿಕ ಧರ್ಮದರ್ಶಿತ್ವ ಎನಿಸುತ್ತದೆ!
ಮನುಷ್ಯ ಇಂದಲ್ಲದೆ ವಿಕಾಸದ ಆರಂಭದಿಂದಲೂ ಜಾಗತಿಕವಾಗಿದ್ದ ಎನ್ನಲು ಕ್ರೈಸ್ತ, ಇಸ್ಲಾಮಿನ ಮೂಲವಾದ
ಯಹೂದಿಗಳ ‘ಡೇವಿಡ್ನ ನಕ್ಷತ್ರ’ವೂ ಹಿಂದೂ/ ವೀರಶೈವದ ‘ಪಂಚಕೋನ/ಷಟ್ಕೋನ’ಗಳ ರೀತಿಯಲ್ಲಿಯೇ
ಇದೆ. ಇರಲಿ, ಒಟ್ಟಾರೆ ಈ ಎ ಕಾರಣಗಳಿಗಾಗಿಯೇ ಹಿಂದೂ ಪ್ರಭೇದದ ಮತಧರ್ಮಗಳನ್ನು ನೈಸರ್ಗಿಕವಾಗಿ
ಸಂಘಟನಾತ್ಮಕವಾಗಿ ಸಾಮೂಹಿಕವಾಗಿ ಸಹಕಾರಿ ತಾತ್ವಿಕ ನೆಲೆಯಲ್ಲಿ ಪ್ರಜಾಧರ್ಮಪ್ರಭುತ್ವದನ್ವಯವಾಗಿ
ವಿಕಸಿತಗೊಂಡ Organically Evolved ಧಾರ್ಮಿಕ ವ್ಯವಸ್ಥೆಗಳು ಎನ್ನಬಹುದು.
ಇದೆ ಇತಿಹಾಸದ ಅರಿವಿದ್ದೂ ವಿಭಜನೋತ್ತರ ಭಾರತದ ಪ್ರಧಾನಿಯಾದ ನೆಹರೂ ಅವರಾಗಲಿ ಸಂವಿಧಾನ
ಶಿಲ್ಪಿ ಅಂಬೇಡ್ಕರ್ ಅವರಾಗಲಿ ಹಿಂದೂ ಪ್ರಭೇದಗಳ ಧರ್ಮಗಳನ್ನು ಕಾನೂನಾತ್ಮಕವಾಗಿ ಮಾನ್ಯ ಮಾಡಲೇ ಇಲ್ಲ!
ಮನುಸ್ಮೃತಿ ಪ್ರಣೀತ ಬ್ರಿಟಿಷ್ ನಿರ್ಣಯದ ಹಿಂದೂ ಕಾನೂನನ್ನು ಯಥಾವತ್ತಾಗಿ ಅಳವಡಿಸಿ ಅವರು ಅವರದೇ
ವ್ಯಾಖ್ಯಾನದ ಮನುವಾದಿಗಳೇ ಆದರು. ಹಾಗಾಗಿಯೇ ತಾರ್ಕಿಕವಾಗಿ ಭಾರತವು ಹಿಂದೂ ಸಂಸ್ಕೃತಿಯ ಇಸ್ಲಾಂ ದೇಶ
ಎನ್ನಿಸುವುದು. ಇರಲಿ, ಹಾಗಿದ್ದರೆ ಈ ಹಿಂದೂ ಸಂಸ್ಕೃತಿಯ ಧಾರ್ಮಿಕ ಪ್ರಭೇದಗಳು ಹೇಗೆ ಉದಯವಾದವು?
ಇದರ ಆಳವನ್ನು ತಿಳಿಯಲು ದೇಶದ ವೈಜ್ಞಾನಿಕ ಐತಿಹಾಸಿಕ ಆದಿಯಿಂದ ವರ್ತಮಾನಕ್ಕೆ ಬರುವ ಒಂದು
ಮಹಾಕಾಲಯಾನವನ್ನು ಪರಿಕ್ರಮಿಸಬೇಕಾಗುತ್ತದೆ.
ಇಂಥ ಮಹಾಕಾಲಯಾನವನ್ನು ನೆಹರು ಅವರು ಪರಿಕ್ರಮಿಸಿ ದಾಖಲಿಸಿ ತಮ್ಮ ಕೃತಿಯನ್ನು ’The Discovery of
India ಎಂದೇ ಕರೆದಿದ್ದಾರೆ. ಅಂಬೇಡ್ಕರ್ ಈ ಪ್ರಭೇದಗಳ ಬಗ್ಗೆ ಸಾಕಷ್ಟು ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ. ಹಾಗಾಗಿಯೇ ನೆಹರು ಮತ್ತು ಅಂಬೇಡ್ಕರ್ ಇಬ್ಬರಿಗೂ ಈ ಇತಿಹಾಸದ ಅರಿವಿದ್ದೂ ಹಿಂದೂ ಮತಧರ್ಮಗಳಿಗೆ ಮಾನ್ಯತೆ ಕೊಡಲಿಲ್ಲ ಎಂದದ್ದು. ಅಂದು ಬೌದ್ಧ, ಜೈನಧರ್ಮಗಳಂತೆಯೇ ದೈತ, ಅದ್ವೈತ,
ವಿಶಿಷ್ಟಾದ್ವೈತ, ಮತ್ತು ಶಕ್ತಿವಿಶಿಷ್ಟಾದ್ವೈತ(ವೀರಶೈವ)ಗಳು ತಕ್ಷಣಕ್ಕೆ ಪ್ರತ್ಯೇಕ ಧರ್ಮಗಳಾಗಬೇಕಿತ್ತು. ಆದರೆ ಹಾಗೆ
ಮಾಡದೆ ಈ ಧರ್ಮಗಳಿಗೆ ಸಾಂವಿಧಾನಿಕ ಅನ್ಯಾಯವಾಯಿತು.
ಇರಲಿ, ವೈಜ್ಞಾನಿಕ ದಾಖಲೆಗಳ ಪ್ರಕಾರ ಭಾರತೀಯ ಇತಿಹಾಸ ಸಿಂಧೂಕೊಳ್ಳದಿಂದ ಆರಂಭವಾದ ಕಾರಣ ಈ ಮಹಾಕಾಲಯಾನವನ್ನು ಅಲ್ಲಿಂದಲೇ ಆರಂಭಿಸಬೇಕಾಗುತ್ತದೆ. ಏಕೆಂದರೆ ಇದೆಲ್ಲವನ್ನೂ ಅರಿಯದೆ ತೂಲಿಸದೆ ಭಾರತೀಯ ತರ್ಕಶಾಸದ ಸೂತ್ರಕ್ಕೆ ಅನ್ವಯಿಸದೆ ನಿರ್ಣಯ ಮಂಡಿಸಿದರೆ ನಮ್ಮದೂ ಐದೂವರೆ ಲಕ್ಷ ಚಿಲ್ಲರೆ
ಶೋಧಗಂಗಾ oಟಞಛಿ ಶೋಧನೆಯಂತಾಗುತ್ತದೆ.
(ಮುಂದುವರಿಯುವುದು)
(ಲೇಖಕರು ಶಿಕಾಗೋ ನಿವಾಸಿ ಮತ್ತು ಸಾಹಿತಿ)
ಇದನ್ನೂ ಓದಿ: Ravi Hunz Column: ಇದು ಕಲ್ಯಾಣ ಕ್ರಾಂತಿಯ ಸತ್ಯದರ್ಶನ !