ಮೂರ್ತಿಪೂಜೆ
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಮೊನ್ನೆ ದಿಲ್ಲಿಗೆ ಹೋಗಿದ್ದ ರಾಜ್ಯ ಬಿಜೆಪಿಯ ಟಾಪ್ ಲೀಡರುಗಳಿಗೆ ವರಿಷ್ಠರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರವನ್ನು ಯಾವ ಕಾರಣಕ್ಕೂ ಅಲುಗಾಡಿಸುವುದಿಲ್ಲ ಎಂಬುದು ಈ ಸಂದೇಶ. ಅಂದ ಹಾಗೆ, ಕೆಲವೇ ಕಾಲದ ಹಿಂದೆ ಸಿದ್ದರಾಮಯ್ಯರ ಸರಕಾರವನ್ನು ಉರುಳಿಸುವ ವಿಷಯದಲ್ಲಿ ರಾಜ್ಯ ಬಿಜೆಪಿಯ ಕೆಲ ನಾಯಕರು ಉತ್ಸುಕರಾಗಿದ್ದರು. ವರಿಷ್ಠರು ಅನುಮತಿಸಿದರೆ ಸಾಕು, ಸರಕಾರ ಉರುಳಿಸುವ ಜವಾಬ್ದಾರಿ ನಮ್ಮದು ಅಂತ ಆಪ್ತ ವಲಯಗಳಲ್ಲಿ ಅವರು ರಣೋತ್ಸಾಹ ತೋರಿಸುತ್ತಿದ್ದರು.
ಅವರ ಇಂಥ ಉತ್ಸಾಹಕ್ಕೆ ಕಾರಣವೂ ಇತ್ತು. ಯಾಕೆಂದರೆ ೨೦೧೯ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉರುಳಿಸುವುದರ ಹಿಂದೆ ಇವರ ಕೈ ಕೆಲಸ ಮಾಡಿತ್ತು. ಇಂಥ ಅನುಭವ ಇದ್ದ ಕಾರಣಕ್ಕಾಗಿಯೇ ಕರ್ನಾಟಕದಲ್ಲಿ ಮತ್ತೊಂದು ರೌಂಡು ಆಪರೇಷನ್ ಮಾಡಲು ಈ ನಾಯಕರು ಸಜ್ಜಾಗಿದ್ದರು. ಹೀಗೆ ಅವರು ಸಜ್ಜಾಗಿ ನಿಂತ ಕಾಲಕ್ಕೆ ಸರಿಯಾಗಿ ಜಾತ್ಯತೀತ ಜನತಾದಳ ಕೂಡಾ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿತಲ್ಲ?
ಇದಾಗಿದ್ದೇ ತಡ, ಸಿದ್ದರಾಮಯ್ಯರ ಸರಕಾರವನ್ನು ಉರುಳಿಸಲು ಹಲವು ಮೂಲಗಳಿಂದ ಪ್ರಯತ್ನ ಆರಂಭವಾದ ಸಂದೇಶಗಳು ಅಪ್ಪಳಿಸತೊಡಗಿದವು. ಈ ಪೈಕಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದವರೆಂದರೆ ಗೋವಾದ ಮುಖ್ಯಮಂತ್ರಿ ಸಾವಂತ್ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್.
