ನವದೆಹಲಿ: ದೇಶದಲ್ಲಿ ‘ಪಿಎಂ ಸೂರ್ಯ ಘರ್ʼ ಫಲಾನುಭವಿಗಳಿಗೆ ಸಹಾಯಧನ ನೀಡಲು ಕೇಂದ್ರ ಸರ್ಕಾರ ಬಜೆಟ್ ಅಲ್ಲಿ ಬರೋಬ್ಬರಿ 75,000 ಕೋಟಿ ಅನುದಾನ ಮೀಸಲಿಟ್ಟಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದರು. ಕೇಂದ್ರ ಸಂಸತ್ ಅಧಿವೇಶನದಲ್ಲಿ ವಿಪಕ್ಷ ಸದಸ್ಯರ ಪ್ರಶ್ನೆಗೆ ಉತ್ತರಿಸುವ ವೇಳೆ ಸಚಿವ ಜೋಶಿ, ʼಪ್ರಧಾನ ಮಂತ್ರಿ ಸೂರ್ಯ ಘರ್ʼ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಸದನದ ಗಮನ ಸೆಳೆದರು.
21 ದಿನದೊಳಗೆ ಸಹಾಯಧನ: ಸೂರ್ಯ ಘರ್ ಫಲಾನುಭವಿಗಳಿಗೆ ಯೋಜನೆ ಅಳವಡಿಸಿದ 15ರಿಂದ 21 ದಿನದೊಳಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನ ವರ್ಗಾವಣೆ ಆಗಲಿದೆ. ಇದರಲ್ಲಿ ಯಾರದ್ದೂ ಮಧ್ಯಸ್ಥಿಕೆ ಅವಶ್ಯಕತೆಯೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ಸುದ್ದಿಯನ್ನೂ ಓದಿ | Nirmala Sitharaman: 1 ಬ್ಯಾಂಕ್ ಖಾತೆಗೆ 4 ನಾಮಿನಿ ಹೆಸರಿಸಲು ಅವಕಾಶ; ಬ್ಯಾಂಕಿಂಗ್ ಕಾಯ್ದೆ ತಿದ್ದುಪಡಿ ಮಸೂದೆಯಲ್ಲಿ ಏನೇನಿದೆ?
ಯೋಜನೆ ಗುರಿ ಮೀರಿದೆ: ದೇಶಾದ್ಯಂತ 1 ಕೋಟಿ ಕುಟುಂಬಗಳನ್ನು ಸೂರ್ಯ ಘರ್ ಯೋಜನೆಯಡಿ ತರಲು ಗುರಿ ಹೊಂದಲಾಗಿತ್ತು. ಆದರೆ, ಈಗಾಗಲೇ 1.5 ಕೋಟಿ ನೋಂದಣಿ ಆಗಿದೆ. ಜನರಿಂದ ಅತ್ಯುತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಹೇಳಿದರು.
ಈಗಾಗಲೇ 6.28 ಲಕ್ಷ ಸಂಪರ್ಕ
ದೇಶದಲ್ಲಿ ಈಗಾಗಲೇ 6.28 ಲಕ್ಷ ಮನೆಗಳಿಗೆ ಸೂರ್ಯ ಘರ್ ಸಂಪರ್ಕ ನೀಡಲಾಗಿದೆ. ಜನರ ಅನುಕೂಲಕ್ಕಾಗಿ ಬಳಕೆದಾರ ಸ್ನೇಹಿ ಪೋರ್ಟಲ್ ಸಹ ಲಭ್ಯವಿದೆ. ಪ್ರತಿಯೊಂದು ರಾಜ್ಯ ಸರ್ಕಾರಗಳೂ ಈ ಯೋಜನೆಗೆ ಬೆಂಬಲ ನೀಡಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ಸದನದಲ್ಲಿ ಮನವಿ ಮಾಡಿದರು.
ಎಲ್ಲಾ ರಾಜ್ಯಗಳಿಗೂ ಇದೆ: ಸೂರ್ಯ ಘರ್ ಬಿಜ್ಲಿ ಯೋಜನೆ ಕೇವಲ ಗುಜರಾತ್, ತೆಲಂಗಾಣ ಅಂತಿಲ್ಲ. ದೇಶದ ಪ್ರತಿ ರಾಜ್ಯಕ್ಕೂ, ಪ್ರತಿ ಮನೆ ಮನೆಗೂ ಅನ್ವಯಿಸುತ್ತದೆ. ಆಯಾ ರಾಜ್ಯ ಸರ್ಕಾರಗಳು ಹೆಚ್ಚು ಹೆಚ್ಚು ಉತ್ಸಾಹ ತೋರಬೇಕಷ್ಟೇ ಎಂದು ಉತ್ತರ ಪ್ರದೇಶ ಸಂಸದರ ಪ್ರಶ್ನೆಗೆ ಜೋಶಿ ನಗುತ್ತಲೇ ಚಾಟಿ ಬೀಸಿದರು.
