ಒಂದೊಳ್ಳೆ ಮಾತು

ರೂಪಾ ಗುರುರಾಜ್
ಒಂದು ಹಳ್ಳಿಯಲ್ಲಿ ಕೃಷ್ಣಪ್ಪನೆಂಬುವನಿದ್ದ. ಅವನ ಬಳಿ ಹತ್ತಾರು ಎಮ್ಮೆ ಹಸುಗಳಿದ್ದವು. ಹಾಲು ಮಾರಿ ನೆಮ್ಮದಿ
ಯಿಂದ ಜೀವನ ನೆಡೆಸುತ್ತಿದ್ದ.ಮೊದಮೊದಲು ಸ್ವಲ್ಪ ಪ್ರಾಮಾಣಿಕನಾಗಿದ್ದ. ಹಾಲಿಗೆ ಅಷ್ಟು ನೀರು ಬೆರಸುತ್ತಿರ ಲ್ಲಿಲ್ಲ. ಹಾಲಿನ ಬೇಡಿಕೆ ಹೆಚ್ಚಾದಂತೆ ದುರಾಸೆ ಹುಟ್ಟಿ, ಹಾಲಿಗಿಂತ ನೀರೇ ಹೆಚ್ಚಾಗಿರುತ್ತಿತ್ತು.
ನಗರಕ್ಕೆ ಹಾಲು ಕೊಡಲು ಒಂದು ಚಿಕ್ಕ ನದಿ ದಾಟಿ ಹೋಗಬೇಕಿತ್ತು. ಹೋಗುವಾಗ ಅದೇ ನದಿ ನೀರನ್ನು ಹಾಲಿಗೆ ಬೆರಸುತ್ತಿದ್ದ. ಇದರಿಂದ ಅವನಿಗೆ ಒಳ್ಳೆಯ ಆದಾಯವೂ ಬರುತ್ತಿತ್ತು. ಕೃಷ್ಣಪ್ಪನ ಹೆಂಡತಿ ಜಯಮ್ಮ, ಅವನಿಗೊಬ್ಬ ಮಗನಿದ್ದ ಅವನ ಹೆಸರು ಭೀಮ. ಅವನು ಯಾವ ಕೆಲಸವನ್ನೂ ಮಾಡದೇ ಉಂಡಾಡಿ ಗುಂಡನಂತೆ ಪೋಲಿ ಅಲೆಯುತ್ತಿದ್ದ. ಅಪ್ಪನ ಜೇಬಿನಲ್ಲಿದ್ದ ದುಡ್ಡನ್ನೆ ಲಪಟಾಯಿಸಿ ಗೆಳೆಯರೊಡನೆ ಮೋಜು ಮಾಡುತ್ತಿದ್ದ. ಮಗ ಹಾಗೇ ದೊಡ್ಡವನಾದ. ಮದುವೆ ಮಾಡಿದರೆ ಇವನಿಗೆ ಬುದ್ಧಿ ಬರಬಹುದೆಂದು ಭಾವಿಸಿ ಕೃಷ್ಣಪ್ಪ ಮದುವೆ ಮಾಡಲು ನಿಶ್ಚಯಿಸಿದ. ಮದುವೆ ದಿನ ಹತ್ತಿರವಾಯಿತು.
ಕೃಷ್ಣಪ್ಪ, ತನಗೆ ನಗರದ ಗಿರಾಕಿಗಳಿಂದ ಬರಬೇಕಾದ ಹಣವನ್ನು ವಸೂಲಿ ಮಾಡಿಕೊಂಡು ಮದು ಮಗನಿಗೆ ಬೇಕಾದ ಒಡವೆ ವಸಗಳನ್ನು ಖರೀದಿಸಿ,ಉಳಿದ ಹಣದೊಂದಿಗೆ ಮನೆಗೆ ಹೊರಟ. ದಾರಿಯಲ್ಲಿ ನದಿ ದಾಟಬೇಕಿತ್ತು. ಕೃಷ್ಣಪ್ಪ ದೋಣಿ ಏರಿ ಕುಳಿತ. ಮಾರ್ಗ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಿ ದೋಣಿ ಒಂದು ಬಂಡೆಗಲ್ಲಿಗೆ ಡಿಕ್ಕಿ ಹೊಡೆದು ಕೃಷ್ಣಪ್ಪನ ಕೈಲಿದ್ದ ಒಡವೆ ವಸ್ತ್ರಗಳೆ ನೀರಲ್ಲಿ ಬಿದ್ದು ಕೊಚ್ಚಿಕೊಂಡು ಹೋದವು. ಈಗ ಕೃಷ್ಣಪ್ಪನ ಬಳಿ ಕಿಸೆಯಲ್ಲಿದ್ದ ಸ್ವಲ್ಪ ಹಣ ಬಿಟ್ಟು ಇನ್ನೇನೂ ಉಳಿಯಲಿಲ್ಲ.
‘ಅಯ್ಯೋ! ಈಗ ನನ್ನ ಮಗನ ಮದುವೆ ಹೇಗಪ್ಪ ಮಾಡೋದು?’ ಎಂದು ತಲೆಯ ಮೇಲೆ ಕೈ ಹೊತ್ತು ಕುಳಿತ.
