Monday, 12th May 2025

Ravi Hunj Column: ವಸ್ತುನಿಷ್ಠ ಅಭಿಪ್ರಾಯವೂ ಪೂರ್ವಗ್ರಹ ಗ್ರಹಿಕೆಗೆ ಒಳಗಾಗಬಲ್ಲರು

ಬಸವ ಮಂಟಪ

ರವಿ ಹಂಜ್

(ಭಾಗ-೨)

ಹಳತನ್ನು ಧಿಕ್ಕರಿಸಿ ಏನಾದರೂ ಹೊಸತನ್ನು ಸಾಧಿಸಬೇಕೆಂಬ ಬಿಸಿರಕ್ತದ ಭಾರತೀಯ ವಿದ್ಯಾವಂತ ನಾಯಕರಿಗೆ ಸ್ವಾತಂತ್ಯ ಚಳವಳಿ ಅತ್ಯಂತ ಆಕರ್ಷಕವಾದ ಉನ್ನತ ಆದರ್ಶವೆನಿಸಿತು. ಮನುಸ್ಮೃತಿಯ ಇತಿಹಾಸದ ಸತ್ಯಾ ಸತ್ಯತೆಯನ್ನು ಕಿಂಚಿತ್ತೂ ಕೆದಕದೆ ಬ್ರಿಟಿಷರಂತೆಯೇ ಈ ಯುವಪಡೆಯ ನಾಯಕತ್ವವೂ ತನ್ನದೇ ಆದ
ರಾಜಕೀಯ, ಸಾಮಾಜಿಕ, ಚಿಂತನೆಗಳನ್ನು ಸ್ವತಂತ್ರ ಭಾರತದ ಮೇಲೆ ಯಶಸ್ವಿಯಾಗಿ ಹೇರಲು ಮನುಸ್ಮೃತಿಯ ವಿಸ್ಮೃತಿಗೆ ಹೆಚ್ಚು ಆಸ್ಥೆಯ ಪ್ರಚಾರ ಕೊಟ್ಟು ಬಳಸಿಕೊಂಡಿತು.

ಸಾಕಷ್ಟು ವಿದ್ಯಾವಂತರು ಕ್ರಿಸ್ತಪೂರ್ವದಿಂದಲೂ ಜಾರಿಯಿದ್ದ ಮನುಸ್ಮೃತಿಯೇ ನಮ್ಮ ದೇಶದ ಎಲ್ಲಾ ದಾರಿದ್ರ್ಯಕ್ಕೆ ಕಾರಣ ಎಂದು ಬಲವಾಗಿ ನಂಬಿಬಿಟ್ಟಿದ್ದರು. ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರರು ಮನುಸ್ಮೃತಿಯ ಕುರಿತು ಹೆಚ್ಚು ಸಂಶೋಧನೆಯನ್ನು ನಡೆಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರೂ, ಭಾರತ ಸ್ವಾತಂತ್ರ್ಯ ಹೋರಾಟದ ಉನ್ಮಾದದಲ್ಲಿ ಅಕ್ಷರಶಃ ಕಳೆದುಹೋಗಿದ್ದ ಎಲ್ಲಾ ವಿದ್ಯಾವಂತರು ಸಂಶೋಧಿಸುವುದಿರಲಿ ಅವರ ಮಾತನ್ನು
ಪರಿಗಣಿಸುವ ತಾಳ್ಮೆಯನ್ನೂ ತೋರಲಿಲ್ಲ.