ನೋಡ ನೋಡುತ್ತಿದ್ದಂತೆಯೇ ಈ ಇಬ್ಬರು ನಾಯಕರು ರಾಜ್ಯ ಕಾಂಗ್ರೆಸ್ನ ಹಲವು ಗುಂಪುಗಳ ನಾಯಕರ ಜತೆ ಚರ್ಚೆ ನಡೆಸುತ್ತಿದ್ದಾರೆ. ವರಿಷ್ಠರಿಂದ ಸಂದೇಶ ದೊರೆತಾಕ್ಷಣ ಆಪರೇಷನ್ಗೆ ಕೈ ಹಾಕುತ್ತಾರೆ ಎಂಬ ಮಾತುಗಳು ಕೇಳಿಸತೊಡಗಿದವು. ಇದು ಸಾಲದೆಂಬಂತೆ ಇವತ್ತು ಉಪಮುಖ್ಯಮಂತ್ರಿಯಾಗಲು ಹವಣಿಸುತ್ತಿರುವ ಮುಂಬಯಿ-ಕರ್ನಾಟಕ ಭಾಗದ ಸಚಿವರೊಬ್ಬರು ಪದೇ ಪದೆ ಫಡ್ನವಿಸ್ ಜತೆ ಮಾತು ಕತೆ ನಡೆಸಿ ಬರುತ್ತಿದ್ದಾರೆ. ಬಿಜೆಪಿ ವರಿಷ್ಠರಿಂದ ಸೂಚನೆ ಬಂದ ಕೂಡಲೇ ತಮ್ಮ ೨೫ಕ್ಕೂ ಹೆಚ್ಚು ಬೆಂಬಲಿಗ ಶಾಸಕರ ಜತೆ ಕಮಲ ಪಾಳಯದ ಕಡೆ ವಲಸೆ ಹೋಗಲಿದ್ದಾರೆ ಎಂಬ ಮಾತುಗಳು ತೇಲಿಬಂದವು. ಅಷ್ಟೇ ಅಲ್ಲ, ಸಿದ್ದರಾಮಯ್ಯರ ಸಂಪುಟದಲ್ಲಿ ಮಂತ್ರಿಗಿರಿ ಸಿಗದೆ ಹತಾಶರಾಗಿರುವ ಕಾರವಾರ ಭಾಗದ ನಾಯಕರೊಬ್ಬರು ಗೋವಾ ಮುಖ್ಯಮಂತ್ರಿ ಸಾವಂತ್ ಅವರೊಂದಿಗೆ ಮಾತುಕತೆ ನಡೆಸುತ್ತಾ ಒಳಗಿಂದೊಳಗೇ ಸೆಟ್ಲಾಗಿದ್ದಾರೆ.
ಹೀಗಾಗಿ ಅವರೂ ಟೈಮು ನೋಡಿ ರಾಜ್ಯ ಕಾಂಗ್ರೆಸ್ಸಿಗೆ ಷಾಕ್ ಕೊಡಲಿದ್ದಾರೆ ಅಂತ ಬಿಜೆಪಿಯ ಕೆಲ ಹಿರಿಯ ನಾಯಕರೇ ಪಿಸುಗುಟ್ಟತೊಡಗಿದರು. ಆದರೆ ಕಳೆದ ಶನಿವಾರ-ಭಾನುವಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ದಿಲ್ಲಿಗೆ ಹೋದ ರಾಜ್ಯದ ಪ್ರಮುಖ ನಾಯಕರಿಗೆ ಒಂದು ಮೆಸೇಜು ಸ್ಪಷ್ಟವಾಗಿ ತಲುಪಿದೆ. ಅದೆಂದರೆ, ‘ಅಗತ್ಯ ಬಿದ್ದರೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಗೆ ಹೋಗೋಣ; ಆದರೆ ಯಾವ ಕಾರಣಕ್ಕೂ ಸಿದ್ದರಾಮಯರ ಸರಕಾರವನ್ನು
ಅಸ್ಥಿರಗೊಳಿಸಿ ಉರುಳಿಸುವುದು ಬೇಡ’ ಅಂತ. ಮೂಲಗಳ ಪ್ರಕಾರ, ಈ ನಾಯಕರಿಗೆ ಇಂಥ ಸಂದೇಶ ರವಾನಿಸಿದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ. ನಡ್ಡಾ ರವಾನಿಸಿದ ಸಂದೇಶವೆಂದರೆ ನೋ ಡೌಟ್, ಅದು ಸ್ವತಃ ಪ್ರಧಾನಿ ಮೋದಿ ಅವರ ಇಶಾರೆಯೇ.
ಮೋದಿ ಚಿಂತೆ ಏನು?
ಅಂದ ಹಾಗೆ, ಸಿದ್ದರಾಮಯ್ಯರ ಸರಕಾರವನ್ನು ಉರುಳಿಸುವ ವಿಷಯದಲ್ಲಿ ಮೋದಿ ಇದ್ದಕ್ಕಿದ್ದಂತೆ ಯಾಕೆ ಆಸಕ್ತಿ ಕಳೆದು ಕೊಂಡರು ಅಂತ ರಾಜ್ಯ ಬಿಜೆಪಿಯ ಈ ಹಿರಿಯ ನಾಯಕರು ಕೌಂಟರ್ ಚೆಕ್ ಮಾಡಿಕೊಂಡಿದ್ದಾರೆ. ಅವರಿಗಿ ರುವ ತಕ್ಷಣದ ಮಾಹಿತಿ ಎಂದರೆ, ಸಿದ್ದರಾಮಯ್ಯರ ಸರಕಾರ ವನ್ನು ಉರುಳಿಸಲು ಕೈ ಹಾಕುವುದು ಎಂದರೆ ಅನಗತ್ಯ ತಲೆನೋವನ್ನು ಎಳೆದುಕೊಂಡಂತೆ ಅಂತ ಮೋದಿ ಭಾವಿಸಿ ದ್ದಾರೆ. ಕಾರಣ? ಸಿದ್ದರಾಮಯ್ಯರ ಸರಕಾರಕ್ಕೆ ಇವತ್ತು ೧೩೫ ಶಾಸಕರ ಬಲವಿದೆ. ಪಕ್ಷಾಂತರ ನಿಷೇಧ ಕಾಯ್ದೆಯ ಹೊಡೆತ ವಿಲ್ಲದಂತೆ ನೋಡಿಕೊಳ್ಳಬೇಕು ಎಂದರೆ ಇವರ ಪೈಕಿ ಮೂರನೇ ಎರಡು ಭಾಗದಷ್ಟು ಶಾಸಕರನ್ನು ಸೆಳೆದುಕೊಳ್ಳಬೇಕು.
