ಮಹಾ ಪ್ರಸ್ಥಾನ
ಲಕ್ಷ್ಮೀ ಹೆಬ್ಬಾಳಕರ್
ನನ್ನ ಜೀವಿತದ ಅವಧಿಯ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಅಧಾರದ ಮೇಲೆ ಇತರರ ಜತೆ ಹಂಚಿಕೊಳ್ಳುವುದನ್ನು ನೋಡಲು ನಾನು ಬಯಸಿದ್ದೆ. ಆದರೆ ಅಂಥ ಸಾಧ್ಯತೆ ನನಗೀಗ ಕಾಣುತ್ತಿಲ್ಲ”- ಸಮಾನತೆಗಾಗಿ ಜೀವನಪೂರ್ತಿ ಹೋರಾಟ ನಡೆಸಿದ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊನೆಯ ದಿನಗಳಲ್ಲಿ ಅತ್ಯಂತ ಬೇಸರದಿಂದ ನುಡಿದ ಮಾತುಗಳಿವು.
ಜೀವನ ಪೂರ್ತಿ ಯಾವುದಕ್ಕಾಗಿ ಹೋರಾಡಿದ್ದರೋ ಆ ಗುರಿ ತಲುಪಲು ಸಾಧ್ಯವಾಗದಿದ್ದಾಗ ಅತ್ಯಂತ ನೋವಿನ
ನುಡಿಗಳನ್ನಾಡುತ್ತ, ತಮ್ಮ ಮನದಾಳದ ದುಃಖವನ್ನು ಈ ರೀತಿಯಾಗಿ ತೋಡಿಕೊಂಡರು. ಯಾರ ಹಕ್ಕುಗಳನ್ನೂ,
ಅಽಕಾರವನ್ನೂ ಅವರು ಕಸಿದುಕೊಳ್ಳಲು ಬಯಸಿರಲಿಲ್ಲ. ಆದರೆ ಎಲ್ಲರನ್ನೂ ಸಮಾನವಾಗಿ ಕಾಣಬೇಕೆನ್ನುವುದಷ್ಟೆ
ಅವರ ಬಯಕೆಯಾಗಿತ್ತು. ಇದಕ್ಕಾಗಿ ಅವರು ಸಾಕಷ್ಟು ಹೋರಾಟ ಮಾಡಿದರು. ತಾವು ವಿಶ್ವಾಸವಿಟ್ಟ ಜನರೂ ಸ್ವಾರ್ಥಕ್ಕೆ ಬಲಿಯಾದಾಗ ಅವರ ದುಃಖ ಇಮ್ಮಡಿಯಾಯಿತು. ಸಂವಿಧಾನದ ಮೂಲಕವೂ ಸಮಾನತೆ
ಯನ್ನು ಸಾಧಿಸಲು ಅವರು ಪ್ರಯತ್ನಿಸಿದರು.
ಆದರೆ, ಜನರ ಮನಸ್ಥಿತಿಯಲ್ಲಿ ಅಂಥ ಬದಲಾವಣೆ ಕಾಣದಿದ್ದಾಗ ಒಂದು ರೀತಿಯಲ್ಲಿ ಅವರು ನಿರಾಶರಾಗಿದ್ದರು. “ಅಂಥ ಪ್ರಯತ್ನವನ್ನು ನಾನೇ ಮಾಡೋಣವೆಂದರೆ ನಾನು ಕೂಡ ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಶಕ್ತನಾಗಿದ್ದೇನೆ” ಎನ್ನುತ್ತ ತಮ್ಮ ದುಃಖವನ್ನು ಹೊರಹಾಕಿದ್ದರು. ಕೊನೆಗೆ, ಅದೇ ಸಮುದಾಯದ ಸ್ವಾರ್ಥಿಗಳ ಬಗೆಗೆ ಕೂಡ ಬಹಿರಂಗವಾಗಿಯೇ ಅಸಮಾಧಾನವನ್ನು ಹೊರಹಾಕಿದ್ದರು. “ನಾನು ಇದುವರೆಗೆ ಏನನ್ನು ಸಾಧಿಸಿ
ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತಿದ್ದಾರೆ” ಎಂದೂ ಆಕ್ರೋಶಗೊಂಡಿದ್ದರು.
“ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ, ಕಾಳಜಿ ತೋರುತ್ತಿಲ್ಲ. ತಮ್ಮ ಈ
ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲ್ಲಿ ಅವರು ಅಯೋಗ್ಯರಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಯ
ನ್ನಷ್ಟೆ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲ್ಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿ ಗೊಳಿಸಿದ್ದಾರೆ. ಅವರಲ್ಲಿ ಯಾರು ಕೂಡ ಸಮುದಾಯದ ಸೇವೆಯನ್ನು ಮಾಡಲು ಮುಂದೆ ಬರುತ್ತಿಲ್ಲ” ಎಂಬುದಾಗಿ ಅಂಬೇಡ್ಕರ್, ಮೀಸಲಾತಿಯ ಲಾಭ ಪಡೆದು ನೌಕರಿ ಗಿಟ್ಟಿಸಿದವರ ಬಗೆಗಿನ ತಮ್ಮ ಮನದಾಳದ ನೋವನ್ನು ಹೊರಹಾಕಿದ್ದರು. “ಈ ಚಳವಳಿಯನ್ನು ಮುನ್ನಡೆಸಬಲ್ಲವರೆಂದು ನನ್ನ ಸಹಪಾಠಿಗಳ ಪೈಕಿ ಯಾರಲ್ಲಿ ನಾನು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದಾನೊ ಅವರು ತಮ್ಮ ತಮ್ಮ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡು
ತ್ತಿದ್ದಾರೆ” ಎಂದು ನೊಂದಿದ್ದ ಅಂಬೇಡ್ಕರ್, ಈ ಎಲ್ಲವನ್ನೂ ನೋಡಿ ಸಹಿಸಲಾಗದೆ, ತಮ್ಮ ನಂಬಿಕೆಗೆ ಅಪಚಾರ ವಾದಾಗ ಅಂತಿಮವಾಗಿ ಬೌದ್ಧ ಧರ್ಮವನ್ನು ಸ್ವೀಕರಿಸುವ ನಿರ್ಧಾರಕ್ಕೆ ಬಂದರು. ಒಂದು ವರ್ಷದಷ್ಟು ಕಾಲ ಆ ಧರ್ಮವನ್ನು ಅಧ್ಯಯನ ಮಾಡಿದ ನಂತರ ಅಂತಿಮವಾಗಿ 1956 ರ ಅಕ್ಟೋಬರ್ 14ರಂದು 5a ಲಕ್ಷ ಬೆಂಬಲಿಗರೊಂದಿಗೆ ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಮತಾಂತರಗೊಂಡರು.
ಆ ಸಂದರ್ಭದಲ್ಲಿ ಅವರ ಅನುಯಾಯಿಗಳು ಇವರನ್ನು ‘ಬೌದ್ಧ ನಾಯಕ’ ಎಂದೇ ಪರಿಗಣಿಸಿದರು. “ನಾನು ಅಸ್ಪೃಶ್ಯತೆ ಆಚರಿಸುವುದಿಲ್ಲ ಮತ್ತು ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣುತ್ತೇನೆ. ಕೊಲ್ಲುವುದಿಲ್ಲ, ಕದಿಯುವು ದಿಲ್ಲ, ತಪ್ಪಾದ ಲೈಂಗಿಕ ವರ್ತನೆ ತೋರುವುದಿಲ್ಲ, ಮದ್ಯ ಸೇವಿಸುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ ಎಂಬ ಪಂಚಶೀಲ ತತ್ತ್ವಗಳನ್ನು ಅನುಸರಿಸುತ್ತೇನೆ.