ಅಂಬೇಡ್ಕರ್ ತಮ್ಮ ’The Untouchables: Who were they and why they Became Untouchables’ ’ ಕೃತಿಯಲ್ಲಿ ಅಸ್ಪೃಶ್ಯತೆಯ ಮೂಲವನ್ನು ಮಾನವ ವಿಕಾಸದಿಂದ ಹಿಡಿದು ಹಿಂದೂ (ಭಾರತ) ಅಹಿಂದೂ (ಭಾರತೇತರ) ಎಂದು ವರ್ಗೀಕರಿಸಿ ಗೆದ್ದವರು-ಸೋತವರ ನಡುವಿನ ಗರ್ವ-ದೀನ ಭಾವನೆಗಳು ಹೇಗೆ ಜಾಗತಿಕವಾಗಿ ಅಸ್ಪೃಶ್ಯತೆಗೆ ಬುನಾದಿ ಹಾಕಿದವು ಎನ್ನುತ್ತ “ಇದು ಯುರೋಪಿನಿಂದ ಆರಂಭವಾದದ್ದು” ಎನ್ನುತ್ತಾರೆ. ಭಾರತದ ಮನುಸ್ಮೃತಿಯ ಮನುವಿನ ಕಾಲದಲ್ಲಿ ಅಸ್ಪೃಶ್ಯತೆ ಇರಲಿಲ್ಲ ಎಂದಿದ್ದಾರೆ (Chapter: When did Broken Men become untou chable ? ಪುಟ 143ರಿಂದ 147). ತಮ್ಮ ಕೃತಿಯ ಉದ್ದಕ್ಕೂ ಮನುಸ್ಮೃತಿಯಲ್ಲಿ ಎಲ್ಲಿಯೂ ಅಸ್ಪೃಶ್ಯತೆ ಬಗ್ಗೆ ಮಾಹಿತಿ ಇಲ್ಲ ಎಂದೇ ತಿಳಿಸಿದ್ದಾರೆ.

ಮುಂದಿನ ಕಾಲಘಟ್ಟದಲ್ಲಿ ಬೌದ್ಧರ ವಿರುದ್ಧ ಬ್ರಾಹ್ಮಣರಿಗೆ ಶ್ರೇಷ್ಠತೆಯ ಸಂಘರ್ಷ ಉಂಟಾಗಿ ಬ್ರಾಹ್ಮಣ ಮತ್ತು
ಅಬ್ರಾಹ್ಮಣರ ಗೋಮಾಂಸಭಕ್ಷಣೆ ನಿಷೇಧಕ್ಕೆ ಎಡೆಮಾಡಿಕೊಟ್ಟಿತು. ಇದರಿಂದ ಉಂಟಾದ ಗೋಮಾಂಸ ಭಕ್ಷಕ ರೆಡೆಯ ತಿರಸ್ಕಾರ ಮತ್ತು ಬೌದ್ಧ-ಬ್ರಾಹ್ಮಣ ಸಂಘರ್ಷವು ಎಲ್ಲಾ ಮೀರಿ ಅಸ್ಪೃಶ್ಯತೆಗೆ ದಾರಿ ಮಾಡಿಕೊಟ್ಟಿರ ಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸುತ್ತಾರೆ.

ಅದಕ್ಕೆ ಸಾಕ್ಷಿ ಎನ್ನುವುದಕ್ಕೆ ‘ಮೃಚ್ಛಕಟಿಕಾ’ ನಾಟಕದ 2 ದೃಶ್ಯಗಳನ್ನು ಉದಾಹರಿಸುತ್ತಾರೆ. ಉದ್ಯಾನದ ಕೊಳವೊಂದಕ್ಕೆ ಬಟ್ಟೆ ತೊಳೆಯಲು ಬಂದ ಬೌದ್ಧ ಭಿಕ್ಷುವನ್ನು ಕೊಳದ ಬಳಿಯಿದ್ದ ರಾಜನ ಮೈದುನನು, “ನಾನು ಸ್ನಾನವನ್ನೂ ಮಾಡದ ಈ ಕೊಳದಲ್ಲಿ ಬಟ್ಟೆ ತೊಳೆಯಲು ಬಂದಿರುವೆಯಾ!” ಎಂದು ಥಳಿಸುತ್ತಾನೆ. ಇನ್ನೊಂದು ದೃಶ್ಯದಲ್ಲಿ ಚಾರುದತ್ತನು ಮಿತ್ರ ಮೈತ್ರೇಯ ನೊಂದಿಗೆ ಉದ್ಯಾನದಲ್ಲಿ ತನ್ನ ಪ್ರೇಮಿ ವಸಂತಸೇನೆಯ ಬರುವಿಕೆಗೆ ಕಾಯುತ್ತಿರುತ್ತಾನೆ. ಎಷ್ಟು ಕಾದರೂ ಆಕೆ ಬಾರದಿದ್ದಾಗ ನಿರಾಶನಾಗಿ ಉದ್ಯಾನದಿಂದ ಹೊರಹೋಗುತ್ತಿರುವಾಗ ಎದುರಿಗೆ ಬರುತ್ತಿದ್ದ ಬೌದ್ಧ ಭಿಕ್ಷುವನ್ನು ಕಂಡು, “ಇದು ಅಪಶಕುನ! ಬಾ ಬೇರೆ ದಾರಿಯಿಂದ ಹೋಗೋಣ”
ಎಂದು ಬೇರೆ ದಾರಿ ಹಿಡಿಯುತ್ತಾನೆ.

