ತುಮಕೂರು: ರಾಜಕೀಯ ದುರುದ್ದೇಶದಿಂದ ಕೋಮು ಸಾಮರಸ್ಯವನ್ನು ಕದಡುವ ಮೂಲಕ ಸಮಾಜದಲ್ಲಿ ಅಂತರವನ್ನು ಬಿಜೆಪಿ ಹೆಚ್ಚಿಸುತ್ತಿದೆ ಎಂದು ಜೆಡಿಎಸ್ ಮುಖಂಡ ಗೋವಿಂದರಾಜು ಆರೋಪಿಸಿದ್ದಾರೆ.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳ್ಳಿ ಲೋಕೇಶ್ ಮಾತನಾಡಿ, ರಾಜ್ಯದಲ್ಲಿ ಉಂಟಾಗಿರುವ ಕೋಮು ಗಲಭೆಗೆ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ಬಲಪಂಥೀಯ ವಿಚಾರಧಾರೆಗಳನ್ನು ಪ್ರತಿಪಾದಿಸುವ ಸಂಘಟನೆಗಳೇ ಕಾರಣವಾಗಿದ್ದು, ಹಿಜಾಬ್, ಹಲಾಲ್ ಹೆಸರಿನಲ್ಲಿ ರಾಜ್ಯದಲ್ಲಿದ್ದ ಸಹೋದರತ್ವ ದೂರವಾಗಿದ್ದು, ಅಸಹಿಷ್ಣುತೆ ಯನ್ನು ಸೃಷ್ಠಿರುವ ಶಕ್ತಿಗಳ ವಿರುದ್ಧ ಹೋರಾಡಲು ನಾವೆಲ್ಲರು ತಯಾರಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಉಲ್ಲಂಘಿಸುವ ಮೂಲಕ ಹಕ್ಕುಗಳನ್ನು ಕಸಿಯಲಾಗುತ್ತಿದೆ, ಎಲ್ಲ ಮತ ಧರ್ಮಗಳಿಗೆ ಸಮಾನವಾದ ಸ್ವಾತಂತ್ರ್ಯ ನೀಡಿದ್ದರು ಸಹ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಿಸುತ್ತಿವೆ ಎಂದು ಹೇಳಿದರು.
ಜೆಡಿಎಸ್ ಸೇವಾದಳದ ರಾಜ್ಯಾಧ್ಯಕ್ಷ ಬಸವರಾಜು ಪಾದಯಾತ್ರೆ ಮಾತನಾಡಿ,ಜೆಡಿಎಸ್ ಪಕ್ಷ ಮಹಾತ್ಮಗಾಂಧಿಯವರ ಅಹಿಂಸೆ, ಲಾಲ್ಬಹದ್ದೂರ್ ಶಾಸ್ತಿçಯವರ ಜೈ ಜವಾನ್, ಜೈ ಕಿಸಾನ್ ಹಾಗೂ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಂಡು, ದೇಶದಲ್ಲಿ ಕೋಮು ಸಾಮರಸ್ಯ ಕಾಪಾಡಲು ನಿರಂತರ ಹೋರಾಟ ನಡಸುತ್ತಿದೆ. ತನ್ನ ಅಧಿಕಾರದ ಆಸೆಗಾಗಿ ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತು ದೇಶವನ್ನು ವಿಭಜಿಸುತ್ತಿರುವ ಬಿಜೆಪಿಯ ವಿರುದ್ದ ಬಿಜೆಪಿಯವರ ದೇಶ ಬಿಟ್ಟು ತೊಲಗಿ ಎಂಬ ಎರಡನೇ ಸ್ವಾತಂತ್ರ ಹೋರಾಟ ಆರಂಭವಾಗಬೇಕಾಗಿದೆ ಎಂದರು.
ಸತ್ಯಾಗ್ರಹದಲ್ಲಿ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಗಂಗಣ್ಣ, ರವೀಶ್ ಜಹಾಂಗೀರ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ತನ್ವೀರ್ ರೆಹಮಾನ್ ಖಾನ್ ಸತ್ಯಾಗ್ರಹ ಕುರಿತು ಮಾತನಾಡಿದರು. ಸಾಮರಸ್ಯಕ್ಕಾಗಿ ಸತ್ಯಾಗ್ರಹದಲ್ಲಿ ಪಾಲಿಕೆ ಉಪಮೇಯರ್ ನರಸಿಂಹಮೂರ್ತಿ, ಸದಸ್ಯರಾದ ನರಸಿಂಹರಾಜು, ಮನು, ಹಾಲನೂರು ಅನಂತ್, ತಾಹೇರ ಬಾನು, ಪ್ರೆಸ್ ರಾಜಣ್ಣ, ಉಮಾ ಶಂಕರ್, ಪ್ರಸನ್ನಕುಮಾರ್, ಗಣೇಶ್ ಮಧು ಸೇರಿದಂತೆ ಇತರರಿದ್ದರು.
ಸತ್ಯಾಗ್ರಹಕ್ಕೂ ಮುನ್ನ ನಗರದ ಜೆಡಿಎಸ್ ಕಚೇರಿಯಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಅವರ ಜನ್ಮ ದಿನಾಚರಣೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.