ಜ್ಞಾನ, ಸಹಾನುಭೂತಿ ಮತ್ತು ಕರ್ತವ್ಯ ಎಂಬ 3 ಪ್ರಮುಖ ತತ್ತ್ವಗಳನ್ನು ಆಧರಿಸಿರುವ ಬೌದ್ಧ ಧರ್ಮ ಮಾತ್ರವೇ ನಿಜವಾದ ಧರ್ಮ ಎಂದು ನಾನು ನಂಬಿದ್ದೇನೆ. ಹಾಗಾಗಿಯೇ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಮೂಲಕ ಹೊಸಹುಟ್ಟು ಪಡೆದುಕೊಂಡಿದ್ದೇನೆ”- ಇದು ಅಂಬೇಡ್ಕರ್ ಮತ್ತು ಅವರ ಅನುಯಾಯಿ ಗಳು ಕೈಗೊಂಡ ಪ್ರಮಾಣ.
ಮಹಾಪರಿನಿರ್ವಾಣ ದಿನ: ಪರಿನಿರ್ವಾಣ ಎಂಬುದು ಬೌದ್ಧಧರ್ಮದ ಮುಖ್ಯ ತತ್ತ್ವ ಹಾಗೂ ಗುರಿಗಳಲ್ಲಿ ಒಂದಾ ಗಿದೆ. ಇದು ದೇಹವು ಸತ್ತ ನಂತರ ನಿರ್ವಾಣದ ಸಾಧನೆಯನ್ನು ಸೂಚಿಸುತ್ತದೆ. ಬೌದ್ಧಧರ್ಮದ ಪ್ರಕಾರ ಜೀವನದ ಕರ್ಮವನ್ನು ದೇಹದ ಮರಣದ ನಂತರ ಆತ್ಮದ ಮೂಲಕ ಮುಂದಿನ ಜನ್ಮಕ್ಕೆ ಸಾಗಿಸಲಾಗುತ್ತದೆ. ಒಮ್ಮೆ
ನಿರ್ವಾಣ ಸಾಧಿಸಿದರೆ ಪುನರ್ಜನ್ಮದ ಚಕ್ರವು ನಿಲ್ಲುತ್ತದೆ. ಏಕೆಂದರೆ ನಿರ್ವಾಣವಾದರೆ ಯಾವುದೇ ಕರ್ಮದ ಬಾಕಿ
ಉಳಿಯುವುದಿಲ್ಲ ಎನ್ನುವುದು ನಂಬಿಕೆ. ಅಂಬೇಡ್ಕರ್ ಅವರು ತಮ್ಮ ‘ಬುದ್ಧ ಮತ್ತು ಅವರ ಧಮ್ಮ’ ಗ್ರಂಥವನ್ನು ಪೂರ್ಣಗೊಳಿಸಿದ ಕೆಲವೇ ದಿನಗಳಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ 1956ರ ಡಿಸೆಂಬರ್ 6ರಂದು ಮರಣ ಹೊಂದಿದರು. ಅಂಬೇಡ್ಕರರ ಅನುಯಾಯಿಗಳು, ತಮ್ಮ ಗುರುಗಳು ಭಗವಾನ್ ಬುದ್ಧನಂತೆಯೇ ಪ್ರಭಾವಶಾಲಿ, ಶುದ್ಧ ಮನಸ್ಸಿನವರು ಹಾಗೂ ದೇವರಿಂದ ಆಶೀರ್ವಾದ ಪಡೆದವರು ಎಂದು ನಂಬುತ್ತಾರೆ.
ಸಮಾಜದಲ್ಲಿ ಅಂಬೇಡ್ಕರರು ಕೈಗೊಂಡ ಮಹಾನ್ ಕಾರ್ಯಗಳಿಂದಾಗಿ ಅವರಿಗೆ ಯಾವುದೇ ಕರ್ಮದ ಋಣ ಉಳಿದಿಲ್ಲ ಎಂದು ಭಾವಿಸಿ, ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ‘ಮಹಾಪರಿನಿರ್ವಾಣ ದಿನ’ ಎಂದು ಅನುಯಾಯಿಗಳು ಕರೆದರು.
