ಬೆಂಗಳೂರು: ಎಫ್ಸಿ ಎಕ್ಸ್ಪೋ ವರ್ಷದಿಂದ ವರ್ಷಕ್ಕೆ ಅಗಾಧವಾಗಿ ಬೆಳೆದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಅನೇಕ ವಲಯಗಳಿಗೆ ಮಳಿಗೆಗಳನ್ನು ನೀಡುವುದರೊಂದಿಗೆ ಫಸ್ಟ್ ಸರ್ಕಲ್ ಒಕ್ಕಲಿಗ ಸಮುದಾಯಕ್ಕೆ ಬಹು ದೊಡ್ಡ ಅವಕಾಶ ಒದಗಿಸಿದೆ ಎಂದು ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ತಿಳಿಸಿದರು.
ಮೂರು ದಿನಗಳ ಫಸ್ಟ್ ಸರ್ಕಲ್-ಉದ್ಯಮಿ ಒಕ್ಕಲಿಗ ಎಕ್ಸ್ಪೋ (First Circle Udyami Vokkaliga Expo) ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಅವರು, ಎಫ್ಸಿ ಎಕ್ಸ್ಪೋ ವರ್ಷದಿಂದ ವರ್ಷಕ್ಕೆ ಅಗಾಧವಾಗಿ ಬೆಳೆದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಅನೇಕ ವಲಯಗಳಿಗೆ ಮಳಿಗೆಗಳನ್ನು ನೀಡುವುದರೊಂದಿಗೆ ಫಸ್ಟ್ ಸರ್ಕಲ್ ಒಕ್ಕಲಿಗ ಸಮುದಾಯಕ್ಕೆ ಬಹು ದೊಡ್ಡ ಅವಕಾಶ ಒದಗಿಸಿದೆ. ಪಿನ್ಗಳಿಂದ ಹಿಡಿದು ಯಂತ್ರಗಳವರೆಗೆ, ಕೋಲ್ಡ್ ಪ್ರೆಸ್ಡ್ ಆಯಿಲ್ನಿಂದ ಡೈರಿ ತಂತ್ರಜ್ಞಾನದವರೆಗೆ ಮತ್ತು ನಿರ್ಮಾಣದವರೆಗೆ ಎಲ್ಲವನ್ನೂ ಒದಗಿಸುತ್ತಿದೆ. ಇಂದು, ಈ ಎಕ್ಸ್ಪೋ ಒಬ್ಬರನ್ನೊಬ್ಬರು ಬೆಂಬಲಿಸುವ ಅತ್ಯುತ್ತಮ ವೇದಿಕೆಯಾಗಿ ಸೃಷ್ಟಿಯಾಗಿದೆ. ಫಸ್ಟ್ ಸರ್ಕಲ್ ನಿಜವಾಗಿಯೂ ಯಶಸ್ವಿ ವೇದಿಕೆಯನ್ನು ಸೃಷ್ಟಿಸಿದೆ ಎಂದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಒಕ್ಕಲಿಗ ಉದ್ಯಮಿಗಳ ಸಾಮರ್ಥ್ಯ ವೃದ್ಧಿಯಲ್ಲಿ ಎಫ್ಸಿ ಉದ್ಯಮಿ ಒಕ್ಕಲಿಗ ಅಭೂತಪೂರ್ವ ವೇದಿಕೆ ಸೃಷ್ಟಿಸಿದೆ. ಮೂರನೇ ವರ್ಷದ ಈ ಯಶಸ್ವಿ ಎಕ್ಸ್ಪೋ ಜಯರಾಮ್ ರಾಯಪುರ ಅವರ ಬದ್ಧತೆಗೆ ಸಾಕ್ಷಿಯಾಗಿದೆ. ಉದ್ಯಮಿಗಳು ಮತ್ತೇ ತಮ್ಮ ಗ್ರಾಮಗಳತ್ತ ತೆರಳಿ ಉದ್ಯೋಗ ಸೃಷ್ಟಿಸುವ ಕೆಲಸಕ್ಕೆ ಮುಂದಾಗಬೇಕೆಂಬುದು ನನ್ನ ಆಶಯ. ಈ ವೇದಿಕೆಯು ಆರ್ಥಿಕವಾಗಿ ನೆರವು ಬಯಸುವ ವ್ಯಕ್ತಿಗಳನ್ನು ಉದ್ಯಮಿಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಫಸ್ಟ್ ಸರ್ಕಲ್ನ ಮುಖ್ಯ ಮಾರ್ಗದರ್ಶಕ ಜಯರಾಮ್ ರಾಯಪುರ ಮಾತನಾಡಿ, ಮೂರು ದಿನಗಳ ಉದ್ಯಮಿ ಒಕ್ಕಲಿಗ ಎಕ್ಸ್ಪೋ ಅದ್ಭುತ ಯಶಸ್ಸನ್ನು ಕಂಡಿದೆ, ಕರ್ನಾಟಕದಾದ್ಯಂತ 35,000 ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಳವಾಗಿದೆ. ಮೊದಲ ಎಕ್ಸ್ಪೋದಲ್ಲಿ, 50 ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದರು. ಎರಡನೇ ಆವೃತ್ತಿಯಲ್ಲಿ ಸಂಖ್ಯೆ 90 ಕ್ಕೆ ಏರಿತು, ಮತ್ತು ಈ ವರ್ಷ ನಾವು 120 ಕ್ಕೂ ಹೆಚ್ಚು ಉದ್ಯಮಿಗಳಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಒಕ್ಕಲಿಗ ಸಮುದಾಯದಲ್ಲಿ ಉದ್ಯಮಶೀಲತೆಯ ಜಾಗೃತಿ ಮೂಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನಾವು ಉದ್ಯಮಿಗಳಲ್ಲಿ ವಿಶ್ವಾಸವನ್ನು ಮೂಡಿಸಿದ್ದೇವೆ ಮತ್ತು ಮುಂದಿನ ವರ್ಷ, ಅಗ್ರಿಗೇಟರ್ ವ್ಯವಹಾರಗಳನ್ನು ಮುಂದಿನ ಹಂತಕ್ಕೆ ಏರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಾವು ಸಮಗ್ರ ಡೇಟಾಬೇಸ್ ರಚಿಸಲು ಯೋಜಿಸಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Shri Raghavendra Chitravani Awards 2024: ಶ್ರೀ ರಾಘವೇಂದ್ರ ಚಿತ್ರವಾಣಿ ವಾರ್ಷಿಕ ಪ್ರಶಸ್ತಿ ಪ್ರಕಟ
ದಕ್ಷಿಣ ಭಾರತದಲ್ಲಿ ಒಂದು ಕೋಟಿಗೂ ಹೆಚ್ಚು ಒಕ್ಕಲಿಗರಿದ್ದಾರೆ. ವ್ಯಾಪಾರದಲ್ಲಿ ಸಹೋದರತ್ವವನ್ನು ಬೆಳೆಸುವುದು ನಮ್ಮ ಗುರಿಯಾಗಿದೆ. ಈ ಸಮುದಾಯದ ಕನಿಷ್ಠ 10 ಲಕ್ಷ ವ್ಯಕ್ತಿಗಳನ್ನು ಉದ್ಯಮಿಗಳಾಗುವಂತೆ ಉತ್ತೇಜಿಸುವುದು ನಮ್ಮ ಉದ್ದೇಶವಾಗಿದೆ. ಒಂದು ಲಕ್ಷ ಉದ್ಯಮಿಗಳು ತಲಾ ₹ 10 ಕೋಟಿ ವಾರ್ಷಿಕ ವಹಿವಾಟು ನಡೆಸುವುದು ಮತ್ತು 10,000 ಮಂದಿ ತಲಾ ₹ 100 ಕೋಟಿ ವಾರ್ಷಿಕ ವಹಿವಾಟು ನಡೆಸುವುದು ನಮ್ಮ ಗುರಿಯಾಗಿದೆ. ಇದನ್ನು ಸಾಧಿಸಲು ನಾವು ನಮ್ಮ ಕಾರ್ಯತಂತ್ರ, ಆದ್ಯತೆ ಮತ್ತು ಸಾಮರ್ಥ್ಯ ವೃದ್ಧಿಯ ಕುರಿತು ಯೋಜನೆ ರೂಪಿಸುತ್ತಿದ್ದು, ಕ್ರಿಯಾಶೀಲ ಯೋಚನೆಯೊಂದಿಗೆ ಇದನ್ನು ಕಾರ್ಯಸಾಧುವಾಗಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಎಫ್ಸಿ ಏಂಜಲ್ಸ್ ಲೋಗೋವನ್ನು ಅನಾವರಣಗೊಳಿಸಲಾಯಿತು.
ಎಫ್ಸಿ ರಾಜ್ಯಾಧ್ಯಕ್ಷ ನಂದೀಶ್ ರಾಜೇಗೌಡ ಮಾತನಾಡಿ, ಹಳೆ ಮೈಸೂರು ಪ್ರಾಂತ್ಯದ 124 ತಾಲೂಕುಗಳ ಪೈಕಿ 62 ತಾಲೂಕುಗಳಲ್ಲಿ ಯಶಸ್ವಿಯಾಗಿ ಎಫ್ಸಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಪುಸ್ತಕದಲ್ಲಿ ಸಂಗ್ರಹಿಸಿ ಇಂದು ಬಿಡುಗಡೆ ಮಾಡಲಾಗಿದೆ. ಈ ತಾಲೂಕುಗಳ ಮಾಹಿತಿಯೊಂದಿಗೆ ನಾವು ಪ್ರಸ್ತುತ ಉಳಿದ 70 ತಾಲೂಕುಗಳನ್ನು ಕಂಪೈಲ್ ಮಾಡುವ ಕೆಲಸ ಮಾಡುತ್ತಿದ್ದೇವೆ ಮತ್ತು ಇದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Bengaluru News: ಶಿಕ್ಷಣದೊಂದಿಗೆ ಕಲಾ ಚಟುವಟಿಕೆಗಳಲ್ಲೂ ಮಕ್ಕಳು ಭಾಗಿಯಾಗುವಂತೆ ಪಾಲಕರು ಗಮನಹರಿಸಲಿ: ಎಚ್.ಎಸ್.ಸುಧೀಂದ್ರ
ಕಾರ್ಯಕ್ರಮದಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಎಫ್ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ, ಮಾಜಿ ಎಂಎಲ್ಸಿ ರಮೇಶ್ ಗೌಡ, ಮೀಡಿಯಾ ಕನೆಕ್ಟ್ ಸಂಸ್ಥಾಪಕರು ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.