Sunday, 18th May 2025

B S Shivanna Column: ನೆನಪಿರಲಿ…ಒಳಸಂಚಿಗೆ ಸಿದ್ದರಾಮಯ್ಯ ಸೋಲುವುದಿಲ್ಲ

ಅಭಿಮತ

ಬಿ.ಎಸ್.ಶಿವಣ್ಣ

ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸೋಲಿನ ಹತಾಶೆಗೆ ಒಳಗಾಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಸರಕಾರವನ್ನು ಬೀಳಿಸುವ ಮಾತನಾಡಿದ್ದಾರೆ. ‘ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತೆ, ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಅಸ್ತಿತ್ವದ ಅಡಿಗಲ್ಲನ್ನೇ ಕಳಚಿಕೊಳ್ಳುತ್ತಿರುವ ಜೆಡಿಎಸ್ ನಾಯಕರಿಗೆ ಇನ್ನೂ ವಾಸ್ತವದ ಅರಿವು ಮೂಡದೇ,
ವಾಮಮಾರ್ಗದಲ್ಲಿ ಅಽಕಾರ ಕಬಳಿಸುವ ಮಂಕು ಕವಿದಿರುವುದು ಚೋದ್ಯವೇ ಸರಿ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಅತ್ಯಂತ ಅಗತ್ಯವಾಗಿತ್ತು. ಜತೆಗೆ ರಾಷ್ಟ್ರದ ಜನತೆಗೆ ಒಂದು ಸ್ಪಷ್ಟ ಸಂದೇಶ
ರವಾನಿಸಲು ಅಪೇಕ್ಷಿತವೂ ಆಗಿತ್ತು. ಅದಕ್ಕೆ ಕ್ಷೇತ್ರದ ಪ್ರಜ್ಞಾವಂತ ಮತದಾರರು ಸ್ಪಂದಿಸುವ ಮೂಲಕ, ‘ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಯಲ್ಲಿ
ನಾವು ಅನಭಿಷಿಕ್ತ ದೊರೆಗಳು’ ಎಂಬ ದೇವೇಗೌಡರ ಕುಟುಂಬದ ಭ್ರಮೆಯನ್ನು ನುಚ್ಚುನೂರು ಮಾಡಿದ್ದಾರೆ. ಚನ್ನಪಟ್ಟಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೇಶ್ವರರ ಆಯ್ಕೆಯಾಗಿದ್ದೇ ಒಂದು ವಿಶೇಷ ಸಂದರ್ಭದಲ್ಲಿ.

ಕುಮಾರಸ್ವಾಮಿಯವರ ಸ್ವಾರ್ಥ ರಾಜಕಾರಣದ ದೆಸೆಯಿಂದಾಗಿ ಇದೇ ಕ್ಷೇತ್ರದಲ್ಲಿ ೨ ಬಾರಿ ಸೋತಿದ್ದ ಅವರಿಗೆ ಗೆಲುವು ತೀರಾ ಅಗತ್ಯ ವಾಗಿತ್ತು. ಮೂಲತಃ ಕಾಂಗ್ರೆಸ್ಸಿಗರೇ ಆದ ಅವರಿಗೆ ಸಿದ್ದರಾಮಯ್ಯನವರ ನಾಯಕತ್ವ ಆಪ್ಯಾಯಮಾನವಾಗಿ ಕಂಡಿದ್ದರಲ್ಲಿ ವಿಶೇಷವೇನಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಸುವುದಕ್ಕೆ ೨ ದಿನ ಬಾಕಿಯಿರುವಾಗ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಆ ಬಳಿಕ ನಡೆದ ರಾಜಕೀಯ ಕದನ ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಹಂತದಲ್ಲಿ ೬ ದಿನಗಳ ಕಾಲ ಚನ್ನಪಟ್ಟಣದಲ್ಲಿ ಠಿಕಾಣಿ ಹೂಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಘನತೆಗೆ ಹಾಗೂ ರಾಜಕಾರಣದ ಅಪಾರ ಅನುಭವಕ್ಕೆ ಹೊಂದದ ಮಾತನಾಡಿ ಇಡೀ ರಾಜ್ಯದ ಮುಂದೆ ಸಣ್ಣವರಾಗಿಬಿಟ್ಟರು!