ಆದರೆ ಸದ್ಯದ ಸ್ಥಿತಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಶಾಸಕರನ್ನು ಸೆಳೆಯುವುದು ಕಷ್ಟದ ಕೆಲಸ. ಒಂದು ವೇಳೆ, ಸರಕಾರ ಬೀಳಿಸಿದರೆ ಸಾಕು ಎನ್ನುವುದಾದರೆ ೪೫ರಿಂದ ೫೦ ಶಾಸಕರನ್ನು ಸೆಳೆಯಬೇಕು. ವಿವಿಧ ಶಕ್ತಿಯ ಮೂಲಕ ಇಷ್ಟು ಶಾಸಕರನ್ನೇನೋ ಸೆಳೆಯಬಹುದು. ಆದರೆ ಅವರನ್ನು ಉಪಚುನಾವಣೆಯ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರಬೇಕು. ಒಂದೊಮ್ಮೆ ಅವರ ಪೈಕಿ ಅರ್ಧದಷ್ಟು ಮಂದಿ ಸೋತರೂ ಮುಖಭಂಗವಾಗುವುದು ತಮಗೇ. ಯಾಕೆಂದರೆ, ಬಿಜೆಪಿ
ಈ ಪ್ರಮಾಣದಲ್ಲಿ ಸೋಲನುಭವಿಸಿದರೆ ಪುನಃ ಕಾಂಗ್ರೆಸ್ ಸರಕಾರವೇ ಸೆಟ್ಲಾಗುತ್ತದೆ. ಈ ಮಧ್ಯೆ ಕಾಂಗ್ರೆಸ್ನಿಂದ ದೊಡ್ಡ ಸಂಖ್ಯೆಯ ಶಾಸಕರನ್ನು ಸೆಳೆಯುತ್ತೇ ವಲ್ಲ, ಅವರ ಪೈಕಿ ಬಹುತೇಕರು ಬಿಜೆಪಿ ನೇತೃತ್ವದ ಸರಕಾರ ಬಂದರೆ ಮಂತ್ರಿಮಂಡಲ ಸೇರಲು ಹವಣಿಸುತ್ತಾರೆ. ೨೦೧೯ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಿದ ಫಲವಾಗಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸಂಪುಟದಲ್ಲಿ ವಲಸಿಗರೇ ದೊಡ್ಡ ಮಟ್ಟದಲ್ಲಿ ಮಂತ್ರಿಗಳಾಗಿದ್ದರು.
ಹೀಗೆ ಹೊರಗಿನಿಂದ ಬಂದವರಿಗೇ ಹೆಚ್ಚಿನ ಆದ್ಯತೆ ಸಿಕ್ಕ ಪರಿಣಾಮ ೨೦೨೩ರ ವಿಧಾನಸಭೆ ಚುನಾವಣೆಯ ವೇಳೆ ಸ್ವಪಕ್ಷೀಯರು ಬೇಸತ್ತಿದ್ದರು. ನಾಳೆ ಸಿದ್ದರಾಮಯ್ಯರ ಸರಕಾರವನ್ನು ಉರುಳಿಸಿ ಪರ್ಯಾಯ ಸರಕಾರ ರಚಿಸಿದರೂ ಇದು ತಪ್ಪದ ತಲೆನೋವು. ಹೀಗಾಗಿ ಇಂಥ ತಲೆ ನೋವಿಗೆ ಕೈ ಹಾಕುವ ಬದಲು ಸೂಕ್ತ ಕಾಲ ಬರುವವರೆಗೆ ಕಾಯುವುದು ಒಳ್ಳೆಯದು. ಸದ್ಯದ ಪರಿಸ್ಥಿತಿ ನೋಡಿದರೆ ಸಿದ್ದರಾಮಯ್ಯರ ಸರಕಾರದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ.