ಈ ಎರಡು ದೃಶ್ಯಗಳೂ ಹಿಂದೂಗಳಿಗೆ ಬೌದ್ಧರೆಡೆಗೆ ಇದ್ದ ಅಂದಿನ ಸಾಮಾಜಿಕ ದ್ವೇಷದ ನಿಲುವುಗಳೇ ಆಗಿದ್ದು ಇವು ಕ್ರಮೇಣ ಅಸ್ಪೃಶ್ಯತೆಗೆ ದಾರಿ ಮಾಡಿಕೊಟ್ಟಿರಬಹುದು ಎಂದು ಅಂಬೇಡ್ಕರ್ ಊಹಿಸುತ್ತಾರೆಯೇ ಹೊರತು ಅಂದು ಅಸ್ಪೃಶ್ಯತೆ ಇರಲಿಲ್ಲ ಎಂದೇ ನಿರ್ಧಾರ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಲೌಕಿಕ ಜೀವನಾಸಕ್ತಿ ಹೊಂದಿದ ವ್ಯಕ್ತಿಗಳಿಗೆ ಅಲೌಕಿಕ ಆಸಕ್ತಿಯ ಸನ್ಯಾಸಿಗಳು ಎದುರಿಗೆ ಬಂದರೆ
ಅಪಶಕುನ ಎಂಬ ಸಾಮಾಜಿಕ ಮೌಢ್ಯ ಕೇವಲ ಬೌದ್ಧ ಭಿಕ್ಷುಗಳೆಡೆಯಲ್ಲದೆ ಅಂದು ಬ್ರಾಹ್ಮಣರ ಕಡೆಗೂ ಇತ್ತು.
ಉದ್ಯಾನದ ಕೊಳಗಳನ್ನು ಸ್ನಾನ, ಬಟ್ಟೆ ತೊಳೆಯಲು ಬಳಸದಂತೆ ಇಂದಿರುವ ನಿರ್ವಹಣಾ ನಿರ್ಬಂಧಗಳು
ಅಂದಿಗೂ ಇದ್ದಿರಬಹುದು ಎಂಬ ವಾಸ್ತವಾಂಶಗಳನ್ನು ಏಕೋ ಅಂಬೇಡ್ಕರರು ಇಲ್ಲಿ ಪರಿಗಣಿಸಿಲ್ಲ ಎಂಬುದು ಗಮನಾರ್ಹ.

ಹಾಗೆಯೇ ಮುಂದುವರಿಯುತ್ತಾ 7ನೇ ಶತಮಾನದ (ಕ್ರಿ.ಶ. 600) ಆರಂಭದಲ್ಲಿ ಬರೆದ ಬಾಣನ ಕಾದಂಬರಿಯಲ್ಲಿನ ಚಾಂಡಾಲ ಕನ್ಯೆಯ ಪ್ರಸಂಗವನ್ನು ಉಖಿಸಿ ಅಂದೂ ಚಾಂಡಾಲರ ಕುರಿತಾಗಿ ಯಾವುದೇ ಅಸ್ಪೃಶ್ಯತೆ ಇರಲಿಲ್ಲ ಎನ್ನುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಚೀನಿ ಪ್ರವಾಸಿಗ ಫಾಹಿಯಾನನ ಚಾಂಡಾಲರ ಕುರಿತಾದ ಉಲ್ಲೇಖವನ್ನು
ಎತ್ತಿಹಿಡಿದು ಅಂದಿಗೂ ಅಸ್ಪೃಶ್ಯತೆ ಇರಲಿಲ್ಲ ಎನ್ನುತ್ತಾರೆ.