ನದಿಯ ಒಳಗಿನಿಂದ ಯಾರೋ, ‘ಕೃಷ್ಣಪ್ಪಾ, ನೀನು ಹಾಲಿನಿಂದ ಗಳಿಸಿದ್ದು ಮಾತ್ರ ನಿನಗೆ ಉಳಿದಿದೆ. ನೀರು ಬೆರೆಸಿ
ಸಂಪಾದಿಸಿದ್ದೆಲ್ಲ ನೀರುಪಾಲಾಗಿದೆಯಷ್ಟೇ.
ಹಾಲಿನ ದುಡ್ಡು ನಿನ್ನ ಬಳಿಯೇ ಇದೆ, ನೀರಿನಿಂದ ಬಂದದ್ದು ನನಗೆ ಸೇರಬೇಕಲ್ಲವೇ? ಅದನ್ನು ಮಾತ್ರ ನಾನು ತೆಗೆದುಕೊಂಡಿದ್ದೇನೆ’ ಎಂದು ಕೂಗಿ ಹೇಳಿದಂತಾಯಿತು. ಕೃಷ್ಣಪ್ಪ ಏನೂ ಮಾತನಾಡದೇ ತನ್ನ ದುರ್ಬುದ್ದಿಗೆ ತಾನೇ ನಾಚಿಕೊಂಡು ಮನೆ ಸೇರಿದ. ಈ ಕಥೆ ನಮ್ಮಲ್ಲಿ ಬಹಳಷ್ಟು ಜನ ಇದನ್ನು ನಮ್ಮ ಮಕ್ಕಳಿಗೂ ಕೂಡ ಹೇಳಿದ್ದೇವೆ. ಆದರೂ ಜೀವನದಲ್ಲಿ ಕೆಲವೊಮ್ಮೆ ಈ ಸರಳ ಸತ್ಯವನ್ನು ಮರೆತು, ಸ್ವಾರ್ಥ ಯೋಚನೆಯಿಂದ ನಮ್ಮ ಲಾಭಕ್ಕಾಗಿ ಮತ್ತೊಬ್ಬರಿಗೆ ನಷ್ಟ ಮಾಡಲು ಹಿಂದೆ ಸರಿಯುವುದಿಲ್ಲ.
ನಾವು ತಿಳಿದುಕೊಳ್ಳುವ ವಿವೇಕಗಳನ್ನು ಕಥೆಗಳಿಗೆ ಮೀಸಲಾಗಿತ್ತು ನಿಜ ಜೀವನದಲ್ಲಿ ಮತ್ತೆ ಯಥಾಸ್ಥಿತಿ, ಅನುಕೂಲ ಸಿಂಧುವಾಗಿ ಬದುಕಿ ಬಿಡುತ್ತೇವೆ. ಎಷ್ಟೋ ಬಾರಿ ನಮ್ಮ ಆತ್ಮಸಾಕ್ಷಿ ನಮಗೆ ಚುಚ್ಚಿ ಹೇಳುತ್ತದೆ ನೀನು ಮಾಡು ತ್ತಿರುವುದು ತಪ್ಪು ಎಂದು. ಆದರೂ ಅದನ್ನು ಸುಮ್ಮನಿರಿಸಿ ಆ ದಿನಕ್ಕೆ ಏನು ಅನುಕೂಲವೋ ಅದನ್ನು ಮಾಡಿ ಬಿಡುವ ಭಂಡತನ ನಮಗೆ ಅಭ್ಯಾಸವಾಗಿ ಹೋಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಅದನ್ನು ಗಮನಿಸುವವರು ಯಾರು ಇಲ್ಲ ಅದಕ್ಕೆ ನಾವು ಸಮಾಜಸಿಕೊಡಬೇಕಾಗಿಲ್ಲ ಎಂದು
ಗೊತ್ತಾದಾಗ ನಮ್ಮ ವರ್ತನೆಯೇ ಬದಲಾಗುತ್ತದೆ. ಸ್ವಾರ್ಥ ಯೋಚನೆಗಳು, ಮೋಸದ ಕೆಲಸಗಳಿಗೆ ಎಂದಿಗೂ ಒಳ್ಳೆಯ ಪ್ರತಿಫಲ ಸಿಗಲು ಆ ಕ್ಷಣಕ್ಕೆ ನಾವು ಲಾಭ ಮಾಡಿಕೊಂಡು ಬೀಗಿರಬಹುದು. ಆದರೆ ಭಗವಂತನ ನಿಯಮ ದಲ್ಲಿ ಎಂದಿಗೂ ಹಾಲಿನದು ಹಾಲಿಗೆ ನೀರಿನದು ನೀರಿಗೆ. ಮೋಸ ಮಾಡಿ ಸಂಪಾದಿಸಿದ ಯಾವ ವಸ್ತುಗಳೂ ನಮ್ಮ ಕೈ ಸೇರುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಕೆಟ್ಟಕೆಲಸಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಬೆಲೆ ತೆರಲೇ ಬೇಕಾಗುತ್ತದೆ.
ಇದನ್ನೂ ಓದಿ: #RoopaGururaj