Tuesday, 13th May 2025

ವಾರಾಂತ್ಯ ಕರ್ಫ್ಯೂ ಹಿಂಪಡೆಯಲು ಲೆಫ್ಟಿನೆಂಟ್ ಗವರ್ನರ್ ನಕಾರ

ನವದೆಹಲಿ: ವಾರಾಂತ್ಯ ಕರ್ಫ್ಯೂವನ್ನು ಹಿಂಪಡೆಯುವ ದೆಹಲಿ ಸರ್ಕಾರ ಸಲ್ಲಿಸಿರುವ ಪ್ರಸ್ತಾವವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ತಿರಸ್ಕರಿಸಿದ್ದಾರೆ.

ವಾರಾಂತ್ಯ ಕರ್ಫ್ಯೂ ಹಿಂಪಡೆದು, ಸಮ-ಬೆಸ ವ್ಯವಸ್ಥೆಯಲ್ಲಿ ಅಂಗಡಿಗಳು ಹಾಗೂ ಖಾಸಗಿ ಕಚೇರಿಗಳನ್ನು ಶೇ 50ರ ಸಾಮರ್ಥ್ಯದೊಂದಿಗೆ ತೆರೆಯಲು ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸಿತ್ತು. ನಗರದಲ್ಲಿ ಕೋವಿಡ್ ಪ್ರಕರಣಗಳಲ್ಲಿ ತುಸು ಇಳಿಕೆಯಾಗುತ್ತಿರುವುದು ಕಂಡುಬಂದ ಕಾರಣ ನಿರ್ಬಂಧ ಸಡಿಲಿಸಲು ಸರ್ಕಾರ ಮುಂದಾಗಿತ್ತು ಎಂದು ಮೂಲಗಳು ಹೇಳಿವೆ.

ದೆಹಲಿಯಲ್ಲಿ ಗುರುವಾರ 12,306 ಕೋವಿಡ್ ಪ್ರಕಣಗಳು ವರದಿಯಾಗಿದ್ದು, 43 ಮಂದಿ ಸೋಂಕಿತರು ಮೃತಪಟ್ಟಿದ್ದರು.

 

ಕೋವಿಡ್ ಪ್ರಕರಣಗಳು ಹೆಚ್ಚಿದ್ದರಿಂದ ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಹೇರಲಾಗಿತ್ತು. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ಜಾರಿಯಲ್ಲಿದೆ.