Tuesday, 13th May 2025

ಪಟಿಯಾಲ ನ್ಯಾಯಾಲಯಕ್ಕೆ ನವಜೋತ್ ಸಿಂಗ್ ಸಿಧು ಶರಣು

ಪಟಿಯಾಲ: ಪಟಿಯಾಲ ನ್ಯಾಯಾಲಯಕ್ಕೆ ಶುಕ್ರವಾರ ಪಂಜಾಬ್‌ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಶರಣಾಗಿದ್ದಾರೆ.

34 ವರ್ಷಗಳ ಹಿಂದೆ ಗುರ್ನಾಮ್‌ ಸಿಂಗ್‌ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಕಠಿಣ ಸಜೆಯನ್ನು ಗುರುವಾರ ವಿಧಿಸಿತ್ತು. ಮೂರು ದಶಕಗಳ ಹಿಂದಿನ ಘಟನೆಯಲ್ಲಿ ಗುರ್ನಾಮ್‌ ಸಿಂಗ್‌ ಮೃತಪಟ್ಟಿದ್ದರು.

ನವತೇಜ್ ಸಿಂಗ್ ಚೀಮಾ ಸೇರಿದಂತೆ ಪಕ್ಷದ ಕೆಲವು ನಾಯಕರೊಂದಿಗೆ ಸಿಧು ಪಟಿಯಾಲ ನ್ಯಾಯಾಲ ಯಕ್ಕೆ ತೆರಳಿದರು. ಶುಕ್ರವಾರ ಬೆಳಗ್ಗೆ ಸಿಧು ನಿವಾಸದ ಎದುರು ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು.

‘ಸಿಧು ಶರಣಾಗಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ವೈದ್ಯಕೀಯ ಪರೀಕ್ಷೆ ಮತ್ತು ಇತರ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತಿದೆ’ ಎಂದು ಸಿಧು ಅವರ ಮಾಧ್ಯಮ ಸಲಹೆಗಾರ ಸುರಿಂದರ್ ದಲ್ಲಾ ಮಾಹಿತಿ ನೀಡಿದ್ದಾರೆ.

‘ಕಾನೂನಿಗೆ ಶರಣಾಗುತ್ತೇನೆ’ ಎಂದು ಸಿಧು ಗುರುವಾರವೇ ಪ್ರಕಟಿಸಿದ್ದರು.