ಚನ್ನಪಟ್ಟಣದಲ್ಲಿ ನಡೆದ ಸಮಾವೇಶವೊಂದರಲ್ಲಿ, ಸಿದ್ದರಾಮಯ್ಯರ ವಿರುದ್ಧ ತಮ್ಮ ಉದರದಲ್ಲಿ ಸಂಗ್ರಹವಾಗಿದ್ದ ಎಲ್ಲ ದ್ವೇಷಗಳನ್ನೂ ವಿಷದಂತೆ ಕಕ್ಕಿಬಿಟ್ಟರು. “ಈ ಸರಕಾರವನ್ನು ಕಿತ್ತುಹಾಕದೇ ನಾನು ವಿರಮಿಸುವುದಿಲ್ಲ. ನಾನು ಸಿದ್ದರಾಮಯ್ಯ ಅವರ ಗರ್ವಭಂಗ ಮಾಡುತ್ತೇನೆ” ಎಂದು ಚೀರಿದರು. ಆದರೆ ಪರಿಣಾಮವೇನಾಯ್ತು? ಅವರ ಪುತ್ರ ಕುಮಾರಸ್ವಾಮಿಯವರನ್ನು ೨ ಬಾರಿ ಕೈಹಿಡಿದಿದ್ದ ಅದೇ ಮತದಾರರೇ ಮೊಮ್ಮಗ ನಿಖಿಲ್‌ರನ್ನು ಹೀನಾಯವಾಗಿ ಸೋಲಿಸಿಬಿಟ್ಟರು. ಇದಕ್ಕೆ ಪ್ರಮುಖ ಕಾರಣ ದೇವೇಗೌಡರು ಬಿತ್ತಿದ ದ್ವೇಷವಲ್ಲದೆ ಮತ್ತೇನೂ ಅಲ್ಲ. ಅಹಿಂದ ವರ್ಗದ ಜತೆಗೆ ಒಕ್ಕಲಿಗರೂ ದೇವೇಗೌಡರ ಸ್ವಾರ್ಥದ ರಾಜಕಾರಣದಿಂದ ಬೇಸತ್ತು ಕಾಂಗ್ರೆಸ್ ಕಡೆಗೆ ವಾಲಿದ್ದು ಮಾತ್ರ ವಾಸ್ತವ. ಈ ಚುನಾವಣೆಯ ಪ್ರಚಾರದುದ್ದಕ್ಕೂ ಕಣ್ಣೀರ ಕೋಡಿಯನ್ನೇ ಹರಿಸಿದ ದೇವೇಗೌಡರು, “ನನ್ನ ಹೃದಯ ಛಿದ್ರವಾಗಿದೆ” ಎಂದರು.

ಆದರೆ ಅವರದ್ದೇ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಅಸಂಖ್ಯಾತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದಾಗ ಈ ಕಣ್ಣೀರು ಎಲ್ಲಿ ಹೋಗಿತ್ತು? ಆಗ ದೇವೇಗೌಡರ ಉದಾರ ಹೃದಯ ಬತ್ತಿಹೋಗಿತ್ತೇ? ಶೋಷಣೆಗೆ ಒಳಗಾದ ಒಂದೇ ಒಂದು ಹೆಣ್ಣು
ಜೀವದ ಪರ ಇವರ ಅಂತಃಕರಣ ಏಕೆ ತುಡಿಯಲಿಲ್ಲ? ಎಂಬುದಕ್ಕೂ ಇವರು ಉತ್ತರಿಸಬೇಕಲ್ಲವೇ? ವಾಸ್ತವದ ಬದಲು ಇತಿಹಾಸಕ್ಕೆ
ಜೋತುಬಿದ್ದು ಅರ್ಧಸತ್ಯವನ್ನೇ ಸತ್ಯ ಎಂದು ಬಿಂಬಿಸುವುದು ರಾಜಕಾರಣದ ಬಹುರೂಪಿಯಾಗಿರುವ ದೇವೇಗೌಡರ ಹಳೆಯ ಖಯಾಲಿ. ಈ ಹಿಂದೆ ಅವರು ಕಡೂರಿನ ಕೆ.ಎಂ.ಕೃಷ್ಣಮೂರ್ತಿ ಅವರ ಸಹೋದರನ ಪುತ್ರನ ಮನೆಗೆ ಭೇಟಿನೀಡಿದ ಸಂದರ್ಭದಲ್ಲೂ, ಚನ್ನಪಟ್ಟಣ ಚುನಾವಣೆಯ ಪ್ರಚಾರಸಭೆಯ ರೀತಿ ಸುಳ್ಳಿನ ಸರಮಾಲೆಯನ್ನೇ ಕಟ್ಟಿದ್ದರು.