ಅದು ಜನರಿಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸಲು ಈ ವರ್ಷವೂ ಪರದಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಹಣಕಾಸಿನ ವಿಷಯದಲ್ಲಿ ಕೇಂದ್ರದ ವಿರುದ್ಧ ತಕರಾರು ಎತ್ತುವ ಸ್ಥಿತಿಗೆ ಬಂದಿದೆ ಎಂದರೆ, ಮುಂದಿನ ದಿನಗಳಲ್ಲಿ ಅದರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಹೀಗೆ ಸಂಕಷ್ಟಕ್ಕೆ ಸಿಲುಕಿದರೆ ಕಾಂಗ್ರೆಸ್ನ ಶಾಸಕರೇ ಕಿಡಿಕಿಡಿಯಾಗುತ್ತಾರೆ.
ಅಷ್ಟೇ ಅಲ್ಲ, ತಮ್ಮ ನಿರೀಕ್ಷೆಗೆ ತಕ್ಕಂತೆ ಸರಕಾರ ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಪರ್ಯಾಯ ಮಾರ್ಗಗಳ ಕಡೆ ಹೊರಳುವ ಸ್ಥಿತಿಗೆ ಬರುತ್ತಾರೆ. ಈ ಮಧ್ಯೆ ಸಿಎಂ ಹುದ್ದೆಯ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಸಂಘರ್ಷ ಇನ್ನೊಂದು ವರ್ಷ ಕಳೆಯುವುದರೊಳಗಾಗಿ ವಿಕೋಪಕ್ಕೆ ತಲುಪಿರುತ್ತದೆ. ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ನಡೆಸಲು ಇದೇ ಪಕ್ವ ಕಾಲ. ಇದೇ ರೀತಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಕೈ ಹಾಕಿ
ಪರ್ಯಾಯ ಸರಕಾರ ರಚಿಸಬೇಕೆಂದರೆ ಇಲ್ಲಿ ತಮ್ಮ ಸ್ಥಿತಿಯೂ ಸರಿ ಇಲ್ಲ. ಅರ್ಥಾತ್, ತಮಗಿರುವ ೬೬ ಶಾಸಕ ಬಲದ ಜತೆ ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲವನ್ನೂ ನೆಚ್ಚಿಕೊಳ್ಳಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಿಂದ ಶಾಸಕರನ್ನು ಸೆಳೆದು ಸರಕಾರ ರಚನೆಗೆ ಕೈ ಹಾಕುವುದು ಎಂದರೆ ಕಿಚಡಿ ಮಾಡಿದಂತೆ.
ಯಾಕೆಂದರೆ ಸರಕಾರದಲ್ಲಿ ಭಾಗಿಯಾಗುವ ಎಲ್ಲರೂ ತಮಗೆ ಇಷ್ಟು ಆದ್ಯತೆ ಸಿಗಬೇಕು ಅಂತ ಪಟ್ಟು ಹಿಡಿಯುತ್ತಾರೆ. ನಾವು ಬರದಿದ್ದಿದ್ದರೆ ಸರಕಾರ ಮಾಡಲು ಸಾಧ್ಯವೇ ಇರಲಿಲ್ಲ ಎನ್ನುತ್ತಾರೆ. ಹೀಗಾಗಿ ಸಿದ್ದರಾಮಯ್ಯರ ಸರಕಾರವನ್ನು ಉರುಳಿಸಿ ಪರ್ಯಾಯ ಸರಕಾರ ರಚನೆಗೆ ಕೈ ಹಾಕುವುದು ಯಾವ ಕಾರಣಕ್ಕೂ
ಪ್ರಾಕ್ಟಿಕಲ್ ಅಲ್ಲ ಎಂಬುದು ಮೋದಿ ಲೆಕ್ಕಾಚಾರ. ಈ ಮೆಸೇಜು ಸಿಕ್ಕಿದ ನಂತರ ಬಿಜೆಪಿಯ ಕೆಲ ಟಾಪ್ ಲೀಡರುಗಳಿಗೆ ಬೇಸರವಾಗಿದೆ. ಯಾಕೆಂದರೆ, ಸಿದ್ದ
ರಾಮಯ್ಯರ ಸರಕಾರ ಉರುಳಿದರೆ ತಾವು ಸಿಎಂ ಆಗುವುದು ಗ್ಯಾರಂಟಿ ಅಂತ ಈ ನಾಯಕರು ಲೆಕ್ಕ ಹಾಕಿದ್ದರು. ಕೆಲ ದಿನಗಳ ಹಿಂದೆ ಈ ನಾಯಕರ ಲೆಕ್ಕಾಚಾರದ ವಿವರ ಸಿಕ್ಕಾಗ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರೇ ದಿಗ್ಙೂಢರಾಗಿ ದ್ದರಂತೆ.
