Tuesday, 13th May 2025

ಆರೆಸ್ಸೆಸ್ ಮೂವರು ಕಾರ್ಯಕರ್ತರ ಬಂಧನ

ಪಾಲಕ್ಕಾಡ್: ಪಾಲಕ್ಕಾಡ್‌ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸ್ಥಳೀಯ ಮುಖಂಡನೊಬ್ಬನ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂವರು ಕಾರ್ಯಕರ್ತರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಎಸ್. ಸಂಜಿತ್ ಹತ್ಯೆಗೆ ಪ್ರತೀಕಾರವಾಗಿ ಪಿಎಫ್‌ಐ ಮುಖಂಡ ಎ. ಸುಬೈರ್ ಹತ್ಯೆಯಾಗಿದೆ. ಬಂಧಿತರನ್ನು ರಮೇಶ್, ಅರುಮುಘನ್ ಹಾಗೂ ಸರವಣನ್ ಎಂದು ಗುರುತಿಸಲಾಗಿದೆ. ಪಿಎಫ್‌ಐ ಕಾರ್ಯಕರ್ತರಿಂದ ಹತ್ಯೆಗೀಡಾದ ಸಂಜಿತ್‌ಗೆ ರಮೇಶ್ ಆಪ್ತನಾಗಿದ್ದ.

ಪಾಲಕ್ಕಾಡ್‌ನಲ್ಲಿ ಪಿಎಫ್‌ಐನ ಸ್ಥಳೀಯ ವಲಯದ ಅಧ್ಯಕ್ಷರಾಗಿದ್ದ ಸುಬೈರ್ ಅವರನ್ನು ಕೊಲೆ ಮಾಡಲು ಮೂವರು ಸದಸ್ಯರ ತಂಡ ಒಂದೇ ತಿಂಗಳಲ್ಲಿ ಎರಡು ಬಾರಿ ವಿಫಲ ಪ್ರಯತ್ನಗಳನ್ನು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.