Sunday, 18th May 2025

ತೀಸ್ತಾ ಸೆಟಲ್‌ವಾಡ್‌’ರಿಂದ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯಿರಿ: ಮಿಶ್ರಾ

ಭೋಪಾಲ್‌: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್‌ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಆಗ್ರಹಿಸಿದ್ದಾರೆ.

‘ತೀಸ್ತಾ ಜಾವೇದ್‌ ಸೆಟಲ್‌ವಾಡ್‌ ಅವರು ಅವಾರ್ಡ್‌ ವಾಪ್ಸಿ ಗುಂಪಿನ ಸದಸ್ಯೆ ಯಾಗಿದ್ದಾರೆ. ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು’ ಎಂದು ಮಿಶ್ರಾ ಹೇಳಿದ್ದಾರೆ.

2002ರ ಗುಜರಾತ್‌ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ತೀಸ್ತಾ ಅವರನ್ನು ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಮುಂಬೈನಲ್ಲಿ ಬಂಧಿಸಿತ್ತು. ಬಳಿಕ ನಕಲಿ ಸಹಿ, ಕ್ರಿಮಿನಲ್ ಪಿತೂರಿ ಮತ್ತಿತರ ಪ್ರಕರಣದಲ್ಲಿ ಅಹಮದಾಬಾದ್‌ ಕ್ರೈಂ ಬ್ರಾಂಚ್‌ಗೆ ಅವರನ್ನು ಹಸ್ತಾಂತರಿಸಿದೆ. ತೀಸ್ತಾ ಅವರಿಗೆ 2007ರಲ್ಲಿ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ಪದ್ಮಶ್ರೀಯನ್ನು ಪುರಸ್ಕರಿಸಲಾಗಿದೆ.

ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯ ಕರ್ತೆ ತೀಸ್ತಾ ಸೆಟಲ್‌ವಾಡ್ ಅವರು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ವಶದಲ್ಲಿ ಇದ್ದಾರೆ.

2002ರ ಗೋಧ್ರಾ ನಂತರದ ದಂಗೆ ಪ್ರಕರಣಗಳಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿತ್ತು.

ಕೋಮುಗಲಭೆಗಳ ಬಗ್ಗೆ ಆಧಾರರಹಿತ ತಪ್ಪು ಆರೋಪಗಳನ್ನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಸುಪ್ರೀಂ ಕೋರ್ಟ್ ಹೇಳಿತ್ತು.