Wednesday, 14th May 2025

ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಓರ್ವ ಸಜೀವ ದಹನ

ನವದೆಹಲಿ: ರಾಜಧಾನಿಯಲ್ಲಿ ಗುರುವಾರ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ಸಜೀವ ದಹನವಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ.

ಈಶಾನ್ಯ ದೆಹಲಿಯ ನ್ಯೂ ಮುಸ್ತಫಾಬಾದ್ ಪ್ರದೇಶದ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, 6 ಮಂದಿಗೆ ಸುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ. 27 ಮಂದಿಯನ್ನು ಬಲಿ ಪಡೆದ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಮಾಸುವ ಮುನ್ನವೇ ಮತ್ತೊಂದು ಘಟನೆ ಸಂಭವಿಸಿದೆ.

ನ್ಯೂ ಮುಸ್ತಫಾಬಾದ್ ಪ್ರದೇಶದಲ್ಲಿ ಅಗ್ನಿ ಅನಾಹುತದ ಬಗ್ಗೆ ಕರೆ ಬಂದಿದೆ. ನೆಲಮಾಳಿಗೆ ಮತ್ತು ಮೊದಲ ಮಹಡಿಯನ್ನು ಒಳಗೊಂಡಿರುವ ಕಟ್ಟಡ ದೊಳಗೆ ಏಳು ಜನರು ಸಿಲುಕಿಕೊಂಡಿದ್ದನ್ನು ಅಗ್ನಿಶಾಮಕ ಸಿಬ್ಬಂದಿ ಪತ್ತೆ ಮಾಡಿದೆ. ತಕ್ಷಣವೇ, ಅವರನ್ನು ರಕ್ಷಿಸಲಾಯಿತು. ಕೂಲರ್ ನ ಕವಚಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ನಂತರ ಕಟ್ಟಡದ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.