“ಸಿದ್ದರಾಮಯ್ಯನವರನ್ನು ನಂಬಿ ನಾನು ಮೋಸಹೋದೆ” ಎಂದು ಅನುಕಂಪ ಗಿಟ್ಟಿಸುವ ಮಾತನಾಡಿದ್ದರು. ಆದರೆ ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಹಾಗೂ ಜೆ.ಎಚ್.ಪಟೇಲರಿಗೆ ದ್ರೋಹ ಬಗೆದಿದ್ದು ಯಾರು? ಎಂಬ ಪ್ರಶ್ನೆಗೆ ಮಾತ್ರ ಅವರು ಯಾವ ಕಾಲಕ್ಕೂ ಉತ್ತರ
ನೀಡುವುದಿಲ್ಲ. ಏಕೆಂದರೆ ಜನತಾ ಪರಿವಾರ ಕುಸಿದು ಸಮಾಧಿಯಾಗಿದ್ದೇ ದೇವೇಗೌಡರ ಕುಟುಂಬಪ್ರೇಮದಿಂದ. ಜನತಾದಳವನ್ನು ಬಿಟ್ಟು ಸಮಾಜವಾದಿ ಜನತಾಪಕ್ಷವನ್ನು (ಎಸ್‌ಜೆಪಿ) ಕಟ್ಟಿದ ದೇವೇಗೌಡರು ಸೋತು ಧರಾಶಾಯಿಯಾಗಿ, ರಾಮಕೃಷ್ಣ ಹೆಗಡೆ ಹಾಗೂ ಪಟೇಲರ ಕೈಕಾಲು ಕಟ್ಟಿ ಮರಳಿ ಪಕ್ಷಕ್ಕೆ ಸೇರ್ಪಡೆಯಾದರು.

ಆದರೆ ಉಂಡಮನೆಯಗಳ ಎಣಿಸುವುದು ಜನ್ಮಜಾತ ಗುಣವಾಗಿದ್ದ ಅವರು, ಮುಖ್ಯಮಂತ್ರಿ ಸ್ಥಾನ ಪಡೆಯುವುದಕ್ಕಾಗಿ ಹೆಗಡೆ ಮತ್ತು ಪಟೇಲರ ಮೇಲೆ ಬಾಡಿಗೆ ಗೂಂಡಾಗಳಿಂದ ಹಲ್ಲೆ ಮಾಡಿಸಿದರು. ಅಂದು ದೇವೇಗೌಡರ ಜತೆಗೆ ಸಿದ್ದರಾಮಯ್ಯ ಹಾಗೂ ಜಾಲಪ್ಪ ಅವರುಗಳು ಗಟ್ಟಿಯಾಗಿ ನಿಲ್ಲದಿದ್ದಿದ್ದರೆ, ಅವರು ಮುಖ್ಯಮಂತ್ರಿಯಾಗುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ದೇವೇಗೌಡರು ಎಂದೂ
ಸಿದ್ಧರಿಲ್ಲ. ಈ ವಿಚಾರದಲ್ಲಿ ಅವರಿಗೆ ಶಾಶ್ವತ ಮರೆವು ಎನ್ನದೇ ವಿಧಿಯಿಲ್ಲ. ಮುಂದೆ ಜೆಡಿಎಸ್ ಪಕ್ಷವನ್ನು ಕಟ್ಟಿದಾಗ ಅದು ಅತಿಹೆಚ್ಚು ಸಾಧನೆ ಮಾಡಿದ್ದು ಸಿದ್ದರಾಮಯ್ಯರು ರಾಜ್ಯಾಧ್ಯಕ್ಷರಾಗಿದ್ದಾಗ. ಆ ಬಳಿಕ ಈಗ 18ಕ್ಕೆ ಕುಸಿದು ಅಳಿವಿನಂಚಿನಲ್ಲಿದೆ.

ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಒಮ್ಮೆಯೂ ಸತ್ಯ ಹೇಳಿದವರೂ ಅಲ್ಲ, ಸತ್ಯ ಪಾಲಿಸಿದವರೂ ಅಲ್ಲ. ಈ ಹಿಂದೆ, “ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ” ಎಂದವರು ಈಗ ಮೋದಿಯನ್ನು “ವಿಶ್ವಗುರು, ಅವತಾರಪುರುಷ” ಎಂದು ಕೊಂಡಾಡುತ್ತಿದ್ದಾರೆ. ಮಕ್ಕಳ
ಕಲ್ಯಾಣಕ್ಕಾಗಿ ಎಂಥ ವೇಷವನ್ನಾದರೂ ಹಾಕುವ ಬಹುರೂಪಿ ಕಲಾವಿದರು ಯಾರಾದರೂ ಇದ್ದರೆ ಅದು ದೇವೇಗೌಡರು ಮಾತ್ರ!

