Sunday, 11th May 2025

ಹಿಂದುಯೇತರ ಕಲಾವಿದೆ ಕಾರಣಕ್ಕೆ ನೃತ್ಯ ಪ್ರದರ್ಶನ ರದ್ದು !

ತಿರುವನಂತಪುರ: ಹಿಂದುಯೇತರ ಕಲಾವಿದೆ ಎಂಬ ಕಾರಣಕ್ಕೆ ಕೂಡಲ್ಮಾಣಿಕ್ಯಂ ದೇವಸ್ಥಾನದಲ್ಲಿ ಮುಂಬರುವ ಉತ್ಸವದ ಸಂದರ್ಭದಲ್ಲಿ ಭರತನಾಟ್ಯ ಕಲಾವಿದೆ ಮಾನ್ಸಿಯಾ ವಿ.ಪಿ ಎ.21ರಂದು ನೀಡಲಿದ್ದ ನೃತ್ಯ ಪ್ರದರ್ಶನವನ್ನು ಆಡಳಿತ ಮಂಡಳಿ ರದ್ದುಗೊಳಿಸಿದೆ.

ಮುಸ್ಲಿಮ್ ಸಮುದಾಯದಲ್ಲಿ ಜನಿಸಿರುವ ಮಾನ್ಸಿಯಾ ತನ್ನನ್ನು ನಾಸ್ತಿಕ ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ದೇವಸ್ಥಾನದಲ್ಲಿ 10 ದಿನಗಳ ಕಾಲ ನಡೆಯ ಲಿರುವ ಉತ್ಸವದಲ್ಲಿ 800 ಕಲಾವಿದರು ಭಾಗವಹಿಸಲಿದ್ದಾರೆ ಎಂದು ವರದಿ ಯಾಗಿದೆ.

ತನಗೆ ಯಾವುದೇ ಧರ್ಮವಿಲ್ಲವೆಂದು ಮಾನ್ಸಿಯಾ ಲಿಖಿತ ಹೇಳಿಕೆ ನೀಡಿದ್ದಾರೆ. ಹೀಗಾಗಿ ದೇವಸ್ಥಾನದ ಸಂಪ್ರದಾಯದಂತೆ ನಾವು ನಡೆದುಕೊಂಡಿದ್ದೇವೆ ‘ ಎಂದು ಕೂಡಲ್ಮಾಣಿಕ್ಯಂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ತಿಳಿಸಿದರು.

ಮುಂಚಿತವಾಗಿ ಕಾರ್ಯಕ್ರಮವು ನಿಗದಿಯಾಗಿದ್ದರೂ ಸರಕಾರದ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ದೇವಸ್ಥಾನವು ಕಾರ್ಯಕ್ರಮ ನೀಡುವುದನ್ನು ನಿಷೇಧಿಸಿದೆ.

ತಾನು ಹಿಂದುಯೇತರ ಆಗಿರುವುದರಿಂದ ದೇವಸ್ಥಾನದಲ್ಲಿ ಪ್ರದರ್ಶನ ನೀಡುವಂತಿಲ್ಲ ಎಂದು ದೇವಳದ ಪದಾಧಿಕಾರಿ ಯೋರ್ವರು ತಿಳಿಸಿದ್ದಾರೆ ಎಂದಿರುವ ಮಾನ್ಸಿಯಾ, ಕಲಾವಿದರಿಗೆ ಅವರ ಧರ್ಮ ಆಧರಿಸಿ ಅವಕಾಶ ನೀಡಲಾಗುತ್ತಿದೆಯೇ ಹೊರತು ಪ್ರತಿಭೆಯನ್ನಲ್ಲ ಎಂದಿದ್ದಾರೆ.

ಕೇರಳ ಕಲಾಮಂಡಳಂನಲ್ಲಿ ಭರತನಾಟ್ಯದಲ್ಲಿ ಪಿಎಚ್ಡಿ ಅಧ್ಯಯನ ಮಾಡುತ್ತಿರುವ ಮಾನ್ಸಿಯಾ,ವಯಲಿನ್ ವಾದಕ ಹಾಗೂ ಕಲಾವಿದ ಶ್ಯಾಮ ಕಲ್ಯಾಣ್ ಅವರನ್ನು ಮದುವೆಯಾದ ಬಳಿಕ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದೀರಾ ಎಂದು ದೇವಳದ ಪದಾಧಿಕಾರಿ ತನ್ನನ್ನು ಪ್ರಶ್ನಿಸಿದ್ದರು.

ಗುರುವಾಯೂರು ದೇವಸ್ಥಾನವು ಒಮ್ಮೆ ತನ್ನ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿತ್ತು ಎಂದು ಅರೋಪಿಸಿದರು. ಶ್ಯಾಮ ಕಲ್ಯಾಣ ಅವರೂ ಫೇಸ್ಬುಕ್ನಲ್ಲಿ ತನ್ನ ಪತ್ನಿಯ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದು,ಕಲೆ ತಮ್ಮ ಧರ್ಮವಾಗಿದೆ,ತಾವು ನೃತ್ಯ ಮತ್ತು ಸಂಗೀತದ ಆರಾಧಕರಾಗಿದ್ದೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಶಶಿ ತರೂರ್, ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ದೇವಸ್ಥಾನದ ಆಡಳಿಯ ಮಂಡಳಿಯ ನಿರ್ಧಾರವನ್ನು ಖಂಡಿಸಿದ್ದಾರೆ.