ಸಂವಿಧಾನ ಶಿಲ್ಪಿ: ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಕಾನೂನು ತಜ್ಞ, ಸಮಾಜ ಸುಧಾರಕ, ಅರ್ಥ ಶಾಸಜ್ಞ, ಪತ್ರಕರ್ತ, ತತ್ತ್ವ ಜ್ಞಾನಿ, ಸಾಹಿತಿ ಇನ್ನೂ ಏನೇನೋ ಆಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರರು,
ಒಬ್ಬ ವ್ಯಕ್ತಿ ಏನೆಲ್ಲ ಸಾಧನೆ ಮಾಡಬಹುದು ಎನ್ನುವುದಕ್ಕೆ ಉದಾಹರಣೆಯಾಗಿದ್ದರು. ಸಂವಿಧಾನದ ಕರಡನ್ನು ಸಿದ್ಧ ಮಾಡಲು, ಬಹುತೇಕ ಒಬ್ಬಂಟಿಯಾಗಿ ಎರಡು ವರ್ಷ ದುಡಿದ ಅಂಬೇಡ್ಕರ್, ಅನಾರೋಗ್ಯವಿದ್ದಾಗ್ಯೂ 1948ರ ಮೊದಲಿನಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಅದೇ ವರ್ಷದ ಕೊನೆಯಲ್ಲಿ ಸಂಸತ್ತಿನಲ್ಲಿ ಮಂಡಿಸಿ, ಸಂವಿಧಾನದ ಹಸ್ತಪ್ರತಿಯನ್ನು ಬೆಳ್ಳಿತಟ್ಟೆಯಲ್ಲಿಟ್ಟು, ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ಸಮ್ಮುಖ ದಲ್ಲಿ ಇಡೀ ರಾಷ್ಟ್ರಕ್ಕೆ ಅದನ್ನು ಸಮರ್ಪಣೆ ಮಾಡಿದರು. ಅಂದಿನಿಂದ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಯೆಂದೇ ಹೆಸರಾದರು.
ಆರು ದಶಕದ ಹಿಂದೆ ಈ ನೆಲದಲ್ಲಿ ಬದುಕಿದ್ದು, ನಮ್ಮೆಲ್ಲರ ಪ್ರೇರಕರು ಮತ್ತು ಮಾರ್ಗದರ್ಶಕರಾಗಿ ಬದುಕಿಗೊಂದು ದಾರಿ ತೋರಿಸಿಕೊಟ್ಟ ಶಕ್ತಿ ಡಾ.ಅಂಬೇಡ್ಕರ್. ಅವರ ಹೆಸರು ಹೇಳಿದರೆ ನಮಗೆಲ್ಲ ಏನೋ ಸ್ಪೂರ್ತಿ ಉಕ್ಕಿ ಹರಿಯು ತ್ತದೆ, ಹೊಸ ಪ್ರೇರಣೆ ಉಂಟಾಗುತ್ತದೆ, ಒಂದು ಆದರ್ಶ ನಮ್ಮ ಕಣ್ಣೆದುರು ನಿಲ್ಲುತ್ತದೆ. ಅಂಬೇಡ್ಕರ್ ಅವರ ಬದುಕು, ತತ್ತ್ವ ಆದರ್ಶಗಳು ನಮ್ಮೆಲ್ಲರ ಪಾಲಿಗೆ ಸಾರ್ವಕಾಲಿಕ ಮಾರ್ಗದರ್ಶಕ. ಸಮಾನತೆ ಮತ್ತು ಪ್ರಗತಿಯ ಕನಸು ಕಂಡ ಮೇರುನಾಯಕ ಅವರು.
ಅಂಬೇಡ್ಕರರ ಆದರ್ಶ ಎಲ್ಲರ ಜೀವನಕ್ಕೆ ದಾರಿದೀಪ, ಅವರ ಚಿಂತನೆಗಳು ಇಂದಿಗೂ, ಎಂದಿಗೂ ಯುವಜನತೆಗೆ
ಸ್ಪೂರ್ತಿ. ೧೯೨೦ರ ದಶಕದ ಎರಡೆರಡು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಮಹಾನ್ ಚೇತನ ಅವರು.
ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಅಂದಿನ ದಿನಗಳಲ್ಲಿ ಅಮೆರಿಕದ ಕೊಲಂಬಿಯಾ
ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ನಿಂದ ಡಾಕ್ಟರೇಟ್ ಪದವಿ ಪಡೆದರು ಎಂದರೆ
ಅಂಬೇಡ್ಕರರ ಜೀವನೋತ್ಸಾಹ ಹೇಗಿತ್ತು ಎನ್ನುವುದನ್ನು ನಾವು ಊಹಿಸಲೂ ಸಾಧ್ಯವಾಗುವುದಿಲ್ಲ.