ಅದೇನೇ ಇರಲಿ, ಮೋದಿಯವರ ಲೆಕ್ಕಾಚಾರ ಬದಲಾಗಿರುವುದರಿಂದ, ಸಿದ್ದರಾಮಯ್ಯರ ಸರಕಾರವನ್ನು ಉರುಳಿಸುವ ಬದಲು ಇನ್ನಷ್ಟು ಕಾಲ ಮೌನವಾಗಿರೋಣ ಎಂದು ತೀರ್ಮಾನಿಸಿರುವುದರಿಂದ ರಾಜ್ಯ ಬಿಜೆಪಿಯ ಸೇನಾನಿಗಳು ಲೋಕಸಭೆ ಚುನಾವಣೆಯ ಮೇಲೆ ಗಮನ ಕೇಂದ್ರೀಕರಿಸುವ ಅನಿವಾರ್ಯತೆ ಎದುರಾಗಿದೆ. ಮುಂದೇನು ಕತೆಯೋ?
ಯೋಗಿಯ ಹೊಸ ಸ್ಟೋರಿ
ಬಿಜೆಪಿಯ ನಾಯಕ, ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅವರು ಮೊನ್ನೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದರಂತೆ. ಈ ವೇಳೆ ನೇರವಾಗಿ ವಿಷಯ ಪ್ರಸ್ತಾಪಿಸಿದ ಅವರು, ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ನಿಮ್ಮ ಅಳಿಯ ಡಾ.ಮಂಜು ನಾಥ್ರನ್ನು ಕಣಕ್ಕಿಳಿಸಿದರೆ ಡಿ.ಕೆ.ಸುರೇಶ್ ವಿರುದ್ಧ ಮಿನಿಮಮ್ ೨ ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಸರ್’ ಎಂದಿದ್ದಾರೆ. ಈ ಮಾತಿಗೆ ದೇವೇಗೌಡರು ಹಸನ್ಮುಖಿ ಯಾಗಿ, ‘ಹೌದು, ಈಗ ಮಂಜುನಾಥ್ರ ಜಾತಕವೂ ತುಂಬ ಚೆನ್ನಾಗಿದೆ. ನೋಡೋಣ, ಬಿಜೆಪಿ ವರಿಷ್ಠರು ಏನು ಹೇಳುತ್ತಾರೋ?’ ಎಂದಿದ್ದಾರೆ. ಗೌಡರ ಮಾತಿನಿಂದ ಉತ್ತೇಜಿತರಾದ ಯೋಗೀಶ್ವರ್, ‘ಬಿಜೆಪಿ ವತಿಯಿಂದ ಡಾ. ಮಂಜುನಾಥ್ ನಿಲ್ಲಲು ರೆಡಿ ಅಂದ್ರೆ ಬಿಜೆಪಿಯಲ್ಲಿ ವಿರೋಧ ಮಾಡುವವರೇ ಇಲ್ಲ ಸರ್. ನಾನೂ ಈ ಕುರಿತು ಪಕ್ಷದ ಪ್ರಮುಖರ ಮುಂದೆ ಪ್ರಸ್ತಾಪಿಸಿದ್ದೇನೆ. ನೀವು ಎಸ್ ಎಂದರೆ ಸಾಕು’ ಎಂದಿದ್ದಾರೆ.
ಅಂದ ಹಾಗೆ ಈ ಹಿಂದೆ ಯೋಗೀಶ್ವರ್ ಅವರಿಗೆ ಸಂಸದರಾಗುವ ಇಚ್ಛೆ ಇತ್ತು. ಆದರೆ ಕೆಲ ದಿನಗಳಿಂದ ಈ ವಿಷಯದಲ್ಲಿ ಆಸಕ್ತಿ ಕಳೆದುಕೊಂಡಿರುವ ಅವರು,
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕುಮಾರಣ್ಣ ನಿಂತ್ರೆ ಗೆಲ್ಲಿಸಿ ಕಳಿಸ್ತೀವಿ ಅನ್ನತೊಡಗಿದರು. ಆದರೆ ಈ ವಿಷಯದಲ್ಲಿ ಕುಮಾರಸ್ವಾಮಿ ಆಸಕ್ತಿ ತೋರದ ಪರಿಣಾಮ ಯೋಗೀಶ್ವರ್ ಅವರಿಗೆ ಡಾ.ಮಂಜುನಾಥ್ ಡಾರ್ಕ್ಹಾರ್ಸ್ ಆಗಿ ಕಾಣತೊಡಗಿದ್ದಾರೆ.