ಅಂತರವರ್ಣ ವಿವಾಹದ ಸಂಬಂಧದಲ್ಲಿ ಹುಟ್ಟಿದವರು, ಮದುವೆಯಿಲ್ಲದೆ ಹುಟ್ಟಿದವರು, ವಿಧವೆಗೆ ಹುಟ್ಟಿ ದವರನ್ನು ಚಾಂಡಾಲರೆಂದು ಕರೆಯುತ್ತಾರೆ ಎನ್ನುತ್ತ ಚಾಂಡಾಲರ ಬಗ್ಗೆ ಸಮಾಜದಲ್ಲಿ ಅಸ್ಪೃಶ್ಯತೆ ಇರಲಿಲ್ಲ
ಎಂದಿದ್ದಾರೆ. ಆದರೆ ಹುಯೆನ್ ತ್ಸಾಂಗನ, “ಕಟುಕರು, ಮೀನುಗಾರರು, ದೋಮರು, ದೊಂಬರು, ಡೋಹರು
ಊರಿನ ಹೊರಗೆ ವಾಸಿಸಬೇಕಿತ್ತು” ಎನ್ನುವ ಸಂಕ್ಷಿಪ್ತ ಮಾಹಿತಿಯನ್ನು ಹಿಡಿದು, “ಅಸ್ಪೃಶ್ಯತೆ ಬಗ್ಗೆ ಯಾವುದೇ
ಖಚಿತ ನಿರ್ಣಯವನ್ನು ಕೈಗೊಳ್ಳಲು ಹುಯೆನ್ ತ್ಸಾಂಗನ ಸಂಕ್ಷಿಪ್ತ ಮಾಹಿತಿ ಏನೇನೂ ಸಾಲದಾದರೂ ಕೇವಲ
ಚಾಂಡಾಲರಲ್ಲದೆ ಇತರರು ಸಹ ಊರ ಹೊರಗೆ ವಾಸಿಸುತ್ತಿದ್ದರು ಎನ್ನುವುದು ಈ ಕಾಲಘಟ್ಟದಲ್ಲಿ ಅಸ್ಪೃಶ್ಯತೆ
ಹುಟ್ಟಿರಬಹುದು ಎನ್ನುವ ಸೂಚನೆಯಾಗಿದೆ” ಎಂದುಬಿಡುತ್ತಾರೆ.

ಆದರೆ ತ್ಸಾಂಗನಿಗೂ ಮುಂಚಿನ ಫಾಹಿಯಾನ್ ಸಹ ಇದನ್ನೇ ಹೇಳಿದ್ದರೂ ಅದೇಕೋ ಅಂಬೇಡ್ಕರರಿಗೆ ಅದು ಸರಿ ಎನ್ನಿಸದೇ ತ್ಸಾಂಗನ ಮಾಹಿತಿ ಸರಿಯೆನ್ನಿಸಿರುವುದು ಆಶ್ಚರ್ಯಕರ!