ಡಾಕ್ಟರೇಟ್ ಪದವಿ ಪಡೆದು ಹಿಂದಿರುಗಿದಾಗ ಮೊದಲಿನ ಷರತ್ತಿನಂತೆ ಬರೋಡಾದ ಮಹಾರಾಜರ ಆಸ್ಥಾನದಲ್ಲಿ ಸೈನ್ಯದ ಕಾರ್ಯದರ್ಶಿಗಳಾಗಿ ಕೆಲಸಕ್ಕೆ ಸೇರಿದರು ಅಂಬೇಡ್ಕರ್. ಆದರೆ, ಆಸ್ಥಾನಿಕ ಹಿರಿಯ ಮಂತ್ರಿಗಳು ಮಹಾ ರಾಜರಿಗೆ ತಿಳಿಯದಂತೆ ಅಸ್ಪೃಶ್ಯತೆಯ ಆಚರಣೆ ಮೂಲಕ ಇವರಿಗೆ ಕಿರುಕುಳ ನೀಡುತ್ತಿದ್ದರು. ಸಾಮಾನ್ಯ ಸಿಪಾಯಿ ಕೂಡ ಇವರ ಫೈಲ್ಗಳನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ, ಉಳಿಯಲು ಆಸ್ಥಾನದಲ್ಲಿ ನೆಲೆ ನೀಡಲಿಲ್ಲ ಮತ್ತು ಉಳಿದಿದ್ದ ಪಾರ್ಸಿ ಹೋಟೆಲ್ನಿಂದ ಇವರನ್ನು ಹೊರಹಾಕಿದರು. ಅಲ್ಲಿ ಕೆಲಸ ಮಾಡಲಾಗದೆ ಅನಿವಾರ್ಯವಾಗಿ ಮುಂಬೈಗೆ ಬಂದ ಅಂಬೇಡ್ಕರರು, ಸಾಮಾಜಿಕ ಸಮಾನತೆಗಾಗಿ ಹೋರಾಟ ನಡೆಸಿದರು.
ಅಸ್ಪೃಶ್ಯತೆ ವಿರುದ್ಧ ಸಮರ ಸಾರಿದರು. ಒಬ್ಬ ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಕಾನೂನು ತಜ್ಞರಾಗಿ, ನ್ಯಾಯ ಶಾಸ್ತ್ರಜ್ಞರಾಗಿ, ಪತ್ರಕರ್ತರಾಗಿ, ಸಾಹಿತಿಗಳಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಸಂವಿಧಾನ ಶಿಲ್ಪಿಗಳಾಗಿ ಅಂಬೇಡ್ಕರ್ ಅವರು ಈ ರಾಷ್ಟ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ, ಅಮೋಘ.
ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನಮ್ಮೆಲ್ಲರಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು ಅಂಬೇಡ್ಕರ್
ಅವರು. ಇಡೀ ವಿಶ್ವದ ಶ್ರೇಷ್ಠ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು ಅಂಬೇಡ್ಕರ್ ಅವರು ರೂಪಿಸಿಕೊಟ್ಟ
ಭಾರತದ ಸಂವಿಧಾನ. ಇಂಥ ನಾಡಿನಲ್ಲಿ ಜೀವಿಸುತ್ತಿರುವುದೇ ನಮಗೆಲ್ಲ ದೊಡ್ಡ ಹೆಮ್ಮೆ. ಅವರ ಜೀವನ
ಸಾಧನೆಯು ಸೂರ್ಯ-ಚಂದ್ರರಿರುವವರೆಗೂ ಈ ಭೂಮಿಯ ಮೇಲಿರುವವರಿಗೆ ಪ್ರೇರಣೆಯಾಗಬೇಕು,
ದಾರಿದೀಪವಾಗಬೇಕು.
(ಲೇಖಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು)
ಇದನ್ನೂ ಓದಿ: lakshmihebbalkar