ಜಮ್ಮು ಕಾಶ್ಮೀರದಲ್ಲಿ 2.88 ಲಕ್ಷ ನೋಂದಣಿ
ಜಮ್ಮು ಮತ್ತು ಕಾಶ್ಮೀರ ಪ್ರದೇಶದಿಂದ ಈವರೆಗೆ 8,500 ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಇಲ್ಲಿ 2.88 ಲಕ್ಷ ನೋಂದಣಿಗಳು ನಡೆದಿವೆ ಎಂದು ತಿಳಿಸಿದರು.
ಒಡಿಶಾದಿಂದ ಬಹು ಬೇಡಿಕೆ: ಒಡಿಶಾದಲ್ಲಿ ರಾಜ್ಯ ಸರ್ಕಾರ ಟಾಟಾ ಪವರ್ ಕಂಪನಿ ಬೆಂಬಲದೊಂದಿಗೆ ಮನೆಗಳ ಮೇಲ್ಛಾವಣಿ ಮೇಲೆ ಸೂರ್ಯ ಘರ್ ಅಳವಡಿಕೆ ಆರಂಭಿಸಿದೆ ಎಂದರು.
ಪಿಎಂ ಜನ್ ಮನ್, ಜನ್ ಜಾತಿಯ ಗ್ರಾಮ ಉತ್ಕರ್ಷ ಅಭಿಯಾನದ ಮೂಲಕ ಅತ್ಯಂತ ಹಿಂದುಳಿದ ಪ್ರದೇಶಗಳ 1 ಲಕ್ಷ ಮನೆಗಳ ಪೈಕಿ 50 ಸಾವಿರ ಮನೆಗಳಿಗೆ ಸಂಪೂರ್ಣ ಹಣಕಾಸು ನೆರವಿನಲ್ಲಿ ಸೂರ್ಯ ಘರ್ ಅಳವಡಿಸಲು ಯೋಜಿಸಲಾಗಿದೆ ಎಂದು ಸಚಿವರು ವಿವರಿಸಿದರು.
ವಿಶ್ವದಲ್ಲೇ ಅದ್ಭುತ ಯೋಜನೆ ಇದು: ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೊಳಿಸಿದ ಪಿಎಂ ಸೂರ್ಯ ಘರ್ ಬಿಜ್ಲಿ ಯೋಜನೆ ವಿಶ್ವದಲ್ಲೇ ಮಾದರಿಯಾದಂತಹ ಒಂದು ಅದ್ಭುತ ಯೋಜನೆಯಾಗಿದೆ ಎಂದು ತಿಳಿಸಿದರು.
ಪಿಎಂ ಸೂರ್ಯ ಘರ್ ಯೋಜನೆಯಡಿ ಶೂನ್ಯ ಬಂಡವಾಳದಲ್ಲಿ ಜನರೇ ವಿದ್ಯುತ್ ಉತ್ಪಾದಕರೂ ಆಗಬಹುದು. ಕನಿಷ್ಠ 110 ಯುನಿಟ್ ವಿದ್ಯುತ್ ಉತ್ಪಾದಿಸಬಹುದು. 50-60 ಯುನಿಟ್ ವಿದ್ಯುತ್ ಅನ್ನು ಫಲಾನುಭವಿ ಬಳಸಿಯೂ ಉಳಿದ ಶೇ.50 ರಷ್ಟು ವಿದ್ಯುತ್ ಅನ್ನು ಆಯಾ ವಿದ್ಯುತ್ ಮಂಡಳಿಗಳಿಗೆ ಮಾರಾಟ ಮಾಡಿ ಆದಾಯದ ಮಾರ್ಗ ಕಂಡುಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Home loan: ಮಹಿಳೆಯರಿಗೆ ಮಾತ್ರ ಸಿಗೋ ಗೃಹ ಸಾಲ ಲಾಭಗಳ ಲಿಸ್ಟ್!
ಹಸಿರು ಶಕ್ತಿಯ ಕ್ರಾಂತಿ: ಪಿಎಂ ಸೂರ್ಯ ಘರ್ ಯೋಜನೆ ದೇಶದಲ್ಲಿ ಹಸಿರು ಶಕ್ತಿಯ ಕ್ರಾಂತಿಗೆ ಕಾರಣವಾಗುತ್ತದೆ ಮತ್ತು ಜಾಗತಿಕ ತಾಪಮಾನವನ್ನೂ ಕಡಿಮೆ ಮಾಡುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸದನದ ಗಮನ ಸೆಳೆದರು.