Saturday, 10th May 2025

Narendra Modi: 43 ವರ್ಷಗಳ ಬಳಿಕ ಕುವೈತ್​ಗೆ ಭಾರತದ ಪ್ರಧಾನಿ ಭೇಟಿ; ಭಾರತೀಯ ವಲಸಿಗರೊಂದಿಗೆ ಮೋದಿ ಸಂವಾದ

Narendra Modi

ಕುವೈತ್‌ ಸಿಟಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ಎರಡು ದಿನಗಳ ಭೇಟಿಗಾಗಿ ಕುವೈತ್‌ಗೆ (Kuwait) ಪ್ರಯಾಣಿಸಲಿದ್ದಾರೆ. ಇದು ನಾಲ್ಕು ದಶಕಗಳ ನಂತರ ಭಾರತೀಯ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿದೆ. ʼʼಮೋದಿ ಅವರು ಡಿಸೆಂಬರ್ 21 ಮತ್ತು 22ರಂದು ಕುವೈತ್‌ಗೆ ಭೇಟಿ ನೀಡಲಿದ್ದಾರೆ. 43 ವರ್ಷಗಳ ಹಿಂದೆ 1981ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕುವೈತ್‌ಗೆ ಭೇಟಿ ನೀಡಿದ್ದರುʼʼ ಎಂದು ಮೂಲಗಳು ತಿಳಿಸಿವೆ.

ಎರಡು ದಿನಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರು ಕುವೈತ್‌ನ ಉನ್ನತ ನಾಯಕರ ಜತೆ ಸಭೆ ನಡೆಸಲಿದ್ದಾರೆ. ಅಮೀರ್ ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಮೋದಿ ಕುವೈತ್‌ಗೆ ಭೇಟಿ ನೀಡುತ್ತಿದ್ದಾರೆ. ಅಮೀರ್ ಅವರನ್ನು ಭೇಟಿ ಮಾಡುವುದರ ಜತೆಗೆ ಅವರು ಕುವೈತ್ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಸಭೆಗಳು ವ್ಯಾಪಾರ, ಹೂಡಿಕೆ, ಇಂಧನ, ಸಂಸ್ಕೃತಿ ಮತ್ತು ಜನರಿಂದ ಜನರ ಸಂಪರ್ಕಗಳಂತಹ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಪರಿಶೀಲಿಸಲು ಅವಕಾಶ ನೀಡುತ್ತದೆ.

ಪ್ರಧಾನಿ ಮೋದಿಯವರ ವಿಮಾನವು ಕುವೈತ್‌ಗೆ ಬೆಳಗ್ಗೆ 9.15ಕ್ಕೆ ಟೇಕಾಫ್ ಆಗಿದೆ. ಪ್ರಧಾನಿ ಮೋದಿ 2 ಗಂಟೆ 20 ನಿಮಿಷಗಳ ನಂತರ ಅಂದರೆ ಬೆಳಗ್ಗೆ 11.35ಕ್ಕೆ ಕುವೈತ್ ತಲುಪಲಿದ್ದಾರೆ. ಸ್ಥಳೀಯ ಸಮಯದ ಪ್ರಕಾರ, ಪ್ರಧಾನಿ ಮೋದಿ ಮಧ್ಯಾಹ್ನ 2:50ಕ್ಕೆ ಸ್ಥಳೀಯ ಕಾರ್ಮಿಕ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ.

ಇದರ ನಂತರ, ಪ್ರಧಾನಿ ಮೋದಿ ಅವರು ಶೇಖ್ ಸಾದ್ ಅಲ್ ಅಬ್ದುಲ್ಲಾ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಹೋಗುತ್ತಾರೆ. ಅಲ್ಲಿ ಅವರು 4,000-5,000 ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಗಾಲ್ಫ್ ಕಪ್ ಫುಟ್ಬಾಲ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಭಾನುವಾರ ಪಿಎಂ ಮೋದಿ ಅವರು ‘ಹಲಾ ಮೋದಿ’ ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಕುವೈತ್ ಎಮಿರ್ ಮತ್ತು ಕ್ರೌನ್ ಪ್ರಿನ್ಸ್ ಅವರೊಂದಿಗೆ ಅಧಿಕೃತ ಸಭೆ ನಡೆಸಲಿದ್ದಾರೆ.

ಪ್ರಧಾನಿಯವರ ಪ್ರವಾಸಕ್ಕೆ ಒಂದು ದಿನ ಮುಂಚಿತವಾಗಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮೋದಿಯವರ ಕುವೈತ್ ಭೇಟಿಯು  ಭಾರತ-ಕುವೈತ್ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ತೆರೆಯುವ ನಿರೀಕ್ಷೆ ಇದೆ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಅರುಣ್ ಕುಮಾರ್ ಚಟರ್ಜಿ, ಇದು ಅಸ್ತಿತ್ವದಲ್ಲಿರುವ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಕ್ರೋಢೀಕರಿಸುವುದು ಮಾತ್ರವಲ್ಲದೆ ಭವಿಷ್ಯದ ಸಹಕಾರಕ್ಕಾಗಿ ಹೊಸ ಮಾರ್ಗಗಳನ್ನು ಅನಾವರಣಗೊಳಿಸುತ್ತದೆ. ನಮ್ಮ ಹಂಚಿಕೆಯ ಮೌಲ್ಯಗಳನ್ನು ಬಲಪಡಿಸುತ್ತದೆ ಮತ್ತು ಭವಿಷ್ಯಕ್ಕಾಗಿ ಹೆಚ್ಚು ಬಲವಾದ ಮತ್ತು ಕ್ರಿಯಾತ್ಮಕ ಪಾಲುದಾರಿಕೆಯನ್ನು ನಿರ್ಮಿಸುತ್ತದೆ ಎಂದು ಹೇಳಿದ್ದಾರೆ.

ಇಂಧನ, ಹೈಡ್ರೋಕಾರ್ಬನ್ ಮತ್ತು ವ್ಯಾಪಾರ ಸಂಬಂಧಗಳಿಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಕುವೈತ್‌ನ ಅಮೀರ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಸ್ಥಳೀಯ ಕರೆನ್ಸಿಯ ವ್ಯಾಪಾರದ ಬಗ್ಗೆಯೂ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Narendra Modi: ಜಾಗತಿಕ ಸಮಸ್ಯೆಗಳಿಗೆ ಯುದ್ಧ ಭೂಮಿಯಿಂದ ಪರಿಹಾರ ದೊರೆಯದು; ನರೇಂದ್ರ ಮೋದಿ