Tuesday, 13th May 2025

ಜನರತ್ತ ನುಗ್ಗಿದ ಶಾಸಕರ ವಾಹನ: ಬಿಜೆಪಿ ಕಾರ್ಯಕರ್ತೆ ಸಾವು

ಭುವನೇಶ್ವರ: ಒಡಿಶಾದ ಬಿಜೆಡಿ ಶಾಸಕ ಪ್ರಶಾಂತ್ ಜಗದೇವ್ ಶನಿವಾರ ಖೋರ್ಧಾ ಜಿಲ್ಲೆಯ ಬಾನ್ಪುರ್ ಬ್ಲಾಕ್ ಬಳಿ ಜನರ ಮೇಲೆ ವಾಹನವನ್ನು ನುಗ್ಗಿಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾಳೆ.

ಚಿಲಿಕಾ ಶಾಸಕ ಪ್ರಶಾಂತ್ ಜಗದೇವ್ ಅವರ ವಾಹನ ಜನರತ್ತ ನುಗ್ಗಿದ ಕಾರಣದಿಂದಾಗಿ ಆಕ್ರೋಶಗೊಂಡ ಸ್ಥಳೀಯರು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಶಾಸಕರು ಗಂಭೀರ ವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮೃತಪಟ್ಟ ಮಹಿಳೆ ಬಿಜೆಪಿ ಕಾರ್ಯಕರ್ತೆ ಎಂದು ಮಾಹಿತಿ ಸಿಕ್ಕಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ. ಶಾಸಕರ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಶಾಸಕರನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬ್ಲಾಕ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿತ್ತು. ಅಧ್ಯಕ್ಷರ ಚುನಾವಣೆಗಾಗಿ ಬಾನ್‌ಪುರ ಬ್ಲಾಕ್ ಕಚೇರಿ ಬಳಿ ಹೆಚ್ಚಿನ ಸಂಖ್ಯೆ ಯಲ್ಲಿ ಸೇರಿದ್ದ ಆಕ್ರೋಶಗೊಂಡ ಜನರು ಜಗದೇವ್ ಅವರ ವಾಹನವನ್ನು ಧ್ವಂಸಗೊಳಿಸಿದರು.

ಬೇಕಾಬಿಟ್ಟಿ ವಾಹನ ಚಲಾಯಿಸಿದ ಒಡಿಶಾದ ಚಿಲಿಕಾ ಕ್ಷೇತ್ರದ ಬಿಜೆಡಿ ಶಾಸಕ ಪ್ರಶಾಂತ್ ಜಗದೇವ್ ವಿರುದ್ಧ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಕೃತ್ಯಕ್ಕೆ ಶಾಸಕರೇ ಕಾರಣ ಎಂದು ಕೂಡಾ ಆರೋಪ ಮಾಡಿದ್ದಾರೆ.