ಅಂದ ಹಾಗೆ, ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರಕಾರ ಪತನವಾಗುತ್ತದೆ ಎಂದು ದೇವೇಗೌಡರು ಪದೇ ಪದೆ ಪ್ರಸ್ತಾಪಿಸುತ್ತಿದ್ದರು. ಇದು ಧೃತರಾಷ್ಟ್ರನ ಅಂಧಪ್ರೇಮದ ಹತಾಶ ಸ್ಥಿತಿ ಎಂದು ಸುಮ್ಮನಾಗಬಹುದಿತ್ತು. ಬಿಜೆಪಿ ಜತೆಗಿನ ಮೈತ್ರಿಯಿಂದ ತಮಗೆ ಆನೆಬಲ ಬಂದಿದೆ ಎಂಬ ಭ್ರಮೆಯಿಂದ ಅವರು ಹೀಗೆ ವರ್ತಿಸುತ್ತಿದ್ದಾರೆ ಎಂದು ಸುಮ್ಮನಾಗಬಹುದಿತ್ತು. ಸಿದ್ದರಾಮಯ್ಯನವರ ಗರ್ವಭಂಗ ಮಾಡುತ್ತೇನೆ ಎಂದು ಹೇಳಿದ್ದನ್ನೂ ಕ್ಷಮಿಸಬಹುದಿತ್ತು. ಆದರೆ, ಆ ಬಳಿಕ ಕುಮಾರಸ್ವಾಮಿಯವರು ಮತ್ತೆ ಸರಕಾರ ಬೀಳಿಸುವ ಮಾತನಾಡಿದ್ದನ್ನು ಖಂಡಿತ ನಿರ್ಲಕ್ಷಿಸುವು ದಕ್ಕೆ ಸಾಧ್ಯವಿಲ್ಲ. ಏಕೆಂದರೆ ಚುನಾಯಿತ ಸರಕಾರವನ್ನು ಬೀಳಿಸುವ ಕೆಟ್ಟಚಟ ದೇವೇಗೌಡರಿಗೆ ಮೊದಲಿನಿಂದಲೂ ಇದೆ. ಈ ಹಿಂದೆ ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ಜೆ.ಎಚ್.ಪಟೇಲ್, ಧರ್ಮಸಿಂಗ್ ಸರಕಾರಕ್ಕೆ ಇವರು ಯಾವ ರೀತಿ ಕಾಟ ಕೊಟ್ಟಿದ್ದಾರೆಂಬುದು ನಾಡಿಗೇ ಗೊತ್ತು. ಅದೇ ಗುಣ ಈಗ ಅವರ ಮಗನ ಮಾತಿನಲ್ಲಿ ವ್ಯಕ್ತವಾಗಿದೆ.

ಇದಕ್ಕೆ ಸೆಡ್ಡು ಹೊಡೆಯುವುದೇ ಈ ಸಮಾವೇಶದ ಉದ್ದೇಶ. ದೇವೇಗೌಡರ ತವರುಜಿಲ್ಲೆಯಲ್ಲಿ ನಡೆಯುತ್ತಿರುವ ಈ ಶಕ್ತಿ ಪ್ರದರ್ಶನವು ಕಾಂಗ್ರೆಸ್‌ನ ಒಗ್ಗಟ್ಟನ್ನು ತೋರಿಸುವ ವೇದಿಕೆಯಾಗಿದೆ. ಇದು ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಇಡೀ ರಾಜ್ಯದ ಎಲ್ಲಾ ವರ್ಗದ ಬಡಜನರ ಬದುಕನ್ನು ಸಂತೃಪ್ತಗೊಳಿಸಿರುವ ಸರ್ವಜನಾಂಗದ ಹೆಮ್ಮೆಯ ನಾಯಕ ಸಿದ್ದರಾಮಯ್ಯನವರ ಕೈಬಲಪಡಿಸುವ ಕ್ಷಣವೂ ಆಗಿದೆ. ಈ ವೇದಿಕೆಯ ಮೂಲಕ ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಜೆಡಿಎಸ್‌ನ ಷಡ್ಯಂತ್ರಕ್ಕೆ ನೀಡುವ ಸ್ಪಷ್ಟ ಸಂದೇಶ ಏನು ಗೊತ್ತೇ? ಸಿದ್ದರಾಮಯ್ಯರು ನಿಮ್ಮ ಸಂಚಿಗೆ ಸೋಲುವಷ್ಟು ದುರ್ಬಲರಲ್ಲ. ಸಿದ್ದರಾಮಯ್ಯರ ಬೆಂಬಲಕ್ಕೆ ಕಾಂಗ್ರೆಸ್‌ನ ೧೩೮ ಶಾಸಕರು ಹಾಗೂ ಸಮಸ್ತ ಅಹಿಂದ ವರ್ಗ ಇವೆ ಎಂಬುದು ಶಾಶ್ವತ ಸತ್ಯ. ಇದನ್ನು ಮರೆಯದಿರಿ.

(ಲೇಖಕರು ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷರು)

ಇದನ್ನೂ ಓದಿ: #siddaramaiah