ತಮ್ಮ ವಾದವನ್ನು ಮುಂದುವರಿಸುತ್ತ 4ನೇ ಶತಮಾನದ ಗುಪ್ತರು ಗೋಹತ್ಯೆಯನ್ನು ನಿಷೇಧಿಸಿದ ಕಾರಣ
ಅಸ್ಪೃಶ್ಯತೆಯ ಹುಟ್ಟು 4ರಿಂದ 7ನೇ ಶತಮಾನದ ನಡುವೆ ಬೌದ್ಧ ಮತ್ತು ಬ್ರಾಹ್ಮಣ ಸಂಘರ್ಷದ ಕಾರಣದಿಂದಲೇ
ಆರಂಭವಾಗಿರಬಹುದು ಎಂದು ತರಾತುರಿಯ ನಿರ್ಣಯ ಕೊಟ್ಟು ತಮ್ಮ ನಿರ್ಣಾಯಕ ಪುಸ್ತಕವನ್ನು ಅಂತ್ಯ ಗೊಳಿಸುತ್ತಾರೆ (Chapter: When did Broken Men become untouchable ? ಪುಟ 150ರಿಂದ 155).

ಖ್ಯಾತನಾಮರ ಕೃತಿಗಳ ಬಗ್ಗೆ ಎಷ್ಟೇ ವಸ್ತುನಿಷ್ಠವಾಗಿ ಅಭಿಪ್ರಾಯ ಮಂಡಿಸಿದರೂ ಅದು ಭಕ್ತಿ/ವಿಭಕ್ತಿಪೂರ್ವಕ
ಪೂರ್ವಗ್ರಹ ಗ್ರಹಿಕೆಗೆ ಒಳಗಾಗುವ ಸಾಧ್ಯತೆಗಳಿವೆ. ಆ ಕಾರಣ ಅಂಬೇಡ್ಕರ್ ಅವರ ಕೃತಿಯ ನಿರ್ಣಾಯಕ ಅಂತ್ಯ ವನ್ನು ಯಥಾವತ್ತಾಗಿ ಇಲ್ಲಿ ಕೊಟ್ಟಿದ್ದೇನೆ. ನೀವೇ ಅನುವಾದಿಸಿಕೊಂಡು ನಿರ್ಧರಿಸಿ: The Chinese traveller Yuan Chwang came to India in 629 A.D. He says, As to their inhabited towns and cities the quadrangular
walls of the cities (or according to one text, of the various regions) are broad and high, while the thoroughfares are narrow tortuous passages. The shops are on the highways and booths, or (inns) line the roads. Butchers, fishermen, public performers, executioners, and scavengers have their habitations marked by a distinguishing sign. They are forced to live outside the city and they sneak along on the left when going about in the hamlets.

The above passage is too short and too brief for founding a definite conclusion thereon. There is. however, one point about it which is worthy of note. Fa-Hian’s description refers to the Chandalas only while the description given by Yuan Chwang applies to communities other than the Chandalas. This is a point of great importance. No such argument can be levelled against the acceptance of a description since it applies to communities other than the Chandalas. It is, therefore, just possible that when Yuan Chwang came to India, Untouchability had emerged. On the basis of what has been said above we can conclude that while Untouchability did not exist in 200 A.D., it had emerged by 600 A.D. These are the two limits, upper and lower, for determining tne birth of Untouchability. Can we fix an approximate date for the birth of Untouchability? I think we can, if we take beef-eating, which is the root of Untouchability, as the point to-start from. Taking the ban on beef-eating as a point to reconnoitre from, it follows that the date ot the birth of Untouchability must be intimately connected with the ban on cow-killing
and on eating beef. If we can answer when cow-killing became an offence and beef-eating became a sin, we can fix an approximate date for the birth of Untouchability. When did cow-killing become an offence?
We know that Manu did not prohibit the eating of beef nor did he make cow-killing an offence. When did it become an offence? As has been shown by Dr. D R Bhandarkar, cow killing was made a capital offence by the Gupta kings some time in the 4th Century A.D.

We can, therefore, say with some confidence that Untouchability was born some time about 400 A.D. It is
born out of the struggle for supremacy between Buddhism and Brahmanism which has so completely moulded the history of India and the study of which is so woefully neglected by students of Indian history.