ಸುರ್ಜೇವಾಲ ಹುಡುಕಿದ ಅಸ್ತ್ರ
ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಪ್ರಬಲ ಅಸ್ತ್ರ ಬಳಸಬೇಕು ಅಂತ ಪಟ್ಟು ಹಿಡಿದಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಒಂದು ಅಸ್ತ್ರ ಹುಡುಕಿದ್ದಾರೆ. ಅದರ ಹೆಸರು ಎನ್.ಆರ್. ರಮೇಶ್. ಈ ಹಿಂದೆ ಬಿಬಿಎಂಪಿಯ ಸದಸ್ಯರಾಗಿದ್ದ ಎನ್.ಆರ್.ರಮೇಶ್ ಹಿಂದೆಯೇ ಶಾಸಕರಾಗಬೇಕಿತ್ತಾದರೂ ಯಡಿಯೂರಪ್ಪ ಕ್ಯಾಂಪಿನ ಹೊಡೆತದಿಂದಾಗಿ ಟಿಕೆಟ್ ವಂಚಿತರಾಗುತ್ತಿದ್ದಾರೆ. ಭ್ರಷ್ಟಾಚಾರದ ಎಪಿಸೋಡುಗಳನ್ನು ಹೊರತೆಗೆಯುವ ವಿಷಯದಲ್ಲಿ ಮಾಸ್ಟರ್ ಆಗಿರುವ ರಮೇಶ್ ಕಾಂಗ್ರೆಸ್ ವಿರುದ್ಧ ೧೨೨ ಭ್ರಷ್ಟಾಚಾರದ ಆರೋಪ ಗಳನ್ನು ಮಾಡಿ ನಡುಗಿಸಿದವರು.
ಅವರನ್ನು ಕೈ ಪಾಳಯಕ್ಕೆ ಸೆಳೆದರೆ ಬಿಜೆಪಿಯ ಶಿಬಿರ ನಡುಗುವಂತೆ ಮಾಡಬಹುದು ಎಂಬುದು ಸುರ್ಜೇವಾಲರ ಯೋಚನೆ. ಹಾಗಂತಲೇ ಮೊನ್ನೆ ರಮೇಶ್ರಿಗೆ ಫೋನು ಮಾಡಿದ ಸುರ್ಜೇವಾಲ, ‘ನೀವು ಕಾಂಗ್ರೆಸ್ಸಿಗೆ ಬನ್ನಿ, ತುಂಬ ಎತ್ತರಕ್ಕೆ ಏರುತ್ತೀರಿ’ ಎಂದಿದ್ದಾರೆ. ಈ ಮಾತು ರಮೇಶ್ರಿಗೆ ಹಿತವೆನ್ನಿಸಿದೆಯಾದರೂ
ಸಂಘಪರಿವಾರದ ನಾಯಕರಾದ ಬಿ.ಎಲ್.ಸಂತೋಷ್, ಮುಕುಂದ್, ಸುಽರ್ ಮತ್ತು ತಿಪ್ಪೇಸ್ವಾಮಿಯವರನ್ನು ನೆನಪಿಸಿಕೊಂಡು, ‘ನಾನು ಕಾಂಗ್ರೆಸ್ಸಿಗೆ ಬರಲ್ಲ ಸರ್’ ಅಂತ ಉತ್ತರಿಸಿದ್ದಾರೆ. ಆದರೆ ಸುರ್ಜೇವಾಲರು ರಮೇಶ್ ಬೆನ್ನಿಗೆ ಬಿದ್ದ ವಿಷಯ ತಿಳಿಯುತ್ತಲೇ ಬಿಜೆಪಿಯ ಹಲ ಮಾಜಿ ಸಚಿವರಿಗೆ ಆತಂಕ ಶುರುವಾಗಿರುವುದು ಮಾತ್ರ ಗುಟ್ಟಾಗಿ ಉಳಿದಿಲ್ಲ.