ಹೀಗೆ ಯಾವುದೇ ನಿರ್ಣಾಯಕ ಸ್ಪಷ್ಟತೆ ಕೊಡದ ಈ ಕೃತಿಯನ್ನು ಅಂಬೇಡ್ಕರರ ದುರ್ಬಲ ಕೃತಿ ಎನ್ನಬಹುದು.
ಇನ್ನು ಅಂಬೇಡ್ಕರರು ಕ್ರಿ.ಶ.1959ರ ಜೂನ್ ತಿಂಗಳಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ ಯುವ ಬೌದ್ಧರ ಸಮ್ಮೇಳ
ನದಲ್ಲಿ ಪಾಲ್ಗೊಂಡು, “ಬೌದ್ಧಧರ್ಮವನ್ನು ಇಲ್ಲವಾಗಿಸಿದ್ದು ಮುಸಲ್ಮಾನರು! ವಿದೇಶಿ ಆಕ್ರಮಣಕಾರರಾದ ಮುಸಲ್ಮಾನರು ಬೌದ್ಧಧರ್ಮಕ್ಕೆ ಕೊಡಲಿಯನ್ನು ಹಾಕಿದರು. ಮೂರ್ತಿಪೂಜಕರಾಗಿದ್ದ ಬೌದ್ಧರು ಮತ್ತು ಹಿಂದೂ ಗಳನ್ನು ಮುಸ್ಲಿಮರು ಕೊಚ್ಚಿಹಾಕಿದರು. ಆಗ ಸನ್ಯಾಸಿಗಳಾಗಿದ್ದ ಬೌದ್ಧ ಭಿಕ್ಷುಗಳು ಇಲ್ಲದಂತಾಗಿ ಬೌದ್ಧಧರ್ಮ ಅವನತಿಗೊಂಡಿತು. ಇದನ್ನು ಸರಿಪಡಿಸಲು ಕೆಲ ಬೌದ್ಧಭಿಕ್ಷುಗಳು ಪ್ರಯತ್ನಿಸಿದರೂ ಅದು ಕೈಗೂಡಲಿಲ್ಲ” ಎಂದಿದ್ದಾರೆ.

ಅಂದರೆ ಸ್ಪಷ್ಟವಾಗಿ ಇಸ್ಲಾಂ ದಾಳಿಯಿಂದ ಉಂಟಾದ ಧಾರ್ಮಿಕ ನಿರ್ವಾತ ತುಂಬಲು ಹಿಂದೂಗಳು ‘ಹುಟ್ಟಿನಿಂದ ಜಾತಿ’ಯನ್ನು ಅಳವಡಿಸಿಕೊಂಡು ತಮ್ಮ ಧರ್ಮವನ್ನು ಉಳಿಸಿಕೊಂಡರು ಮತ್ತು ಬೌದ್ಧರ ಕ್ಲಿಷ್ಟ ಭಿಕ್ಷು ಸಾಧನೆಯ ಕಾರಣ ಬೌದ್ಧಧರ್ಮ ಅವನತಿಗೊಂಡಿತು ಎನ್ನುವುದು ಈ ಭಾಷಣದಿಂದ ಸಿಗುವ ಸುಳಿವು. ಅಂದರೆ ‘ಹುಟ್ಟಿನಿಂದ ಜಾತಿ’ ನೀತಿಯು ಸೃಷ್ಟಿಸಿದ ಸಾಮಾಜಿಕ ಪಲ್ಲಟವನ್ನು ದೂರದೆ ಅಸ್ಪೃಶ್ಯತೆಯನ್ನು ಇಸ್ಲಾಂ ದಾಳಿಗೂ ಮುಂಚಿನ ಕಾಲಘಟ್ಟಕ್ಕೆ ನೂಕುವ ಧಾವಂತಕ್ಕೆ ಅಂಬೇಡ್ಕರರು ಒಳಗಾಗಿದ್ದರೆ ಎನ್ನುವುದು ಒಂದು ಸಂಶೋಧನಾ ಜಿಜ್ಞಾಸೆಗೆ ಬಿಟ್ಟ ವಿಷಯ.

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)

ಇದನ್ನೂ ಓದಿ: Ravi Hunj Column: ಶರಣರು ಸನಾತನ ಧರ್ಮದ ವಿರುದ್ದ ಹೋರಾಡಿದ್ದರೇ ?